ಬೆಂಗಳೂರು : ಕರ್ನಾಟಕದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯಲು ಟಾಟಾ ಪವರ್ ಸಂಸ್ಥೆ ಸಲ್ಲಿಸಿರುವ ಅರ್ಜಿ ನಮೂನೆಗಳು, ಅನುಬಂಧಗಳು ಹಾಗೂ ಸಂಬಂಧಿತ ಎಲ್ಲ ಮಾಹಿತಿ ದಾಖಲೆಗಳು ಸಂಪೂರ್ಣವಾಗಿ ಆಂಗ್ಲಭಾಷೆಯಲ್ಲಿದ್ದು, ಅಸಂಖ್ಯ ಕನ್ನಡಿಗರ ಭಾಷಾ ಹಿತಾಸಕ್ತಿಗೆ ಸಂಬಂಧಿಸಿದ ಈ ಮಹತ್ವದ ದಾಖಲೆಗಳನ್ನು ಕನ್ನಡದಲ್ಲಿ ಲಭ್ಯವಾಗುವಂತೆ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಬಿಳಿಮಲೆ, ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಲು ಮುಂದಾಗುವ ಯಾವುದೇ ಸಂಸ್ಥೆಈ ನೆಲದ ಭಾಷೆ, ಸಂಸ್ಕೃತಿ ಮತ್ತು ಭಾಷಾ ಹಕ್ಕುಗಳಿಗೆ ಗೌರವ ನೀಡುವುದು ಅದರ ಸಾಮಾಜಿಕ ಹೊಣೆಗಾರಿಕೆಯಾಗಿರಬೇಕು. ಆದರೆ ಟಾಟಾ ಪವರ್ ಸಂಸ್ಥೆ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕನ್ನಡಿಗರ ಭಾಷಾ ಹಕ್ಕುಗಳಿಗೆ ಧಕ್ಕೆಯುಂಟು ಮಾಡುವುದಾಗಿದೆ ಎಂದಿದ್ದಾರೆ.
ಕನ್ನಡದಲ್ಲಿಯೇ ಮಾಹಿತಿ ನೀಡಿ : ಇದರ ಜೊತೆಗೆ ಸಂಸ್ಥೆಯ ಪ್ರತಿನಿಧಿಗಳು ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ವಿದ್ಯುಚ್ಛಕ್ತಿ ಪೂರೈಕೆ ಕುರಿತಂತೆ ನಾಗರಿಕರಿಂದ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದ್ದು, ಈ ವೇಳೆ ಬಳಸಲಾಗುತ್ತಿರುವ ಮಾಹಿತಿ ಸಂಗ್ರಹಣಾ ನಮೂನೆಗಳು ಸಹ ಆಂಗ್ಲ ಭಾಷೆಯಲ್ಲಿರುವುದು ತೀವ್ರ ಆಕ್ಷೇಪಣೀಯ ಎಂದಿರುವ ಬಿಳಿಮಲೆ, ಇದರಿಂದ ಸಾಮಾನ್ಯ ಕನ್ನಡಿಗರು ಈ ದಾಖಲೆಗಳ ಅಂಶಗಳು, ಉದ್ದೇಶ ಹಾಗೂ ಅದರ ಪರಿಣಾಮಗಳನ್ನು ಅರ್ಥೈಸಿಕೊಳ್ಳಲಾಗದ ಅಸಹಾಯಕ ಪರಿಸ್ಥಿತಿ ಉದ್ಭವವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಪ್ರತಿನಿಧಿಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗರಿಕರಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಅರ್ಜಿ ಅಥವಾ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ನಿರೀಕ್ಷಿಸಿದಾಗ ನಾಗರಿಕರು ಅದನ್ನು ಕನ್ನಡದಲ್ಲಿಯೇ ಒದಗಿಸಲು ಆಗ್ರಹಿಸಬೇಕೆಂದು ನಾಡಿನ ಜನರಿಗೆ ಕರೆ ನೀಡಿರುವ ಬಿಳಿಮಲೆ, ಎಲ್ಲ ಕನ್ನಡಿಗರು ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕನ್ನಡದಲ್ಲಿಯೂ ಪಡೆಯುವುದು ಅವರ ಹಕ್ಕು ಮತ್ತು ವಿದ್ಯುತ್ ಬಿಲ್ಲುಗಳು ಮಹತ್ವದ ದಾಖಲೆಗಳಾಗಿರುವುದರಿಂದ ಈ ವಿಷಯದಲ್ಲಿ ಬಳಕೆದಾರರು ಬಹಳ ಜಾಗೃತರಾಗಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.
ಈ ಬಗ್ಗೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕೂಡಲೇ ಕ್ರಮವಹಿಸಬೇಕೆಂದು ಆಗ್ರಹಿಸಿರುವ ಬಿಳಿಮಲೆ, ಇಂತಹ ಸಾರ್ವಜನಿಕ ದಾಖಲೆಗಳನ್ನು ಕನ್ನಡದಲ್ಲಿಯೂ ಪ್ರಕಟಿಸಲು ಮುಂದಾಗಬೇಕೆಂದು ಸೂಚಿಸಿದ್ದಾರೆ.

