‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ..ಇದು ಪ್ರಣಂ ದೇವರಾಜ್ ಸಿನಿಮಾ

Most read

ದೇವರಾಜ್ ಕಿರಿಯ ಮಗ ಪ್ರಣಂ ದೇವರಾಜ್ ನಟನೆಯ ಸಿನಿಮಾ ‘ಸನ್ ಆಪ್ ಮುತ್ತಣ್ಣ’. ಈ ಚಿತ್ರಕ್ಕೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ಸಿನಿಮಾ ಸೆಟ್ಟೇರಿದ ಜಾಗದಲ್ಲಿ ಕುಂಬಳಕಾಯಿ ಹೊಡೆಯಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಅದರಂತೆ ಬೆಂಗಳೂರಿನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಕೊನೆಯ ಹಂತದ ಶೂಟಿಂಗ್ ಮಾಡಿ ಕುಂಬಳಕಾಯಿ ಹೊಡೆಯಲಾಗಿದೆ. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಾಯಕ ಪ್ರಣಂ ದೇವರಾಜ್ ಮಾತನಾಡಿ, ಇವತ್ತು ಖುಷಿಯೂ ಇದೆ, ಬೇಜಾರು ಇದೆ. ಖುಷಿ ಏನಕ್ಕೆ ಅಂದರೆ ನನ್ನ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಬೇಜಾರು ಏನಕ್ಕೆ ಅಂದರೆ ನಾಳೆಯಿಂದ ಇವರು ಯಾರು ಸಿಗಲ್ಲ ಅಂತಾ. ಈ ಜರ್ನಿ ಖುಷಿ ಜೊತೆಗೆ ಎಮೋಷನಲ್ ಆಗಿಯೂ ಇತ್ತು. ಟೆನ್ಷನ್ ಕೂಡ ಇತ್ತು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಅಪ್ಪ ಮಗನ ಬಾಂಧವ್ಯದ ಕಥೆ ಇದು. ನಮ್ಮ ಅಪ್ಪ ಮಗನ ಬಾಂಧವ್ಯ ಹೇಗಿದೆ ಅಂತಾ ಗೊತ್ತಿದೆ, ರಘು ಸರ್ ಸೆಟ್ ನಲ್ಲಿ ನನಗೆ ತಂದೆ ತರ ಇದ್ದರು. ಇವರಿಂದ ಸಾಕಷ್ಟು ಕಲಿತ್ತಿದ್ದೇನೆ. ಖುಷಿ ಅದ್ಭುತ ನಟಿ. ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿದ್ದಾರೆ. ಪುರಾತನ ಫಿಲ್ಮಂಸ್ ಈ ರೀತಿ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದ ಎಂದರು.

ನಾಯಕಿ ಖುಷಿ ರವಿ ಮಾತನಾಡಿ, ಶೂಟ್ ಮುಗಿಸಿ, ದೃಷ್ಟಿ ತೆಗೆದು ಕುಂಬಳಕಾಯಿ ಹೊಡೆಯೋದನ್ನು ನೋಡಿದ್ದೇವೆ. ಆದರೆ ಪುರಾತನ ಫಿಲ್ಮಂಸ್ ಅದ್ಧೂರಿಯಾಗಿ ಶೂಟಿಂಗ್ ಮುಗಿಸಿದೆ. 49 ದಿನ ಜರ್ನಿಯಲ್ಲಿಯೂ ಯಾವುದೇ ರೀತಿ ಕೊರತೆ ಇಲ್ಲದ ರೀತಿ ನೋಡಿಕೊಂಡಿದ್ದಾರೆ. ಹರೀಶ್ ಸರ್ ಗೆ ಧನ್ಯವಾದ. ನಿರ್ದೇಶಕ ಶ್ರೀಕಾಂತ್ ಸರ್ ತುಂಬಾ ಕ್ಲಾರಿಟಿ ಇದೆ. ಈ ಜನರೇಷನ್ ಗೆ ಅಪ್ಪ-ಮಗ, ಅಪ್ಪ-ಮಗಳು, ಸ್ನೇಹ ಎಲ್ಲಾ ಎಮೋಷನ್ ಸಿನಿಮಾದಲ್ಲಿ ತೋರಿಸಿದ್ದಾರೆ. ಸಾಂಗ್ ಸಚಿನ್ ಬಸ್ರೂರ್ ಅದ್ಭುತವಾಗಿ ಕಂಪೋಸ್ ಮಾಡಿದ್ದಾರೆ. ಧನು ಮಾಸ್ಟರ್ ಅದ್ಭುತವಾಗಿ ನನ್ನ ಕೈಯಿಂದ ಡ್ಯಾನ್ಸ್ ಮಾಡಿಸಿದ್ದಾರೆ. ಕೃಷ್ಣಣ್ಣ ನಮ್ಮನ್ನು ತುಂಬಾ ಚೆನ್ನಾಗಿ ಕ್ಯಾಪ್ಟರ್ ಮಾಡಿದ್ದಾರೆ ಎಂದರು.

ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಬಂಡಿ ಮಹಾಕಾಳಿ ದೇಗುಲದಲ್ಲಿ ಸಿನಿಮಾ ಶುರು ಮಾಡಿದ್ದೇವು. ನಿರ್ಮಾಪಕರು‌ ಇಲ್ಲಿಯೇ ಕುಂಬಳಕಾಯಿ ಹೊಡೆಯಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಇಲ್ಲಿಯೇ ಕುಂಬಳಕಾಯಿ ಹೊಡೆದಿದ್ದೇವೆ. 49 ದಿನ ಶೂಟಿಂಗ್ ನಡೆಸಲಾಗಿದೆ. ವಾರಣಾಸಿ, ಬೆಂಗಳೂರಿನಲ್ಲಿ ನಡೆಸಲಾಗಿದೆ ಎಂದರು.

‘S/O ಮುತ್ತಣ್ಣ’ ಸಿನಿಮಾವನ್ನು ಶ್ರೀಕಾಂತ್ ಹುಣ್ಸೂರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಶ್ರೀಕಾಂತ್ ಈ ಸಿನಿಮಾದ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಪ್ರಣಂ ದೇವರಾಜ್ ನಾಯಕನಾಗಿ ನಟಿಸಿದ್ದು, ಖುಷಿ ರವಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನು ಸಿನಿಮಾದಲ್ಲಿ ಹಲವು ಹಿರಿಯ ನಟರು ನಟಿಸುತ್ತಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಸಿನಿಮಾದ ಕೆಲವು ಪ್ರಮುಖ ಪಾತ್ರಗಳಗೆ ಬಣ್ಣ ಹಚ್ಚುತ್ತಿದ್ದಾರೆ.

ಶೀರ್ಷಿಕೆಯೇ ಹೇಳುತ್ತಿರುವಂತೆ ಈ ಸಿನಿಮಾ ಅಪ್ಪ-ಮಗನ ಬಾಂಧವ್ಯದ ಕಥೆ. ಪುರಾತನ ಫಿಲ್ಮಂಸ್ ಬ್ಯಾನರ್ ಅಡಿಯಲ್ಲಿ ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ. ‘S/O ಮುತ್ತಣ್ಣ’ ಸಿನಿಮಾಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಮಾಡುತ್ತಿದ್ದಾರೆ. ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಶೂಟಿಂಗ್ ಮುಗಿಸಿರುವ ಚಿತ್ರತಂಡ. ಆದಷ್ಟು ಶೀಘ್ರವಾಗಿ ಸಿನಿಮಾವನ್ನು ತೆರೆಗೆ ತರುವ ಆಲೋಚನೆಯಲ್ಲಿ ಇದೆ.

More articles

Latest article