Saturday, July 27, 2024

INDIA ಮೈತ್ರಿಕೂಟಕ್ಕೆ ಆಘಾತ: ಮತ್ತೆ ಬಿಜೆಪಿ ತೆಕ್ಕೆಯತ್ತ ನಿತೀಶ್ ಕುಮಾರ್

Most read

ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಯೂ ಟರ್ನ್ ಹೊಡೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದು, INDIA ಮೈತ್ರಿಕೂಟ ಆಘಾತಕ್ಕೆ ಒಳಗಾಗಿದೆ.

ಪಶ್ಚಿಮ ಬಂಗಾಳದಲ್ಲಿ TMC ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ INDIA ಮೈತ್ರಿಕೂಟದ ಪ್ರಮುಖ ಪಕ್ಷ ಜೆಡಿಯು ಈಗ ಬಿಜೆಪಿ ಕಡೆಗೆ ವಾಲುತ್ತಿರುವ ಕುರಿತು ಸ್ಪಷ್ಟ ಸೂಚನೆಗಳು ಲಭ್ಯವಾಗುತ್ತಿವೆ.

ಕಳೆದ ಹಲವು ದಿನಗಳಿಂದ ಬಿಹಾರದಲ್ಲಿ ನಡೆಯುತ್ತಿರುವ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗಳಲ್ಲಿ ಅಧಿಕಾರಾರೂಢ ಮಹಾಘಟಬಂಧನ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ತಮ್ಮ ಗೋವಾ ಪ್ರವಾಸವನ್ನು ರದ್ದುಪಡಿಸಿ ಪಾಟ್ನಾದಲ್ಲೇ ಉಳಿದಿದ್ದಾರೆ. ಇನ್ನೊಂದೆಡೆ ನಿತೀಶ್ ಕುಮಾರ್ ತಮ್ಮ ಪಕ್ಷದ ಎಲ್ಲ ಶಾಸಕರು ಪಾಟ್ನಾದಲ್ಲಿ ಇರುವಂತೆ ಸೂಚಿಸಿದ್ದಾರೆ. ಮಹಾಘಟಬಂಧನದ ಪ್ರಮುಖ ಭಾಗವಾಗಿರುವ ಲಾಲೂ ಯಾದವ್ ಅವರ ಆರ್ ಜೆಡಿ ಕ್ಯಾಂಪ್ ನಲ್ಲೂ ಬಿರುಸಿನ‌ ಚಟುವಟಿಕೆಗಳು ಕಾಣಿಸುತ್ತಿದ್ದು, ಇಂದು ಪಕ್ಷದ ಪ್ರಮುಖ ನಾಯಕರ ಸಭೆ ನಡೆಯಲಿದೆ.

INDIA ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ತಮ್ಮನ್ನು ಘೋಷಿಸಬೇಕು ಎಂದು ಜೆಡಿಯು ಸರ್ವೋಚ್ಛ ನಾಯಕ ನಿತೀಶ್ ಕುಮಾರ್ ಬಯಸಿದ್ದರು. ಆದರೆ TMC ನಾಯಕಿ ಮಮತಾ ಬ್ಯಾನರ್ಜಿ ಮತ್ತು AAP ನಾಯಕ ಅರವಿಂದ ಕೇಜ್ರಿವಾಲ್ ಇದಕ್ಕೆ ತಣ್ಣೀರೆರಚಿ, ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವಕ್ಕೆ ಜೈ ಎಂದಿದ್ದರು. ಇದರಿಂದಾಗಿ ನಿತೀಶ್ ಕುಮಾರ್ ವ್ಯಗ್ರರಾಗಿದ್ದರು. INDIA ಮೈತ್ರಿಕೂಟದ ನಾಯಕತ್ವಕ್ಕೆ ತಮ್ಮ ಹೆಸರನ್ನು ಮುಂದೆ ತರಲು ವಿಫಲರಾದ ಜೆಡಿಯು ಬಿಹಾರ ಘಟಕದ ಅಧ್ಯಕ್ಷ ಲಲನ್ ಸಿಂಗ್ ಅವರ ಮೇಲೆ ಕೋಪಗೊಂಡು ಅವರನ್ನು ಸ್ಥಾನದಿಂದ ವಜಾಗೊಳಿಸಿ ತಾವೇ ಅಧ್ಯಕ್ಷ ಸ್ಥಾನಕ್ಕೆ ಮರಳಿದ್ದರು.

ಇದೆಲ್ಲ ಬೆಳವಣಿಗಳ ನಡುವೆ, ನಿತೀಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಕುಟುಂಬ ರಾಜಕಾರಣದ ಕುರಿತು ಟೀಕೆ ಮಾಡಿದ್ದು ಆರ್ ಜೆಡಿ ನಾಯಕರನ್ನು ಕೆರಳಿಸಿತ್ತು. ಆರ್ ಜೆಡಿ ನಾಯಕಿ, ಲಾಲೂ ಪುತ್ರಿ ರೋಹಿಣಿ ಆಚಾರ್ಯ X ನಲ್ಲಿ ಹಲವು ಪೋಸ್ಟ್ ಗಳನ್ನು ಬರೆದು ನಿತೀಶ್ ಕುಮಾರ್ ಅವರಿಗೆ ಉತ್ತರ ನೀಡಿದ್ದರು‌. ವಿವಾದ ದೊಡ್ಡದಾಗುತ್ತಿದ್ದಂತೆ ತಮ್ಮ ಪೋಸ್ಟ್ ಗಳನ್ನು ರೋಹಿಣಿ ಅಳಿಸಿಹಾಕಿದ್ದರು.

ಇದೆಲ್ಲದರ ನಡುವೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಬಿಹಾರ ಪ್ರವೇಶಿಸಲಿದ್ದು, ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ನಿತೀಶ್ ಅವರನ್ನು ಕೋರಲಾಗಿತ್ತು. ಆದರೆ ಜೆಡಿಯು ಕಡೆಯಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬದಲಾಗಿ ಪ್ರಧಾನಿ ಮೋದಿಯವರ ಕಾರ್ಯಕ್ರಮವೊಂದರಲ್ಲಿ ನಿತೀಶ್ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಯು ಮೂಲಗಳು ಹೇಳುತ್ತಿವೆ.

ಬಿಹಾರದ ಹಿರಿಯ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಿದ್ದು ಕೂಡ ನಿತೀಶ್ ಅವರ ಮಹಾಪಲ್ಲಟಕ್ಕೆ ಒಂದು ಸಮರ್ಥನೆಯಾಗಿ ಕಾಣಿಸುತ್ತಿದೆ.

ನಿತೀಶ್ ಕುಮಾರ್ INDIA ಮೈತ್ರಿಕೂಟ, ಮಹಾಘಟಬಂಧನ ತೊರೆಯುವುದೇ ಆದಲ್ಲಿ ಅವರ ಮುಂದೆ ಈಗ ಎರಡು ಮಾರ್ಗಗಳಿವೆ. ಮೊದಲನೆಯದಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ವಿಧಾನಸಭೆ ವಿಸರ್ಜಿಸಿ, ಲೋಕಸಭಾ ಚುನಾವಣೆಯೊಂದಿಗೇ ಚುನಾವಣೆ ಎದುರಿಸುವುದು. ಎರಡನೇ ಆಯ್ಕೆ ಬಿಜೆಪಿ ಜೊತೆ ಮತ್ತೆ ಸರ್ಕಾರ ರಚಿಸುವುದು.

More articles

Latest article