ಅಂತ:ಕರಣದ ಅಪರೂಪದ ರಾಜಕಾರಣಿ

ಅದು 2016ರ ವರ್ಷ. ಕರ್ನಾಟಕದಲ್ಲಿ  ನಾಲ್ಕು-ಐದು ವಿಶ್ವವಿದ್ಯಾನಿಲಯಗಳ ಕುಲಪತಿಗಳ ಹುದ್ದೆ ಖಾಲಿ ಇದ್ದ ಸಂದರ್ಭ. ಸಿದ್ದರಾಮಯ್ಯನವರು ಸಮಾಜದ ಅಂಚಿನ ಸಮುದಾಯಗಳ ವಿದ್ವಾಂಸರನ್ನು ಗುರುತಿಸಿ, ಅವರನ್ನು ಕುಲಪತಿ ಹುದ್ದೆಗೆ ಆಯ್ಕೆ ಮಾಡಿದರು. ಹೀಗಾಗಿ ಹಲವರ ಬದುಕಲ್ಲಿ ಕನಸಿನ ಮಾತಾಗಿದ್ದ ಕುಲಪತಿ ಹುದ್ದೆಯು ಹಣಕಾಸಿನ ಮಾತೇ ಇಲ್ಲದೆ ಅವರ ಕೈಸೇರಿದ ಕಾಲವದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದೇ ಅವಧಿಯಲ್ಲಿ ನಾಲ್ಕು ಮಂದಿ ಮಹಿಳೆಯರು ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದು ಕೂಡ ಅವರ ಅವಧಿಯಲ್ಲಿ ಎಂಬುದೂ ಗಮನಿಸಬೇಕಾದ ಸಂಗತಿ ಸಬಿಹಾ ಭೂಮಿಗೌಡ, ವಿಶ್ರಾಂತ ಕುಲಪತಿಗಳು.

ನಾನು ರಾಜಕೀಯ ವಿಶ್ಲೇಷಕಳೂ ಅಲ್ಲ, ರಾಜಕೀಯ ವಿದ್ಯಮಾನಗಳಿಗೆ ತಕ್ಷಣಕ್ಕೆ ಪ್ರತಿಕ್ರಿಯಿಸುವವಳೂ ಅಲ್ಲ. ಆದರೆ ಓರ್ವ ನಾಗರಿಕಳಾಗಿ, ಕೆಲವು ವಿದ್ಯಮಾನಗಳನ್ನು ಹತ್ತಿರದಿಂದ ಕಂಡವಳಾಗಿ ಮತ್ತು ಬಹುಮುಖ್ಯವಾಗಿ ಸನ್ಮಾನ್ಯ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ವಿಶ್ವವಿದ್ಯಾನಿಲಯವೊಂದರ ಕುಲಪತಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದುಕೊಂಡವಳಾಗಿ ಈ ಸಂದರ್ಭದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. 

ಇವತ್ತು ನಾವು ಎಸ್ ಐ ಆರ್‌ ನ್ನು ಎದುರುಗೊಳ್ಳುತ್ತಿರುವ  ದುರಿತ ಕಾಲದಲ್ಲಿ, ಕೇಂದ್ರದ ಆಡಳಿತವು ಭ್ರಷ್ಟ ಮತ್ತು ಸಿದ್ಧಾಂತರಹಿತ ರಾಜಕಾರಣಿಗಳ ದೌರ್ಬಲ್ಯವನ್ನೇ ದಾಳವಾಗಿಸಿಕೊಂಡು ಬೇಟೆಯಾಡುವ ಮತ್ತು ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಸ್ವಾಹಾ ಮಾಡುತ್ತಿರುವ ಹೊತ್ತಲ್ಲಿ, ಸಿದ್ದರಾಮಯ್ಯನವರು ಅಧಿಕಾರವನ್ನು ಬಿಟ್ಟುಕೊಟ್ಟ ರಾಜಕೀಯ ಬೆಳವಣಿಗೆಯು ಆಘಾತಕಾರಿಯಾಗಿದೆ. ಇದು ನಾಡಿನ ಸಮಾಜವಾದಿ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯದಲ್ಲಿ ಬಲವಾದ ವಿಶ್ವಾಸವನ್ನು  ಹೊಂದಿದ್ದ ತಲೆಮಾರೊಂದು ಅಂಚಿಗೆ ಸರಿದಂತೆ ನನಗೆ ಕಾಣಿಸುತ್ತದೆ. 

ಅದು 2016ರ ವರ್ಷ. ಕರ್ನಾಟಕದಲ್ಲಿ  ನಾಲ್ಕು-ಐದು ವಿಶ್ವವಿದ್ಯಾನಿಲಯಗಳ ಕುಲಪತಿಗಳ ಹುದ್ದೆ ಖಾಲಿ ಇದ್ದ ಸಂದರ್ಭ. ಸಿದ್ದರಾಮಯ್ಯನವರು ಸಮಾಜದ ಅಂಚಿನ ಸಮುದಾಯಗಳ ವಿದ್ವಾಂಸರನ್ನು ಗುರುತಿಸಿ, ಅವರನ್ನು ಕುಲಪತಿ ಹುದ್ದೆಗೆ ಆಯ್ಕೆ ಮಾಡಿದರು. ಹೀಗಾಗಿ ಹಲವರ ಬದುಕಲ್ಲಿ ಕನಸಿನ ಮಾತಾಗಿದ್ದ ಕುಲಪತಿ ಹುದ್ದೆಯು ಹಣಕಾಸಿನ ಮಾತೇ ಇಲ್ಲದೆ ಅವರ ಕೈಸೇರಿದ ಕಾಲವದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದೇ ಅವಧಿಯಲ್ಲಿ ನಾಲ್ಕು ಮಂದಿ ಮಹಿಳೆಯರು ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದು ಕೂಡ ಅವರ ಅವಧಿಯಲ್ಲಿ ಎಂಬುದೂ ಗಮನಿಸಬೇಕಾದ ಸಂಗತಿ. ಇದೊಂದು ಅಪರೂಪದ ಐತಿಹಾಸಿಕ ಕ್ಷಣ. ಇಂಥ ವಾತಾವರಣವು ಉನ್ನತ ಶಿಕ್ಷಣ ಇಲಾಖೆಯ ಸಭೆಗಳಲ್ಲಿ ಮಹಿಳಾ ಕುಲಪತಿಗಳು ಮೈಚಳಿ ಬಿಟ್ಟು ಚರ್ಚೆಯಲ್ಲಿ ಭಾಗವಹಿಸುವ ವಾತಾವರಣವನ್ನು ನಿರ್ಮಿಸಿತು. ನನ್ನ ನಾಲ್ಕು ವರ್ಷಗಳ ಕುಲಪತಿ ಹುದ್ದೆಯ ಕಾಲಾವಧಿಯಲ್ಲಿ ಮತ್ತು ವಿಶ್ವವಿದ್ಯಾನಿಲಯದಲ್ಲಿ ನಾನು ಹಲವು ಹುದ್ದೆಗಳ ನೇಮಕಾತಿ ನಡೆಸಿದ ಸಂದರ್ಭದಲ್ಲಿಯಾಗಲಿ ಅವರ ಕಚೇರಿಯಿಂದ ಒಂದೇ ಒಂದು ಕರೆಯೋ, ಶಿಫಾರಸೋ, ಆದೇಶವೋ ನನಗೆ ಬಂದಿಲ್ಲ!  ಇದು ಹಲವರಿಗೆ ಉತ್ಪ್ರೇಕ್ಷೆಯ ಮಾತು ಎನಿಸಿದರೆ ಆಶ್ಚರ್ಯವಿಲ್ಲ. ಆದರೆ ತಾನು ಆಯ್ಕೆ ಮಾಡಿದ ವ್ಯಕ್ತಿ ಸಿದ್ಧಾಂತರಹಿತರಾದಾಗ  ಮಾತ್ರ ಅವರನ್ನು ಶಿಫಾರಸು ಮಾಡಿದವರ ಎದುರು ಮಾತ್ರವಲ್ಲದೆ, ತಮ್ಮ ಆಪ್ತರ ನಡುವೆಯೂ ಸಿದ್ದರಾಮಯ್ಯನವರು ಅಸಮಾಧಾನವನ್ನು ನಿರ್ಭಿಡೆಯಿಂದ ಹೊರ ಹಾಕಿದ್ದನ್ನು ನಾನು ಕೇಳಿಬಲ್ಲೆ .

ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಅಕ್ಕಮಹಾದೇವಿಯ ಹೆಸರನ್ನು ಇಡುವ ಸಂದರ್ಭವದು. ವೇದಿಕೆಗೆ ಮೆರವಣಿಗೆಯಲ್ಲಿ ಮುಂದೆ ಮಹಿಳಾ ಬ್ಯಾಂಡ್ ನವರು , ಆನಂತರ ಸಾಲಾಗಿ ಮುಖ್ಯಮಂತ್ರಿ ಆದಿಯಾಗಿ ಅನೇಕ ಶಾಸಕರು, ಸಂಸದರು ನಡೆಯುತ್ತಿದ್ದರು. ಪುರುಷರ ಗುಂಪಲ್ಲಿ ನೂಕು ನುಗ್ಗಲು ಅನ್ನಿಸಿ, ನಾನು ಹಿಂದೆ ಸರಿದೊಡನೆ, ಸಿದ್ದರಾಮಯ್ಯನವರು ಗಮನಿಸಿ, ಮುಂದೆ ಬನ್ನಿ ಎಂದು ಗುರುತಿಸಿ ಕರೆದದ್ದು ನನಗಂತೂ ಸೋಜಿಗದಲ್ಲಿ ಸೋಜಿಗ! ಅವರ ಸೂಕ್ಷ್ಮತೆ ಮತ್ತು ಕಾಳಜಿಯನ್ನು ನನಗೆ ಮರೆಯಲು ಸಾಧ್ಯವಿಲ್ಲ. ಕಾರ್ಯಕ್ರಮ ಮುಗಿಸಿ ಎಲ್ಲರೂ ಊಟಕ್ಕೆ ಕುಳಿತ ಹೊತ್ತಲ್ಲಿ ತಟ್ಟೆಯಲ್ಲಿ ಸಸ್ಯಾಹಾರ ಮಾತ್ರ ಇದ್ದುದನ್ನು ನೋಡಿ, “ಏನಮ್ಮ , ನಿಮ್ಮ ಮಂಗಳೂರಿನ ಮೀನು ಊಟ ಮಾಡ್ಸಿರ್ತೀಯ ಅಂದುಕೊಂಡಿದ್ದೆ. ಇದೇನು ಬರೆ ವೆಜಿಟೇರಿಯನ್ ಮಾಡಿಸಿದ್ದೀಯ?” ಎಂದು ಪ್ರಶ್ನಿಸಿದ್ದರು. ಅವರಿಗೆ ಇಷ್ಟದ ನಾಟಿ ಕೋಳಿ ಸಾರು ಮತ್ತು ರಾಗಿಮುದ್ದೆ ಒಳಗೆ ಕಾಯುತ್ತಿತ್ತು. ಅದನ್ನು ಎಲ್ಲರೆದುರು ಹೇಳಲಾಗದೆ ಸಂಕೋಚಪಡುತ್ತಿದ್ದಾಗ “ಇರಲಿ ಬಿಡು. ಇನ್ನೊಮ್ಮೆ ಮೀನು ಊಟ ಮಾಡಲು ಮನೆಗೆ ಬರ್ತೀನಂತೆ” ಎಂದು ಸಂದರ್ಭವನ್ನು ಊಹಿಸಿ ಅವರೇ ತಿಳಿಗೊಳಿಸಿದ್ದರು. ಆದರೆ ಆ ದಿನ ಇನ್ನೂ ಬಂದಿಲ್ಲ. ಅವರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಅವರ ಸುತ್ತಮುತ್ತ ಜನರು ಮುತ್ತುವುದು ಮಾತ್ರ ಕಡಿಮೆಯಾಗುವುದಿಲ್ಲ. ಸಂತೆಯೊಳಗೆ ಸಂತನಂತೆ ಅವರು ನನಗೆ ಕಂಡಿದ್ದಾರೆ. 

ದಮನಿತರ ಪರವಾದ ಸಿದ್ದರಾಮಯ್ಯನವರ ನಿಲುವಿನಂತೆ ಮಹಿಳಾ ಸಬಲೀಕರಣವು ಅವರ ಇನ್ನೊಂದು ಮುಖ್ಯ ಆಶಯ. ಶಿಕ್ಷಣ ಮಾತ್ರದಿಂದ ಅದು ಸಾಧ್ಯವಿಲ್ಲ ಎಂದು ಅರಿತ ಅವರು, ಜನರಿಗೆ ನೀಡಿದ ಪಂಚ ಗ್ಯಾರಂಟಿಗಳೇ ಅವರ ದೂರಗಾಮಿ ಯೋಚನೆಗೆ ಸಾಕ್ಷಿ. ಟಿಕೇಟ್‌ ರಹಿತ ಪ್ರಯಾಣ, ತಿಂಗಳಿಗೆ ಎರಡು ಸಾವಿರದ ಧನ ಸಹಾಯ, ಕರೆಂಟ್‌ ಬಿಲ್ಲಿನಲ್ಲಿ ಶುಲ್ಕರಹಿತತೆ ಇವುಗಳೆಲ್ಲ ಕೆಳಮಧ್ಯಮ ಮತ್ತು ಶ್ರಮಿಕ ವರ್ಗದ ಮಹಿಳೆಯರ ಬದುಕಲ್ಲಿ ಉಂಟುಮಾಡಿದ ಸಂಚಲನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಮಾಜ, ಉದ್ಯೋಗದ ಸ್ಥಳ ಮಾತ್ರವಲ್ಲದೆ ಮನೆಯೊಳಗೂ ಮಹಿಳೆಯರ ಘನತೆಯ ಬದುಕಿಗೆ ಈ ಭಾಗ್ಯಗಳು ಗಣನೀಯ ಕೊಡುಗೆಯನ್ನು ನೀಡಿರುವುದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. 

ಮೈಸೂರಿನಲ್ಲಿ ಅದೊಂದು ಚುರುಕಾದ ಚುಟುಕಾದ ಆದರೆ ಲವಲವಿಕೆಯ ಅವರ ಸಂದರ್ಶನ ನಡೆಯುತ್ತಿತ್ತು. ಸಂದರ್ಶಕರಾದ ಪ್ರಜಾವಾಣಿಯ ಶ್ರೀ ರವೀಂದ್ರ ಭಟ್ ಅವರ ಪ್ರಶ್ನೆಗಳಿಗೆ ಉತ್ತರಿಸುವಾಗ, ಕೆಲವೊಮ್ಮೆ ಅದರ ಅನಿರೀಕ್ಷಿತತೆಗೆ ಅಪ್ರತಿಭರಾದರೂ ಸಿದ್ದರಾಮಯ್ಯನವರು ಸ್ಪಂದಿಸಿದ ರೀತಿ, ಶ್ರೋತೃಗಳಾಗಿದ್ದ ಎಲ್ಲರೂ ಮನ ಬಿಚ್ಚಿ ನಗುವಂತೆ ಮಾಡಿದ್ದು, ನನ್ನ ಮನದಲ್ಲಿ ಮರೆಯಲಾಗದ ಘಟನೆಯಾಗಿದೆ. ಈಗ ಆ ಸಂದರ್ಶನವನ್ನು ಯೂಟ್ಯೂಬ್‌ ನಲ್ಲಿ ಅನೇಕರು ನೋಡಿರಬಹುದು. “ಅನ್ನ ಭಾಗ್ಯ, ಕ್ಷೀರ ಭಾಗ್ಯ ಹೀಗೆ ಹಲವು ಭಾಗ್ಯಗಳನ್ನು ಕೊಟ್ಟಿದ್ದೀರಲ್ಲ ಸರ್‌, ಆ ಭಾಗ್ಯ ಯಾರು ಸರ್” ಎಂಬ ರವೀಂದ್ರ ಭಟ್ಟರ ಕೀಟಲೆಯ ಮಾತಿಗೆ ತಾವೂ ನಗುತ್ತಾ ಸಭೆಯನ್ನೂ ತಮ್ಮ ಉತ್ತರದಿಂದ ನಗಿಸಿ, ಸಂದರ್ಶನವನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಂಡವರು ಅವರು. ಸಿದ್ದರಾಮಯ್ಯನವರು ತಮ್ಮ ಹಾಸ್ಯಪ್ರಜ್ಞೆ ಮತ್ತು ಗಂಭೀರವಾದ ಆದರೆ ಚುರುಕಾದ ಮತ್ತು ಚುಟುಕಾದ ಸಂಭಾಷಣೆಯಲ್ಲಿ ಎದುರಿಗೆ ಇರುವ ಎಲ್ಲರೂ ತಲೆತೂಗುವಂತೆ ಮಾಡುವವರು. ವಿವಿಧ ಇಲಾಖೆಗಳ ಪ್ರಗತಿಪರಿಶೀಲನಾ ಸಭೆಗಳಲ್ಲಿ ಸಿದ್ದರಾಮಯ್ಯನವರು ಸರಿಯಾಗಿ ಸಿದ್ಧತೆಯನ್ನು ಮಾಡಿಕೊಂಡು ಬಾರದ ಅಧಿಕಾರಿಗಳಿಗೆ ಬೀಸುವ ಚಾಟಿಯೇಟು ಆಡಳಿತದ ಪ್ರಾಥಮಿಕ ಹೆಜ್ಜೆಗಳನ್ನು ಕಲಿಯುವ ಎಲ್ಲರಿಗೂ ಮಾದರಿಯಾಗಿದೆ.

ಮೂಢನಂಬಿಕೆಗಳನ್ನು ತೊರೆದು ವೈಜ್ಞಾನಿಕ ಮತ್ತು ವೈಚಾರಿಕ ಮನೋಧರ್ಮಗಳನ್ನು ಬೆಳೆಸಿಕೊಳ್ಳಲು ಜನರಿಗೆ ಎಲ್ಲ ವೇದಿಕೆಗಳಲ್ಲಿ ಮತ್ತೆ ಮತ್ತೆ ಹೇಳುವ ಸಿದ್ದರಾಮಯ್ಯನವರು, ಅದನ್ನು ಸ್ವತಹ ನಂಬಿ ಆಚರಣೆಗೂ ತಂದ ಅಪರೂಪದ ರಾಜಕಾರಣಿ. ಅವರ ಕಾರಿನ ಮೇಲೆ ಕಾಗೆ ಕುಳಿತ ಪ್ರಸಂಗ, ಮಾಂಸಾಹಾರ ತಿಂದು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಆದ ವಿವಾದ, ಚಾಮರಾಜನಗರಕ್ಕೆ ಹೋದರೆ ಹುದ್ದೆ ಕೈ ಬಿಡುತ್ತದೆ ಎಂಬ ಮೌಢ್ಯಗಳಿಗೆಲ್ಲ ಅವರು ಕಾಸಿನ ಕಿಮ್ಮತ್ತೂ ನೀಡದೆ, ವೈಚಾರಿಕ ಹೆಜ್ಜೆ ಹಾಕುವಂತೆ ಇತರರಿಗೂ ಮಾದರಿಯಾದವರು. ದುರಂತವೆಂದರೆ ಅವರಂತೆ ಮೌಢ್ಯವನ್ನು ಸಾರ್ವಜನಿಕ ನೆಲೆಯಲ್ಲಿ ಮೆಟ್ಟಿನಿಂತ(ಸತೀಶ್‌ ಜಾರಕಿಹೊಳಿ ಒಬ್ಬರು ಇದಕ್ಕೆ ಅಪವಾದ) ಅವರ ಸಂಪುಟದ ಇನ್ನೊಬ್ಬ ಸಚಿವ ಅಥವಾ ಚುನಾಯಿತ ಜನನಾಯಕರು ನಮಗೆ ಕಾಣುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯ ಅವರನ್ನು ಜನರು ಮೆಚ್ಚುವುದು, ಅವರನ್ನು ಕಾಣಲು, ಅವರೊಡನೆ ಮಾತಾಡಲು ಮುಗಿಬೀಳುವುದು ಅವರ ಅಧಿಕಾರಕ್ಕಾಗಿ ಮಾತ್ರವಲ್ಲ; ಅವರ ನೇರ, ಸ್ವಚ್ಛ, ನಡೆ ಮತ್ತು ನುಡಿಗಾಗಿ. 

ಸಿದ್ದರಾಮಯ್ಯನವರ ನೆನಪಿನ ಶಕ್ತಿ ಅಗಾಧ. ರಾಜ್ಯದ ಅರ್ಥಸಚಿವರಾಗಿ ಗರಿಷ್ಠ ಬಾರಿ ಬಜೆಟ್ ಮಂಡಿಸಿರುವ ಹೆಗ್ಗಳಿಕೆ ಅವರದು. ನನಗೆ ಅಚ್ಚರಿ ತರುವ ಸಂಗತಿ ಎಂದರೆ ತಮ್ಮ ಸರಕಾರವು ಯಾವ ಯಾವ ಅವಕಾಶವಂಚಿತ ಸಮುದಾಯಗಳಿಗೆ ಎಷ್ಟು ಹಣವನ್ನು ಬಜೆಟ್‌ನಲ್ಲಿ ನಿಗದಿ ಮಾಡಿದೆ, ಪಂಚಗ್ಯಾರಂಟಿಗಳ ಸೌಲಭ್ಯವನ್ನು ಬಳಸಿಕೊಂಡವರ ಅಂಕೆಸಂಖ್ಯೆಯ ಪ್ರಮಾಣ ಎಷ್ಟು ಇತ್ಯಾದಿ ಎಲ್ಲಾ ಲೆಕ್ಕಗಳು ಅವರ ನಾಲಿಗೆಯ ತುದಿಯಲ್ಲೇ ಇರುತ್ತವೆ. ಇದು ಅಚ್ಚರಿಯೆನಿಸಿದರೂ ಯಾರೇ ಅರ್ಥಮಂತ್ರಿಯಾದರೂ ಅವರು ಇರಬೇಕಾದ ರೀತಿಗೆ ಅದು  ಮಾದರಿಯಾಗಿದೆ. ವೇದಿಕೆಗಳಲ್ಲಿ ಯಾವ ಪಕ್ಷದ ಸಹೋದ್ಯೋಗಿಯೇ ಇರಲಿ, ಅವರನ್ನು ಏಕವಚನದಿಂದ ಮಾತಾಡಿಸುವ, ಗದರುವ, ವಿನೋದ ಮಾಡುವ ಸಿದ್ದರಾಮಯ್ಯನವರ ವೈಖರಿಗೆ ಅವರ ವಯಸ್ಸು ಮಾತ್ರ ಕಾರಣ ಎನಿಸುವುದಿಲ್ಲ. ಅವರ ಮಾತಲ್ಲಿ ಅಧಿಕಾರದ ಮದ ಕಾಣುವುದಿಲ್ಲ, ಆಪ್ತತೆ, ಸಲಿಗೆ, ಸ್ನೇಹಗಳೇ ಕಾಣುತ್ತವೆ. ಅವರು ಇರುತ್ತಿದ್ದ ವೇದಿಕೆಗಳಲ್ಲಿ ಜನರ ನೂಕು ನುಗ್ಗಾಟವನ್ನು ನಿಯಂತ್ರಿಸುವುದೇ ಆಯೋಜಕರಿಗೆ ಕಷ್ಟದ ಕೆಲಸವೆನಿಸುತ್ತಿತ್ತು. ಪೊಲೀಸರು, ಅಧಿಕಾರಿಗಳು ಅದರಲ್ಲಿ ನಿಸ್ಸಹಾಯಕರಾದಾಗ,” ಏಯ್‌ ಯಾರ್ರೀ ಅದು, ನಿಂತ್ಕೊಂಡು ಗಲಾಟೆ ಮಾಡೋರು? ನೀವೇ ನೀವೇ ಕೂತ್ಕೊಳ್ರೀ…” ಎಂದು ಗುಡುಗಿದರೆ, ಎಂತಹ ದೊಡ್ಡ ಸಭೆಯೇ ಇರಲಿ ಕೆಲವೇ ಕ್ಷಣಗಳಲ್ಲಿ ಗಪ್ ಚಿಪ್‌ ಆಗುತ್ತಿದ್ದುದನ್ನು ಬೆರಗಿನಿಂದ ನೋಡಿದ್ದೇನೆ. ಹಾಗೆ ಸಿದ್ದರಾಮಯ್ಯನವರಿಂದ ಬೈಸಿಕೊಳ್ಳುತ್ತಿದ್ದವರೆಲ್ಲ ಹೆಚ್ಚಾಗಿ ಅವರ ಅಭಿಮಾನಿಗಳೇ ಆಗಿರುತ್ತಿದ್ದರು!

ಸಿದ್ದರಾಮಯ್ಯನವರದು ಒಂಟಿ ಸಲಗದಂತಹ ನಡೆ. ತಮ್ಮ ಪಕ್ಷದ ಸಿದ್ಧಾಂತ, ಜನಪರ ಕೆಲಸಗಳು, ಬಡವರ ಪರವಾದ ಯೋಜನೆಗಳು, ಹೊಸ ಹೊಸ ಯೋಜನೆಗಳು ಇತ್ಯಾದಿ ಎಲ್ಲವನ್ನು ಜನರ ಮುಂದಿಡುವಲ್ಲಿ ಅವರು ತಮಗೆ ದೊರೆತ ಅವಕಾಶವನ್ನು ಎಂದೂ ವ್ಯರ್ಥವಾಗಿ ಬಿಟ್ಟುಕೊಟ್ಟವರಲ್ಲ. ಅಷ್ಟೇಅಲ್ಲ, ಅವರ ಪಕ್ಷದ ಯೋಜನೆಯ ಕುರಿತು ಠೀಕಿಸಲೇಬೇಕೆಂಬ ಹಟದಿಂದ ವಿರೋಧಿಸುವ ಜನರಿಗೆ ಪ್ರತಿಯುತ್ತರ ಕೊಡುವಲ್ಲೂ ಅವರು ಅನೇಕ ಬಾರಿ ಒಂಟಿ ಸಲಗದಂತೆಯೇ ಕಂಡುಬಂದಿದ್ದಾರೆ. ಅವರ ಎರಡನೆಯ ಅವಧಿಯ ಮುಖ್ಯಮಂತ್ರಿ ಅವಧಿಯಲ್ಲಿ ಮೇಲಿನ ಮಾತು ಹೆಚ್ಚು ತೀಕ್ಷ್ಣವಾಗಿ ನಮ್ಮೆಲ್ಲರ ಗಮನಕ್ಕೆ ಬಂದಿದೆ. 

ತಮ್ಮ ಬದುಕಿನದ್ದಕ್ಕೂ ರೈತ ಸಂಘದ, ಸಮಾಜವಾದಿ, ಲೋಹಿಯಾವಾದಿ ಮತ್ತು ಇತರ ಜನಪರ ಸಂಘಟನೆಗಳ ಮುಖಂಡರ ಸಂಪರ್ಕವನ್ನು ಅವರು ಉಳಿಸಿಕೊಂಡು ಬಂದ ಅಪರೂಪದ ರಾಜಕಾರಣಿ. ಇಂದಿಗೂ ಅಂತಹ ನಾಯಕರ ಧ್ವನಿ ಕೇಳಿದೊಡನೆ, ಅವರ ಭೇಟಿಯಾದೊಡನೆ ಅರಳುವ ಅವರ ನಗುವಿನಲ್ಲಿರುವ ಆಪ್ತತೆ ಎಂಥವರಿಗೂ ಕಾಣುತ್ತದೆ. ಜನನಾಯಕ, ಸಮುದಾಯ ನಾಯಕ ಎಂಬುದಕ್ಕೆ ಸಿದ್ದರಾಮಯ್ಯ ಅವರೇ ನಿದರ್ಶನವಾಗಿ ಉಳಿಯುತ್ತಾರೆ.

ಸಬಿಹಾ ಭೂಮೀಗೌಡ

ವಿಶ್ರಾಂತ ಕುಲಪತಿಗಳು

ಅಕ್ಕಮಹಾದೇವಿ ವಿ ವಿ, ವಿಜಯಪುರ.

ಇದನ್ನೂ ಓದಿ- https://kannadaplanet.com/the-last-leader-of-the-socialist-movement-in-karnataka-was-shri-siddaramaiah/ ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ ಶ್ರೀ ಸಿದ್ದರಾಮಯ್ಯ

ಅದು 2016ರ ವರ್ಷ. ಕರ್ನಾಟಕದಲ್ಲಿ  ನಾಲ್ಕು-ಐದು ವಿಶ್ವವಿದ್ಯಾನಿಲಯಗಳ ಕುಲಪತಿಗಳ ಹುದ್ದೆ ಖಾಲಿ ಇದ್ದ ಸಂದರ್ಭ. ಸಿದ್ದರಾಮಯ್ಯನವರು ಸಮಾಜದ ಅಂಚಿನ ಸಮುದಾಯಗಳ ವಿದ್ವಾಂಸರನ್ನು ಗುರುತಿಸಿ, ಅವರನ್ನು ಕುಲಪತಿ ಹುದ್ದೆಗೆ ಆಯ್ಕೆ ಮಾಡಿದರು. ಹೀಗಾಗಿ ಹಲವರ ಬದುಕಲ್ಲಿ ಕನಸಿನ ಮಾತಾಗಿದ್ದ ಕುಲಪತಿ ಹುದ್ದೆಯು ಹಣಕಾಸಿನ ಮಾತೇ ಇಲ್ಲದೆ ಅವರ ಕೈಸೇರಿದ ಕಾಲವದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದೇ ಅವಧಿಯಲ್ಲಿ ನಾಲ್ಕು ಮಂದಿ ಮಹಿಳೆಯರು ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದು ಕೂಡ ಅವರ ಅವಧಿಯಲ್ಲಿ ಎಂಬುದೂ ಗಮನಿಸಬೇಕಾದ ಸಂಗತಿ ಸಬಿಹಾ ಭೂಮಿಗೌಡ, ವಿಶ್ರಾಂತ ಕುಲಪತಿಗಳು.

ನಾನು ರಾಜಕೀಯ ವಿಶ್ಲೇಷಕಳೂ ಅಲ್ಲ, ರಾಜಕೀಯ ವಿದ್ಯಮಾನಗಳಿಗೆ ತಕ್ಷಣಕ್ಕೆ ಪ್ರತಿಕ್ರಿಯಿಸುವವಳೂ ಅಲ್ಲ. ಆದರೆ ಓರ್ವ ನಾಗರಿಕಳಾಗಿ, ಕೆಲವು ವಿದ್ಯಮಾನಗಳನ್ನು ಹತ್ತಿರದಿಂದ ಕಂಡವಳಾಗಿ ಮತ್ತು ಬಹುಮುಖ್ಯವಾಗಿ ಸನ್ಮಾನ್ಯ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ವಿಶ್ವವಿದ್ಯಾನಿಲಯವೊಂದರ ಕುಲಪತಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದುಕೊಂಡವಳಾಗಿ ಈ ಸಂದರ್ಭದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. 

ಇವತ್ತು ನಾವು ಎಸ್ ಐ ಆರ್‌ ನ್ನು ಎದುರುಗೊಳ್ಳುತ್ತಿರುವ  ದುರಿತ ಕಾಲದಲ್ಲಿ, ಕೇಂದ್ರದ ಆಡಳಿತವು ಭ್ರಷ್ಟ ಮತ್ತು ಸಿದ್ಧಾಂತರಹಿತ ರಾಜಕಾರಣಿಗಳ ದೌರ್ಬಲ್ಯವನ್ನೇ ದಾಳವಾಗಿಸಿಕೊಂಡು ಬೇಟೆಯಾಡುವ ಮತ್ತು ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಸ್ವಾಹಾ ಮಾಡುತ್ತಿರುವ ಹೊತ್ತಲ್ಲಿ, ಸಿದ್ದರಾಮಯ್ಯನವರು ಅಧಿಕಾರವನ್ನು ಬಿಟ್ಟುಕೊಟ್ಟ ರಾಜಕೀಯ ಬೆಳವಣಿಗೆಯು ಆಘಾತಕಾರಿಯಾಗಿದೆ. ಇದು ನಾಡಿನ ಸಮಾಜವಾದಿ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯದಲ್ಲಿ ಬಲವಾದ ವಿಶ್ವಾಸವನ್ನು  ಹೊಂದಿದ್ದ ತಲೆಮಾರೊಂದು ಅಂಚಿಗೆ ಸರಿದಂತೆ ನನಗೆ ಕಾಣಿಸುತ್ತದೆ. 

ಅದು 2016ರ ವರ್ಷ. ಕರ್ನಾಟಕದಲ್ಲಿ  ನಾಲ್ಕು-ಐದು ವಿಶ್ವವಿದ್ಯಾನಿಲಯಗಳ ಕುಲಪತಿಗಳ ಹುದ್ದೆ ಖಾಲಿ ಇದ್ದ ಸಂದರ್ಭ. ಸಿದ್ದರಾಮಯ್ಯನವರು ಸಮಾಜದ ಅಂಚಿನ ಸಮುದಾಯಗಳ ವಿದ್ವಾಂಸರನ್ನು ಗುರುತಿಸಿ, ಅವರನ್ನು ಕುಲಪತಿ ಹುದ್ದೆಗೆ ಆಯ್ಕೆ ಮಾಡಿದರು. ಹೀಗಾಗಿ ಹಲವರ ಬದುಕಲ್ಲಿ ಕನಸಿನ ಮಾತಾಗಿದ್ದ ಕುಲಪತಿ ಹುದ್ದೆಯು ಹಣಕಾಸಿನ ಮಾತೇ ಇಲ್ಲದೆ ಅವರ ಕೈಸೇರಿದ ಕಾಲವದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದೇ ಅವಧಿಯಲ್ಲಿ ನಾಲ್ಕು ಮಂದಿ ಮಹಿಳೆಯರು ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದು ಕೂಡ ಅವರ ಅವಧಿಯಲ್ಲಿ ಎಂಬುದೂ ಗಮನಿಸಬೇಕಾದ ಸಂಗತಿ. ಇದೊಂದು ಅಪರೂಪದ ಐತಿಹಾಸಿಕ ಕ್ಷಣ. ಇಂಥ ವಾತಾವರಣವು ಉನ್ನತ ಶಿಕ್ಷಣ ಇಲಾಖೆಯ ಸಭೆಗಳಲ್ಲಿ ಮಹಿಳಾ ಕುಲಪತಿಗಳು ಮೈಚಳಿ ಬಿಟ್ಟು ಚರ್ಚೆಯಲ್ಲಿ ಭಾಗವಹಿಸುವ ವಾತಾವರಣವನ್ನು ನಿರ್ಮಿಸಿತು. ನನ್ನ ನಾಲ್ಕು ವರ್ಷಗಳ ಕುಲಪತಿ ಹುದ್ದೆಯ ಕಾಲಾವಧಿಯಲ್ಲಿ ಮತ್ತು ವಿಶ್ವವಿದ್ಯಾನಿಲಯದಲ್ಲಿ ನಾನು ಹಲವು ಹುದ್ದೆಗಳ ನೇಮಕಾತಿ ನಡೆಸಿದ ಸಂದರ್ಭದಲ್ಲಿಯಾಗಲಿ ಅವರ ಕಚೇರಿಯಿಂದ ಒಂದೇ ಒಂದು ಕರೆಯೋ, ಶಿಫಾರಸೋ, ಆದೇಶವೋ ನನಗೆ ಬಂದಿಲ್ಲ!  ಇದು ಹಲವರಿಗೆ ಉತ್ಪ್ರೇಕ್ಷೆಯ ಮಾತು ಎನಿಸಿದರೆ ಆಶ್ಚರ್ಯವಿಲ್ಲ. ಆದರೆ ತಾನು ಆಯ್ಕೆ ಮಾಡಿದ ವ್ಯಕ್ತಿ ಸಿದ್ಧಾಂತರಹಿತರಾದಾಗ  ಮಾತ್ರ ಅವರನ್ನು ಶಿಫಾರಸು ಮಾಡಿದವರ ಎದುರು ಮಾತ್ರವಲ್ಲದೆ, ತಮ್ಮ ಆಪ್ತರ ನಡುವೆಯೂ ಸಿದ್ದರಾಮಯ್ಯನವರು ಅಸಮಾಧಾನವನ್ನು ನಿರ್ಭಿಡೆಯಿಂದ ಹೊರ ಹಾಕಿದ್ದನ್ನು ನಾನು ಕೇಳಿಬಲ್ಲೆ .

ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಅಕ್ಕಮಹಾದೇವಿಯ ಹೆಸರನ್ನು ಇಡುವ ಸಂದರ್ಭವದು. ವೇದಿಕೆಗೆ ಮೆರವಣಿಗೆಯಲ್ಲಿ ಮುಂದೆ ಮಹಿಳಾ ಬ್ಯಾಂಡ್ ನವರು , ಆನಂತರ ಸಾಲಾಗಿ ಮುಖ್ಯಮಂತ್ರಿ ಆದಿಯಾಗಿ ಅನೇಕ ಶಾಸಕರು, ಸಂಸದರು ನಡೆಯುತ್ತಿದ್ದರು. ಪುರುಷರ ಗುಂಪಲ್ಲಿ ನೂಕು ನುಗ್ಗಲು ಅನ್ನಿಸಿ, ನಾನು ಹಿಂದೆ ಸರಿದೊಡನೆ, ಸಿದ್ದರಾಮಯ್ಯನವರು ಗಮನಿಸಿ, ಮುಂದೆ ಬನ್ನಿ ಎಂದು ಗುರುತಿಸಿ ಕರೆದದ್ದು ನನಗಂತೂ ಸೋಜಿಗದಲ್ಲಿ ಸೋಜಿಗ! ಅವರ ಸೂಕ್ಷ್ಮತೆ ಮತ್ತು ಕಾಳಜಿಯನ್ನು ನನಗೆ ಮರೆಯಲು ಸಾಧ್ಯವಿಲ್ಲ. ಕಾರ್ಯಕ್ರಮ ಮುಗಿಸಿ ಎಲ್ಲರೂ ಊಟಕ್ಕೆ ಕುಳಿತ ಹೊತ್ತಲ್ಲಿ ತಟ್ಟೆಯಲ್ಲಿ ಸಸ್ಯಾಹಾರ ಮಾತ್ರ ಇದ್ದುದನ್ನು ನೋಡಿ, “ಏನಮ್ಮ , ನಿಮ್ಮ ಮಂಗಳೂರಿನ ಮೀನು ಊಟ ಮಾಡ್ಸಿರ್ತೀಯ ಅಂದುಕೊಂಡಿದ್ದೆ. ಇದೇನು ಬರೆ ವೆಜಿಟೇರಿಯನ್ ಮಾಡಿಸಿದ್ದೀಯ?” ಎಂದು ಪ್ರಶ್ನಿಸಿದ್ದರು. ಅವರಿಗೆ ಇಷ್ಟದ ನಾಟಿ ಕೋಳಿ ಸಾರು ಮತ್ತು ರಾಗಿಮುದ್ದೆ ಒಳಗೆ ಕಾಯುತ್ತಿತ್ತು. ಅದನ್ನು ಎಲ್ಲರೆದುರು ಹೇಳಲಾಗದೆ ಸಂಕೋಚಪಡುತ್ತಿದ್ದಾಗ “ಇರಲಿ ಬಿಡು. ಇನ್ನೊಮ್ಮೆ ಮೀನು ಊಟ ಮಾಡಲು ಮನೆಗೆ ಬರ್ತೀನಂತೆ” ಎಂದು ಸಂದರ್ಭವನ್ನು ಊಹಿಸಿ ಅವರೇ ತಿಳಿಗೊಳಿಸಿದ್ದರು. ಆದರೆ ಆ ದಿನ ಇನ್ನೂ ಬಂದಿಲ್ಲ. ಅವರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಅವರ ಸುತ್ತಮುತ್ತ ಜನರು ಮುತ್ತುವುದು ಮಾತ್ರ ಕಡಿಮೆಯಾಗುವುದಿಲ್ಲ. ಸಂತೆಯೊಳಗೆ ಸಂತನಂತೆ ಅವರು ನನಗೆ ಕಂಡಿದ್ದಾರೆ. 

ದಮನಿತರ ಪರವಾದ ಸಿದ್ದರಾಮಯ್ಯನವರ ನಿಲುವಿನಂತೆ ಮಹಿಳಾ ಸಬಲೀಕರಣವು ಅವರ ಇನ್ನೊಂದು ಮುಖ್ಯ ಆಶಯ. ಶಿಕ್ಷಣ ಮಾತ್ರದಿಂದ ಅದು ಸಾಧ್ಯವಿಲ್ಲ ಎಂದು ಅರಿತ ಅವರು, ಜನರಿಗೆ ನೀಡಿದ ಪಂಚ ಗ್ಯಾರಂಟಿಗಳೇ ಅವರ ದೂರಗಾಮಿ ಯೋಚನೆಗೆ ಸಾಕ್ಷಿ. ಟಿಕೇಟ್‌ ರಹಿತ ಪ್ರಯಾಣ, ತಿಂಗಳಿಗೆ ಎರಡು ಸಾವಿರದ ಧನ ಸಹಾಯ, ಕರೆಂಟ್‌ ಬಿಲ್ಲಿನಲ್ಲಿ ಶುಲ್ಕರಹಿತತೆ ಇವುಗಳೆಲ್ಲ ಕೆಳಮಧ್ಯಮ ಮತ್ತು ಶ್ರಮಿಕ ವರ್ಗದ ಮಹಿಳೆಯರ ಬದುಕಲ್ಲಿ ಉಂಟುಮಾಡಿದ ಸಂಚಲನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಮಾಜ, ಉದ್ಯೋಗದ ಸ್ಥಳ ಮಾತ್ರವಲ್ಲದೆ ಮನೆಯೊಳಗೂ ಮಹಿಳೆಯರ ಘನತೆಯ ಬದುಕಿಗೆ ಈ ಭಾಗ್ಯಗಳು ಗಣನೀಯ ಕೊಡುಗೆಯನ್ನು ನೀಡಿರುವುದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. 

ಮೈಸೂರಿನಲ್ಲಿ ಅದೊಂದು ಚುರುಕಾದ ಚುಟುಕಾದ ಆದರೆ ಲವಲವಿಕೆಯ ಅವರ ಸಂದರ್ಶನ ನಡೆಯುತ್ತಿತ್ತು. ಸಂದರ್ಶಕರಾದ ಪ್ರಜಾವಾಣಿಯ ಶ್ರೀ ರವೀಂದ್ರ ಭಟ್ ಅವರ ಪ್ರಶ್ನೆಗಳಿಗೆ ಉತ್ತರಿಸುವಾಗ, ಕೆಲವೊಮ್ಮೆ ಅದರ ಅನಿರೀಕ್ಷಿತತೆಗೆ ಅಪ್ರತಿಭರಾದರೂ ಸಿದ್ದರಾಮಯ್ಯನವರು ಸ್ಪಂದಿಸಿದ ರೀತಿ, ಶ್ರೋತೃಗಳಾಗಿದ್ದ ಎಲ್ಲರೂ ಮನ ಬಿಚ್ಚಿ ನಗುವಂತೆ ಮಾಡಿದ್ದು, ನನ್ನ ಮನದಲ್ಲಿ ಮರೆಯಲಾಗದ ಘಟನೆಯಾಗಿದೆ. ಈಗ ಆ ಸಂದರ್ಶನವನ್ನು ಯೂಟ್ಯೂಬ್‌ ನಲ್ಲಿ ಅನೇಕರು ನೋಡಿರಬಹುದು. “ಅನ್ನ ಭಾಗ್ಯ, ಕ್ಷೀರ ಭಾಗ್ಯ ಹೀಗೆ ಹಲವು ಭಾಗ್ಯಗಳನ್ನು ಕೊಟ್ಟಿದ್ದೀರಲ್ಲ ಸರ್‌, ಆ ಭಾಗ್ಯ ಯಾರು ಸರ್” ಎಂಬ ರವೀಂದ್ರ ಭಟ್ಟರ ಕೀಟಲೆಯ ಮಾತಿಗೆ ತಾವೂ ನಗುತ್ತಾ ಸಭೆಯನ್ನೂ ತಮ್ಮ ಉತ್ತರದಿಂದ ನಗಿಸಿ, ಸಂದರ್ಶನವನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಂಡವರು ಅವರು. ಸಿದ್ದರಾಮಯ್ಯನವರು ತಮ್ಮ ಹಾಸ್ಯಪ್ರಜ್ಞೆ ಮತ್ತು ಗಂಭೀರವಾದ ಆದರೆ ಚುರುಕಾದ ಮತ್ತು ಚುಟುಕಾದ ಸಂಭಾಷಣೆಯಲ್ಲಿ ಎದುರಿಗೆ ಇರುವ ಎಲ್ಲರೂ ತಲೆತೂಗುವಂತೆ ಮಾಡುವವರು. ವಿವಿಧ ಇಲಾಖೆಗಳ ಪ್ರಗತಿಪರಿಶೀಲನಾ ಸಭೆಗಳಲ್ಲಿ ಸಿದ್ದರಾಮಯ್ಯನವರು ಸರಿಯಾಗಿ ಸಿದ್ಧತೆಯನ್ನು ಮಾಡಿಕೊಂಡು ಬಾರದ ಅಧಿಕಾರಿಗಳಿಗೆ ಬೀಸುವ ಚಾಟಿಯೇಟು ಆಡಳಿತದ ಪ್ರಾಥಮಿಕ ಹೆಜ್ಜೆಗಳನ್ನು ಕಲಿಯುವ ಎಲ್ಲರಿಗೂ ಮಾದರಿಯಾಗಿದೆ.

ಮೂಢನಂಬಿಕೆಗಳನ್ನು ತೊರೆದು ವೈಜ್ಞಾನಿಕ ಮತ್ತು ವೈಚಾರಿಕ ಮನೋಧರ್ಮಗಳನ್ನು ಬೆಳೆಸಿಕೊಳ್ಳಲು ಜನರಿಗೆ ಎಲ್ಲ ವೇದಿಕೆಗಳಲ್ಲಿ ಮತ್ತೆ ಮತ್ತೆ ಹೇಳುವ ಸಿದ್ದರಾಮಯ್ಯನವರು, ಅದನ್ನು ಸ್ವತಹ ನಂಬಿ ಆಚರಣೆಗೂ ತಂದ ಅಪರೂಪದ ರಾಜಕಾರಣಿ. ಅವರ ಕಾರಿನ ಮೇಲೆ ಕಾಗೆ ಕುಳಿತ ಪ್ರಸಂಗ, ಮಾಂಸಾಹಾರ ತಿಂದು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಆದ ವಿವಾದ, ಚಾಮರಾಜನಗರಕ್ಕೆ ಹೋದರೆ ಹುದ್ದೆ ಕೈ ಬಿಡುತ್ತದೆ ಎಂಬ ಮೌಢ್ಯಗಳಿಗೆಲ್ಲ ಅವರು ಕಾಸಿನ ಕಿಮ್ಮತ್ತೂ ನೀಡದೆ, ವೈಚಾರಿಕ ಹೆಜ್ಜೆ ಹಾಕುವಂತೆ ಇತರರಿಗೂ ಮಾದರಿಯಾದವರು. ದುರಂತವೆಂದರೆ ಅವರಂತೆ ಮೌಢ್ಯವನ್ನು ಸಾರ್ವಜನಿಕ ನೆಲೆಯಲ್ಲಿ ಮೆಟ್ಟಿನಿಂತ(ಸತೀಶ್‌ ಜಾರಕಿಹೊಳಿ ಒಬ್ಬರು ಇದಕ್ಕೆ ಅಪವಾದ) ಅವರ ಸಂಪುಟದ ಇನ್ನೊಬ್ಬ ಸಚಿವ ಅಥವಾ ಚುನಾಯಿತ ಜನನಾಯಕರು ನಮಗೆ ಕಾಣುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯ ಅವರನ್ನು ಜನರು ಮೆಚ್ಚುವುದು, ಅವರನ್ನು ಕಾಣಲು, ಅವರೊಡನೆ ಮಾತಾಡಲು ಮುಗಿಬೀಳುವುದು ಅವರ ಅಧಿಕಾರಕ್ಕಾಗಿ ಮಾತ್ರವಲ್ಲ; ಅವರ ನೇರ, ಸ್ವಚ್ಛ, ನಡೆ ಮತ್ತು ನುಡಿಗಾಗಿ. 

ಸಿದ್ದರಾಮಯ್ಯನವರ ನೆನಪಿನ ಶಕ್ತಿ ಅಗಾಧ. ರಾಜ್ಯದ ಅರ್ಥಸಚಿವರಾಗಿ ಗರಿಷ್ಠ ಬಾರಿ ಬಜೆಟ್ ಮಂಡಿಸಿರುವ ಹೆಗ್ಗಳಿಕೆ ಅವರದು. ನನಗೆ ಅಚ್ಚರಿ ತರುವ ಸಂಗತಿ ಎಂದರೆ ತಮ್ಮ ಸರಕಾರವು ಯಾವ ಯಾವ ಅವಕಾಶವಂಚಿತ ಸಮುದಾಯಗಳಿಗೆ ಎಷ್ಟು ಹಣವನ್ನು ಬಜೆಟ್‌ನಲ್ಲಿ ನಿಗದಿ ಮಾಡಿದೆ, ಪಂಚಗ್ಯಾರಂಟಿಗಳ ಸೌಲಭ್ಯವನ್ನು ಬಳಸಿಕೊಂಡವರ ಅಂಕೆಸಂಖ್ಯೆಯ ಪ್ರಮಾಣ ಎಷ್ಟು ಇತ್ಯಾದಿ ಎಲ್ಲಾ ಲೆಕ್ಕಗಳು ಅವರ ನಾಲಿಗೆಯ ತುದಿಯಲ್ಲೇ ಇರುತ್ತವೆ. ಇದು ಅಚ್ಚರಿಯೆನಿಸಿದರೂ ಯಾರೇ ಅರ್ಥಮಂತ್ರಿಯಾದರೂ ಅವರು ಇರಬೇಕಾದ ರೀತಿಗೆ ಅದು  ಮಾದರಿಯಾಗಿದೆ. ವೇದಿಕೆಗಳಲ್ಲಿ ಯಾವ ಪಕ್ಷದ ಸಹೋದ್ಯೋಗಿಯೇ ಇರಲಿ, ಅವರನ್ನು ಏಕವಚನದಿಂದ ಮಾತಾಡಿಸುವ, ಗದರುವ, ವಿನೋದ ಮಾಡುವ ಸಿದ್ದರಾಮಯ್ಯನವರ ವೈಖರಿಗೆ ಅವರ ವಯಸ್ಸು ಮಾತ್ರ ಕಾರಣ ಎನಿಸುವುದಿಲ್ಲ. ಅವರ ಮಾತಲ್ಲಿ ಅಧಿಕಾರದ ಮದ ಕಾಣುವುದಿಲ್ಲ, ಆಪ್ತತೆ, ಸಲಿಗೆ, ಸ್ನೇಹಗಳೇ ಕಾಣುತ್ತವೆ. ಅವರು ಇರುತ್ತಿದ್ದ ವೇದಿಕೆಗಳಲ್ಲಿ ಜನರ ನೂಕು ನುಗ್ಗಾಟವನ್ನು ನಿಯಂತ್ರಿಸುವುದೇ ಆಯೋಜಕರಿಗೆ ಕಷ್ಟದ ಕೆಲಸವೆನಿಸುತ್ತಿತ್ತು. ಪೊಲೀಸರು, ಅಧಿಕಾರಿಗಳು ಅದರಲ್ಲಿ ನಿಸ್ಸಹಾಯಕರಾದಾಗ,” ಏಯ್‌ ಯಾರ್ರೀ ಅದು, ನಿಂತ್ಕೊಂಡು ಗಲಾಟೆ ಮಾಡೋರು? ನೀವೇ ನೀವೇ ಕೂತ್ಕೊಳ್ರೀ…” ಎಂದು ಗುಡುಗಿದರೆ, ಎಂತಹ ದೊಡ್ಡ ಸಭೆಯೇ ಇರಲಿ ಕೆಲವೇ ಕ್ಷಣಗಳಲ್ಲಿ ಗಪ್ ಚಿಪ್‌ ಆಗುತ್ತಿದ್ದುದನ್ನು ಬೆರಗಿನಿಂದ ನೋಡಿದ್ದೇನೆ. ಹಾಗೆ ಸಿದ್ದರಾಮಯ್ಯನವರಿಂದ ಬೈಸಿಕೊಳ್ಳುತ್ತಿದ್ದವರೆಲ್ಲ ಹೆಚ್ಚಾಗಿ ಅವರ ಅಭಿಮಾನಿಗಳೇ ಆಗಿರುತ್ತಿದ್ದರು!

ಸಿದ್ದರಾಮಯ್ಯನವರದು ಒಂಟಿ ಸಲಗದಂತಹ ನಡೆ. ತಮ್ಮ ಪಕ್ಷದ ಸಿದ್ಧಾಂತ, ಜನಪರ ಕೆಲಸಗಳು, ಬಡವರ ಪರವಾದ ಯೋಜನೆಗಳು, ಹೊಸ ಹೊಸ ಯೋಜನೆಗಳು ಇತ್ಯಾದಿ ಎಲ್ಲವನ್ನು ಜನರ ಮುಂದಿಡುವಲ್ಲಿ ಅವರು ತಮಗೆ ದೊರೆತ ಅವಕಾಶವನ್ನು ಎಂದೂ ವ್ಯರ್ಥವಾಗಿ ಬಿಟ್ಟುಕೊಟ್ಟವರಲ್ಲ. ಅಷ್ಟೇಅಲ್ಲ, ಅವರ ಪಕ್ಷದ ಯೋಜನೆಯ ಕುರಿತು ಠೀಕಿಸಲೇಬೇಕೆಂಬ ಹಟದಿಂದ ವಿರೋಧಿಸುವ ಜನರಿಗೆ ಪ್ರತಿಯುತ್ತರ ಕೊಡುವಲ್ಲೂ ಅವರು ಅನೇಕ ಬಾರಿ ಒಂಟಿ ಸಲಗದಂತೆಯೇ ಕಂಡುಬಂದಿದ್ದಾರೆ. ಅವರ ಎರಡನೆಯ ಅವಧಿಯ ಮುಖ್ಯಮಂತ್ರಿ ಅವಧಿಯಲ್ಲಿ ಮೇಲಿನ ಮಾತು ಹೆಚ್ಚು ತೀಕ್ಷ್ಣವಾಗಿ ನಮ್ಮೆಲ್ಲರ ಗಮನಕ್ಕೆ ಬಂದಿದೆ. 

ತಮ್ಮ ಬದುಕಿನದ್ದಕ್ಕೂ ರೈತ ಸಂಘದ, ಸಮಾಜವಾದಿ, ಲೋಹಿಯಾವಾದಿ ಮತ್ತು ಇತರ ಜನಪರ ಸಂಘಟನೆಗಳ ಮುಖಂಡರ ಸಂಪರ್ಕವನ್ನು ಅವರು ಉಳಿಸಿಕೊಂಡು ಬಂದ ಅಪರೂಪದ ರಾಜಕಾರಣಿ. ಇಂದಿಗೂ ಅಂತಹ ನಾಯಕರ ಧ್ವನಿ ಕೇಳಿದೊಡನೆ, ಅವರ ಭೇಟಿಯಾದೊಡನೆ ಅರಳುವ ಅವರ ನಗುವಿನಲ್ಲಿರುವ ಆಪ್ತತೆ ಎಂಥವರಿಗೂ ಕಾಣುತ್ತದೆ. ಜನನಾಯಕ, ಸಮುದಾಯ ನಾಯಕ ಎಂಬುದಕ್ಕೆ ಸಿದ್ದರಾಮಯ್ಯ ಅವರೇ ನಿದರ್ಶನವಾಗಿ ಉಳಿಯುತ್ತಾರೆ.

ಸಬಿಹಾ ಭೂಮೀಗೌಡ

ವಿಶ್ರಾಂತ ಕುಲಪತಿಗಳು

ಅಕ್ಕಮಹಾದೇವಿ ವಿ ವಿ, ವಿಜಯಪುರ.

ಇದನ್ನೂ ಓದಿ- https://kannadaplanet.com/the-last-leader-of-the-socialist-movement-in-karnataka-was-shri-siddaramaiah/ ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ ಶ್ರೀ ಸಿದ್ದರಾಮಯ್ಯ

More articles

Latest article

Most read