ಕಪ್ಪು ಅಜೆಂಡದೊಳು
ತಿರುಗಿ ತಿರುಗಿ ಕೆಂಪು ವಸ್ತ್ರ
ರಾಜಕೀಯ ಧೋರಣೆಗೆ ಸಿಲುಕಿ ಸುಸ್ತಾಗಿ ಕೆಳಗೆ
ಬೀಳುತಿದೆ…
ಸುತ್ತ ಕಮರಿದ ಕೂದಲು ಗಡ್ಡಗಳು
ನಿರುವಿಲ್ಲದೆ ಒದ್ದಾಡಿ
ಕಪ್ಪು ಹೊದಿಕೆಯ ನೇಣಿಗೆ
ಶರಣಾಗಿ ಕಣ್ಮುಚ್ಚಿತ್ತಿವೆ…
ಅತಂತ್ರ ಕುತಂತ್ರ ಗಳ ಕಂಬಿಗಳಲಿ
ಹವಾಯಿ ಚಪ್ಪಲಿಗಳು ಹೊದಿಕೆಯ ಕಂಬಳಿಗಳಿಲ್ಲದೆ
ನೆಲ ಹಿಡಿದು
ಕೂಳು ನೀರನ್ನು ಹಿಂದೆ ಸರಿಸಿವೆ….
ಬೀಗಗಳ ಬಂಧನಕೆ ಜಿಡ್ಡಿಡಿದು
ಮಂಕಾಗಿವೆ ಓಡಾಡುವ ಸಜೀವ ದೇಹಗಳು
ಇದಕೆ ಅರಾಜಕತೆಯ ಬೆನ್ನೆಲುಬು ಕುಹಕವನು
ಬೀರಿ ಆಟವಾಡುತಿದೆ….
ಸದ್ದಿಲ್ಲದೇ ನ್ಯಾಯ ಬೆಲೆಯ ಸರಕು
ಸುಳಿವಿಲ್ಲದೆ ದುಡ್ಡಿಗೆ ಹರಾಜಾಗುತ್ತಿದೆ..
ಕಣ್ಣ ಕಾವಲು ನೋಡಿದರೂ
ಬಾಯಿ ಮುಚ್ಚಿದೆ…
ಒಂದೊಂದು ಸಲಾಕೆಗೂ
ಒಂದೊಂದು ವರ್ಗಗಳ ಮೇಳ
ಸಂತೋಷದ ಮೇಳಕೆ ಹೊಡೆತದ ಪೆಟ್ಟು
ಚಾಕು ಚೂರಿಯನು ಎಬ್ಬಿಸುತ್ತಿದೆ…
ಪರೋಪಕಾರಿ ಸಹಾಯಕೆ
ಸಲ್ಲದ ಪಿತೂರಿ
ಎಲ್ಲವೂ ಕಣ್ ಸನ್ನೆಯೊಳು ಗಮನಿಸಿ
ಗಂಟಲೊಳು ಅಳುಕ
ನುಂಗುತಿದೆ…
ಬೀಗವಿಲ್ಲದ ಬಂಧನ ಸಿಹಿ ಉಣ್ಣುತ
ನೆಮ್ಮದಿಯ ನಿದ್ರೆ ಗೈಯುತಿದೆ.
ಇದೇ ಅಲ್ಲವೇ ಜಗದ ವಿಸ್ಮಯ
ಪಂಜರದ ಕಂಬಿಯೊಳು ಸಂತಸದ ಶಿಖರ…
ಇದಕೆ ಖಾಕಿಯ ನಕ್ಷತ್ರಗಳು
ಹಗಲಿರುಳು ಶ್ರಮದ ಮಣ್ಣಲಿ
ಕರ್ತವ್ಯದ ಗೆರೆ ಗೀಚುತ್ತಿವೆ….
ಡಾ.ಕೃಷ್ಣವೇಣಿ ಆರ್ ಗೌಡ
ಉಪನ್ಯಾಸಕರು.
ಇದನ್ನೂ ಓದಿ- ಕದನ ಕಾಲದ ಕವನಗಳು