ಹರಿದಿದೆ ಸಿಹಿ ನೀರ ನದಿ
ನೋಡ ನೋಟದಿ ಕಣ್ಣೊಳು ತುಂಬಿ
ಬೆಂಕಿಯ ಬಿಂದುವಾಗಿ ಸುರಿಯುತಿದೆ
ಅಂದಿಗೆಗೆ...
ಪ್ರಜಾಪ್ರಭುತ್ವದಿ ಸ್ವೀಕರಿಸುವ ಸಿಹಿ
ಕನಸು ಎಲ್ಲವನ್ನು ವ್ಯಂಗ್ಯವಾಗಿ
ಒಡಲ ಕನವರಿಕೆಯನು ಹೊರಹಾಕುತ್ತಿದೆ...
ಇದು ವ್ಯವಸ್ಥೆ ಎನ್ನುವ ಅವಸ್ಥೆಯ
ಕಡಿದ ಕುಡುಗೋಲ ಬಿಗಿತ
ಸೋತಿವೆ ಮಣ್ಣಿನ ಗೋಡೆ
ಸುತ್ತಲೂ ಬಂದೂಕಿನ ಸರಹದ್ದು...
ಕಾಟಕ್ಕೆ ಅತ್ತು ಅತ್ತು ಓಡಿ ಹೋಗಿವೆ
ಮೃತ್ಯು ಎನ್ನುವ ಬರಮಾಡಿ ಕೊಳ್ಳುವ
ಜಗಕ್ಕೆ,
ಸುತ್ತಲೂ ದಿನದ ಬೆಂಕಿಯ ಅಗ್ನಿಪರೀಕ್ಷೆ
ಆದರೂ ನಗುತ್ತಿವೆಯಲ್ಲ ನೊಂದ
ಪಕ್ಷಿಗಳು…
ಚೌಕಟ್ಟಿಲ್ಲದ ಬೇಲಿಯೊಳು ಹಗಲು ರಾತ್ರಿ
ಎನ್ನದೇ ಕಾವಲಿನ ಕಿಟಕಿಯೊಳು
ಕಾಯುತ್ತಿದೆ ಒಡಲ ಕಿಚ್ಚು
ಯಾವ ಸಿದ್ಧಾಂತವ ಹತ್ತಿಕ್ಕಲಿ ಎಂದು…
ಬೆಂದ ಕನಸುಗಳು ಒಂದೊಂದಾಗಿ
ಕಳಚುತ್ತಿವೆ ಬಂದೂಕ ಮಾತ್ರೆಗೆ,
ಪ್ರೀತಿಯ ಕನವರಿಕೆ ಬರೀ ನೆಪವಾಯಿತೇ,
ತೂರಿ ಹೋಯಿತೇ
ಆಸೆಯ ಹೊನಲು
ಎತ್ತ ನೋಡಿದರೂ ಮೃತ್ಯುವಿನ ದುಡಿಯ
ಸದ್ದು
ತಿರುಗಾಟದಿ ಎಟುಕದ ದಾರಿ
ಹೇಗಿದೆಯಲ್ಲ ಜಗದ ಮರ್ಮ
ಕಟ್ಟಿಕೊಂಡ ಜಗದಿ ಬರೀ ಬೆಂಕಿಯ
ಬಲೆ ಈ ತಿರುವಿನೊಳು ಬದುಕಿ ಸತ್ತ ಹಾಗೆ.
ಡಾ. ಕೃಷ್ಣವೇಣಿ ರಾಯದುರ್ಗ
ಉಪನ್ಯಾಸಕರು
ಈ ಕವಿತೆಯನ್ನೂ ಓದಿ – ಒಂದು ಗಜಲ್


