ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟದ ಹದಿಮೂರನೆಯ ಸಮಾವೇಶವು ಹೊಸಪೇಟೆಯಲ್ಲಿ ಮಾರ್ಚ್ 7 ಮತ್ತು8ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ಕುರಿತು ಅವಲೋಕನವಿದು. ಒಕ್ಕೂಟದ ಸಕ್ರಿಯ ಸದಸ್ಯೆ ಹಾಗೂ ವಿಜಯಪುರದ ಅಕ್ಕಮಹಾದೇವಿ ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಸಬಿಹಾ ಭೂಮೀಗೌಡರು ಒಕ್ಕೂಟ ನಡೆದು ಬಂದ ಹಾದಿಯನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಒಕ್ಕೂಟದ ಆರಂಭವು ಸಮಕಾಲೀನ ಸಮಾಜದ ಮಹಿಳಾ ವಿರೋಧೀ ಚಟುವಟಿಕೆಗಳಿಗೆ ಪ್ರತಿಕ್ರಿಯೆ ರೂಪವಾಗಿ ಹುಟ್ಟಿಕೊಂಡಿತು. 2012ರ ಪೂರ್ವದಲ್ಲೇ ಮಂಗಳೂರಿನ ಹೋಂಸ್ಟೇ ಒಂದರಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ-ಯುವತಿಯರ ಗುಂಪಿನ ಮೇಲೆ ಹಿಂದುತ್ವವಾದಿ ಪುಂಡರ ಗುಂಪಿನವರು ಧಾಳಿ ಮಾಡಿ, ಯುವತಿಯರ ಮೇಲೆ ದೈಹಿಕ ಹಲ್ಲೆ ನಡೆಸಿದರು. 2012ರ ಡಿಸೆಂಬರ್ ಕೊನೆಯಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವು ನಮ್ಮೆಲ್ಲರ ಸಹನೆಯ ಕಟ್ಟೆಯನ್ನು ಒಡೆದು, ಬಡಿದೆಬ್ಬಿಸಿತು.
ಆಗ ಪ್ರತಿರೋಧದ ನೆಲೆಯಲ್ಲಿ ಹುಟ್ಟಿಕೊಂಡದ್ದೇ ‘ಮಹಿಳಾ ದೌರ್ಜನ್ಯ ವಿರೋಧೀ ವೇದಿಕೆ’. ಹೋಂಸ್ಟೇ ಘಟನೆಯ ಸತ್ಯಶೋಧನೆ ನಡೆಸುವುದು, ಸಾಮಾಜಿಕರ ಪ್ರಜ್ಞೆಯನ್ನು ಜಾಗೃತಗೊಳಿಸುವುದು ವೇದಿಕೆಯ ಮುಖ್ಯ ಉದ್ದೇಶವಾಗಿತ್ತು. ಸ್ಥಳೀಯ ಮಹಿಳಾ ಮತ್ತು ಮಹಿಳಾಪರ ಸಂಘಟನೆಗಳ ಈ ಕೆಲಸಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳ ಸಮಾನಮನಸ್ಕ ಗೆಳತಿಯರು ಮತ್ತು ಸಂಘಟನೆಗಳು ಸ್ಪಂದಿಸಿ ಕೈಜೋಡಿಸಿ, ಅವರ ಪ್ರತಿರೋಧದ ಕನಸಿಗೆ ನೀರೆರೆದರು. ಅದರ ಫಲವಾಗಿ 2013ರ ಮಾರ್ಚ್ 7-8 ಬೃಹತ್ ನೆಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಆಗ ‘ಮಹಿಳಾ ದೌರ್ಜನ್ಯ ವಿರೋಧೀ ವೇದಿಕೆ’ಯನ್ನು ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ’ವೆಂದು ವಿಸ್ತರಿಸಲಾಯಿತು.
ಕರ್ನಾಟಕದ ಎಲ್ಲ ಸಮಾನಮನಸ್ಕ ಸಂಘಟನೆಗಳು ಒಗ್ಗೂಡಿ, ಪ್ರತಿರೋಧದ ಗಟ್ಟಿ ದನಿಯಾಗಿ ರೂಪುಗೊಳ್ಳುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಆರಂಭದಿಂದಲೇ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಮೂರು ನೆಲೆಗಳಲ್ಲಿ ಯೋಜಿಸಲಾಯಿತು. ಯುವಜನತೆಯನ್ನು ತಲುಪಲು ಒಂದು ದಿನದ ವಿಚಾರಸಂಕಿರಣದ ಆಯೋಜನೆ, ʼಕಪ್ಪು ಉಡುಗೆಯಲ್ಲಿ ಮಹಿಳೆಯರುʼ ಸಾರ್ವಜನಿಕ ಜಾಗದಲ್ಲಿ ಮೌನವಾಗಿ ನಿಂತು ಪ್ರತಿಭಟನೆ ನಡೆಸುವ, ಮಹಿಳೆಯರು ಯುದ್ಧ ವಿರೋಧಿಗಳು ಮತ್ತು ಶಾಂತಿಪ್ರಿಯರೆಂದು ಸಾರುವ ಕಾರ್ಯಕ್ರಮ ಹಾಗೂ ಎಲ್ಲ ಸಮಾನಮನಸ್ಕ ಸಂಘಟನೆಗಳು, ಯುವ ಸಮೂಹ, ವಿದ್ಯಾರ್ಥಿಗಳು, ನಾಗರೀಕರನ್ನು ಒಳಗೊಂಡ ಬೃಹತ್ ಸಾರ್ವಜನಿಕ ಸಮಾವೇಶವನ್ನು ಆಯೋಜಿಸುವುದು 2013ರಿಂದ ತಪ್ಪದೆ ನಡೆದುಕೊಂಡು ಬಂದಿದೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ ಎನ್ನುವುದು ಒಂದು ಸಂಘವಲ್ಲ; ಸಂಘಟನೆಯಲ್ಲ; ಇದಕ್ಕೆ ಪದಾಧಿಕಾರಿಗಳೂ ಇಲ್ಲ. ಇದು ಸಮಾನಮನಸ್ಕ ಜನರ ಮತ್ತು ಸಂಘಟನೆಗಳ ಒಂದು ಜಾಲ. ಪ್ರಜಾಸತ್ತಾತ್ಮಕವಾಗಿ ನಿರ್ಣಯಗಳನ್ನು ಕೈಗೊಂಡು, ಒಕ್ಕೂಟವು ಕಾರ್ಯ ನಿರ್ವಹಿಸುತ್ತಿದೆ. ಒಕ್ಕೂಟ ತನ್ನದೇ ಆದ ಸಂವಿಧಾನವನ್ನೂ ರಚಿಸಿಕೊಂಡಿದೆ. ಪ್ರತಿಬಾರಿ ಜನರಿಂದ ದೇಣಿಗೆ ಸಂಗ್ರಹಿಸಿ, ಕಾರ್ಯಕ್ರಮವಾದ ಕೆಲವೇ ದಿನಗಳಲ್ಲಿ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸಲಾಗುತ್ತದೆ. ಜೀವವಿರೋಧೀ ವ್ಯಕ್ತಿ, ಸಂಘಟನೆ, ಶಕ್ತಿಗಳಿಂದ ಹಣ ಸ್ವೀಕರಿಸದಿರುವುದು, ಕೊಡುವವರಿದ್ದಾರೆಂದು ನಿಗದಿತ ಮೊತ್ತಕ್ಕಿಂತ ಹೆಚ್ಚು ದೇಣಿಗೆ ಒಬ್ಬರಿಂದ ಪಡೆಯದಿರುವುದು ಒಕ್ಕೂಟದ ಮುಖ್ಯ ನಿಯಮವಾಗಿದೆ. ಸಂದರ್ಭ- ಸನ್ನಿವೇಶಗಳಿಗೆ ಅನುಗುಣವಾಗಿ ಒಕ್ಕೂಟದ ಆದ್ಯತೆಗಳು, ಕಾರ್ಯಸ್ವರೂಪಗಳು ನಿರ್ಧರಿತವಾಗುತ್ತವೆ.
ಸುಮಾರು 150ಕ್ಕೂ ಹೆಚ್ಚು ಕರ್ನಾಟಕದ ಪ್ರಗತಿಪರ, ಜೀವಪರ, ಮಹಿಳಾಪರ ಮತ್ತು ಮಹಿಳೆಯರ ಸಂಘಗಳು ಒಕ್ಕೂಟದ ಜೊತೆ ಕೈಜೋಡಿಸಿವೆ. ದಲಿತ-ದಮನಿತರ ಸಂಘಟನೆಗಳು, ಎಡಪಂಥೀಯ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು, ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರ, ಪೌರಕಾರ್ಮಿಕರ ಸಂಘಟನೆಗಳು, ಗಾರ್ಮೆಂಟ್ಸ್, ಮನೆಕೆಲಸದ ಕಾರ್ಮಿಕ ಸಂಘಟನೆಗಳು, ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಗಳು ಒಕ್ಕೂಟದ ಸಹಭಾಗಿಗಳಾಗಿದ್ದಾರೆ. ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು, ಅಕಾಡೆಮಿಕ್ ವಲಯದವರೂ ಒಕ್ಕೂಟದೊಂದಿಗಿದ್ದಾರೆ. ನಮ್ಮ ದೇಶದ ಸಂವಿಧಾನದಲ್ಲಿ ನಂಬಿಕೆ ಇರುವ, ದ್ವೇಷ ರಾಜಕಾರಣದ ಬದಲು ಪ್ರೀತಿಯ ರಾಜಕಾರಣದಲ್ಲಿ ನಂಬಿಕೆ ಇರುವ ಎಲ್ಲರೂ ಒಕ್ಕೂಟದ ಸದಸ್ಯರಾಗಬಹುದು. ಇದಕ್ಕೆ ಸದಸ್ಯತ್ವ ಶುಲ್ಕವೂ ಇಲ್ಲ.
ಇದುವರೆಗೆ ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲ್ಬುರ್ಗಿ, ತುಮಕೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂಥ ಸಮಾವೇಶಗಳನ್ನು ಒಕ್ಕೂಟವು ನಡೆಸಿದೆ. ಇಂಥ ಸಂದರ್ಭಗಳಲ್ಲಿ ಭಾರತದ ವಿವಿಧ ರಾಜ್ಯಗಳ ಮಹಿಳಾ ಚಳುವಳಿಯ ನಾಯಕಿಯರನ್ನು ಸಮಾವೇಶಕ್ಕೆ ಕರೆಸುತ್ತ ಬರಲಾಗಿದೆ. ದೇಶದ ವಿವಿಧ ಭಾಗಗಳ ಮಹಿಳಾ ಹೋರಾಟಗಾರ್ತಿಯರು ಮತ್ತು ಒಕ್ಕೂಟದ ಸಂಗಾತಿಗಳ ನಡುವೆ ಬಾಂಧವ್ಯ ಇದರಿಂದ ಬೆಳೆಯಲು ಸಾಧ್ಯವಾಗಿದೆ; ಅವರೂ ಕರ್ನಾಟಕದ ಮಹಿಳಾ ಹೋರಾಟಗಳನ್ನು ಅವರ ಊರಿಗೆ ಪಸರಿಸಲು ಇದರಿಂದ ಸಾಧ್ಯವಾಗಿದೆ. ನಿದರ್ಶನಕ್ಕೆ ಮಂಗಳೂರಿನ ಮೊದಲ ಸಮಾವೇಶವನ್ನು ರಾಜಸ್ತಾನದ ಸಾಥಿನ್ ಭಾಂವ್ರಿದೇವಿ ಅವರು ಉದ್ಘಾಟಿಸಿದರು. ತನ್ನ ಕರ್ತವ್ಯದ ಭಾಗವಾಗಿ ಬಾಲ್ಯವಿವಾಹವನ್ನು ತಡೆದ ತಪ್ಪಿಗೆ ಅವರು ಊರಿನ ಉಳ್ಳವರಿಂದ ಸಾಮೂಹಿಕ ಅತ್ಯಾಚಾರದಂಥ ಘೋರ ಶಿಕ್ಷೆಗೆ ಒಳಗಾಗಿ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾನೂನು ಜಾರಿಯಾಗಲು ಕಾರಣರಾದವರು.
ಮೈಸೂರಿನ ಸಮಾವೇಶವನ್ನು ಮಣಿಪುರದಲ್ಲಿ ಸೈನಿಕರಿಗೆ ನೀಡಿದ ವಿಶೇಷಾಧಿಕಾರವನ್ನು ಹಿಂಪಡೆಯಲು ಒತ್ತಾಯಿಸಿ ಪ್ರತಿಭಟಿಸಿದ ಇಮಾ ನಾನ್ಬಿ, ಚಿತ್ರ ಅಹೆಂತಮ್, ರೇಣು ತಕಲೆಂಬಂ ಅವರುಗಳು ಉದ್ಘಾಟಿಸಿದರು. ಭೂಪಾಲ್ ಅನಿಲ ದುರಂತದ ವಿರುದ್ಧ ಮತ್ತು ಅದರ ಸಂತ್ರಸ್ತರ ಪರವಾಗಿ ಇಂದಿಗೂ ಹೋರಾಡುತ್ತಿರುವ ರಶೀದಾಬಿ ಮತ್ತು ಚಂಪಾದೇವಿ ಶುಕ್ಲಾ ಅವರು ಬೆಂಗಳೂರಿನ ಸಮಾವೇಶದ ಅತಿಥಿಗಳಾಗಿದ್ದರು. ಇದೇ ರೀತಿಯಲ್ಲಿ ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ ಮೇಧಾ ಪಾಟ್ಕರ್, ಕವಿತಾ ಕೃಷ್ಣನ್, ತೆಲಂಗಾಣದ ಗೋಗು ಶ್ಯಾಮಲಾ, ಸ್ವತಹ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ, ಅಲ್ಲಿಂದ ಸಿಡಿದೆದ್ದು, ಲಾ ಪದವಿ ಓದಿ ವಕೀಲೆಯಾಗಿ, ಇಂದು ಮುಂಬೈನಲ್ಲಿ ದೌರ್ಜನ್ಯಕ್ಕೆ ಒಳಗಾದ ಸಾವಿರಾರು ಮಹಿಳೆಯರಿಗೆ ಅಭಯನೀಡುವ ಕೆಲಸದಲ್ಲಿ ತೊಡಗಿರುವ ಫ್ಲೇವಿಯಾ ಆ್ಯಗ್ನೇಸ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಕಾರ್ಯದರ್ಶಿಯಾದ ಅಮರ್ಜಿತ್ ಕೌರ್, ಮಹಿಳಾಪರ ಹೋರಾಟಗಾರ್ತಿ ದೆಹಲಿಯ ಶಬ್ನಂ ಹಶ್ಮಿ, ತೆಲುಗಿನ ಪ್ರಸಿದ್ಧ ಲೇಖಕಿ ಓಲ್ಗಾ, ತೆಲುಗು ಕವಿ, ದಲಿತ ಮತ್ತು ಜನಪರ ಹೋರಾಟಗಾರ್ತಿ ಜೂಪಕ ಸುಭದ್ರ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಸಂಚಾಲಕರಾದ ಮರಿಯಂ ಧವಳೆ, ಕೇರಳದ ಮಾಜಿ ಆರೋಗ್ಯ ಸಚಿವರಾಗಿ ತಮ್ಮ ಕರ್ತವ್ಯ ಪ್ರಜ್ಞೆಯಿಂದ ದೇಶಕ್ಕೇ ಮಾದರಿಯಾಗಿದ್ದ ಕಾಮ್ರೇಡ್ ಕೆ.ಕೆ. ಶೈಲಜಾ ಮತ್ತು ಮುಂಬೈನ ವಿಹಾನ್(ಟ್ರ್ಯಾನ್ಸ್ ಮ್ಯಾನ್), ಮದ್ರಾಸು ಉಚ್ಚನ್ಯಾಯಾಲಯದ ನ್ಯಾಯವಾದಿ ಶ್ರೀಮತಿ ಎ ಅರುಳ್ ಮೌಳಿ, ಉದಯೋನ್ಮುಖ ರಾಜಕಾರಣಿ ಡಾ. ಜಿ. ವಿ ವೆನ್ನೆಲ ಗದ್ದರ್ ಮುಂತಾದವರು ಹಿಂದಿನ ವಿವಿಧ ಜಿಲ್ಲಾ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ.
2017ರಿಂದ ಅರಿವಿನ ಪಯಣ ಹೆಸರಿನಲ್ಲಿ ಲಿಂಗತ್ವ ಸೂಕ್ಷ್ಮತೆಯ ತರಬೇತಿಯನ್ನು ಒಕ್ಕೂಟದ ಚಟುವಟಿಕೆಯಾಗಿ ಸೇರಿಸಿಕೊಳ್ಳಲಾಗಿದೆ. ಇದರಿಂದ ಲಕ್ಷಾಂತರ ಜನರನ್ನು ತಲುಪಲು ಒಕ್ಕೂಟಕ್ಕೆ ಸಾಧ್ಯವಾಗಿದೆ. ಸಮಸಮಾಜ ಮತ್ತು ಲಿಂಗತ್ವ ಸಮಾನತೆಯ ಸಮಾಜ ಕಟ್ಟಲು ಇಂಥ ಚಟುವಟಿಕೆಗಳು ಪೂರಕವಾಗಿವೆ. ಅರಿವಿನ ಪಯಣವಲ್ಲದೆ , ಅಧ್ಯಯನ ಶಿಬಿರ, ಅಧ್ಯಯನ ಪ್ರವಾಸವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಗೆಳತಿಯರು ಒಂದೆಡೆ ಸೇರಿ ಕೌದಿ ಹೊಲಿಯುತ್ತ ಅನೇಕ ವಿಚಾರಗಳನ್ನು ಕಲಿಯುವ, ತಿಳಿಸುವ ಕಾರ್ಯಕ್ರಮ ನಡೆಸುವುದು ಮತ್ತು ಹೀಗೆ ಹೊಲಿದ ಕೌದಿಯನ್ನು ಸಮಾವೇಶದ ಅತಿಥಿಗಳಿಗೆ ನೀಡುವುದು ಕೂಡ ನಿರಂತರ ನಡೆದುಕೊಂಡು ಬಂದಿದೆ. ಸಮಾವೇಶದ ಬಳಿಕ ತಪ್ಪದೆ ಸ್ಮೃತಿಸಂಚಯ ಹೊತ್ತಗೆಯನ್ನು ಪ್ರತಿ ವರ್ಷ ತರಲಾಗುತ್ತದೆ. ಕರೋನಾ ಕಾಲದಲ್ಲಿ ಆನ್ಲೈನ್ ವಿಚಾರಗೋಷ್ಠಿಗಳನ್ನು ಏರ್ಪಡಿಸಿ, ಸಭೆಗಳನ್ನು ನಡೆಸಿ ಒಕ್ಕೂಟವನ್ನು ಕ್ರಿಯಾಶೀಲವಾಗಿ ಇರಿಸಲಾಯಿತು. ಬಹುಮುಖ್ಯವಾಗಿ ಎಲ್ಲಬಗೆಯ ಸಾಮಾಜಿಕ ಹೋರಾಟಗಳಿಗೆ ಒಕ್ಕೂಟವು ದನಿಗೂಡಿಸಿದೆ.
ಹೊಸಪೇಟೆಯ ಈ ಬಾರಿಯ ನಮ್ಮ ಘೋಷವಾಕ್ಯ : ಕೈಗೆ ಕೈ ಜೋಡಿಸಿ : ನ್ಯಾಯಯುತ ಸಮಾಜ ಕಟ್ಟೋಣ
2025ರ ಮಾರ್ಚ್ 7ರಂದು ನಡೆಯುವ ಮಹಿಳಾ ಘನತೆ ; ಬಹು ಆಯಾಮಗಳು ವಿಚಾರ ಸಂಕಿರಣದ ದಿಕ್ಸೂಚಿ ಭಾಷಣವನ್ನು ಹೈದರಾಬಾದಿನ ಧಾತ್ರಿ ಟ್ರಸ್ಟ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಶ್ರೀಮತಿ ಭಾನುಮತಿ ಕಲ್ಲೂರಿ ಅವರು ಮಾಡಲಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಅವರು ಹಲವಾರು ಸಮುದಾಯ ಹೋರಾಟಗಳಲ್ಲಿ, ಅದರಲ್ಲೂ ಮುಖ್ಯವಾಗಿ ಭೂಮಿ ಮತ್ತು ಅರಣ್ಯ ಹಕ್ಕುಗಳಿಗಾಗಿ ಸ್ಥಳೀಯ ಜನರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
7ರಂದು ಸಂಜೆ ಕಪ್ಪು ಉಡುಗೆಯಲ್ಲಿ ಮಹಿಳೆಯರು ಕಾರ್ಯಕ್ರಮವಿದ್ದು, ಅದನ್ನು ಬಳ್ಳಾರಿ ಗಣಿದೊರೆಗಳೆಂದೇ ಕುಖ್ಯಾತರಾದ ಜನಾರ್ಧನ ರೆಡ್ಡಿ ಅವರ ವಿರುದ್ಧ ಹೋರಾಡಿ, ತನ್ನ ಪುಟ್ಟ ಮನೆಯನ್ನು ಉಳಿಸಿಕೊಂಡ ಗೌಸಿಯಾ ಖಾನಂ ಅವರು ಉದ್ಘಾಟಿಸಲಿದ್ದಾರೆ.
2025ರ ಮಾರ್ಚ್ 8 ರಂದು ಬೃಹತ್ ರ್ಯಾಲಿ (Rally) ಮತ್ತು ಸಮಾವೇಶ ನಡೆಯಲಿದ್ದು, ಅದರ ದಿಕ್ಸೂಚಿ ಭಾಷಣ ಮಾಡಲು ಗುಜರಾತಿನವರಾದ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸ್ಥಾಪಕರೂ ಭಾರತೀಯ ಮಹಿಳಾ ಹಕ್ಕುಗಳ ಕಾರ್ಯಕರ್ತರೂ ಆಗಿರುವ ಶ್ರೀಮತಿ ಝಕೀಯಾ ಸೋಮನ್ ಅವರು ಬರುತ್ತಿದ್ದಾರೆ.
ಬನ್ನಿ ಎಲ್ಲರೂ ಹೊಸಪೇಟೆಯಲ್ಲಿ ಸೇರೋಣ, ಮಹಿಳಾ ಚೈತನ್ಯ ದಿನವನ್ನು ಅರ್ಥಪೂರ್ಣವಾಗಿಸೋಣ.
ಸಬಿಹಾ ಭೂಮೀಗೌಡ
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಇವರು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟದಲ್ಲಿ ಸಕ್ರಿಯರು.
ಇದನ್ನೂ ಓದಿ- ಅಧ್ಯಾತ್ಮದ ಅಸ್ತಿತ್ವಕ್ಕೆ ಹೆಣ್ಣೇ ಗುರಿಯಾಗಬೇಕೇ ?