ವಿಶ್ವ ಪರಿಸರ ದಿನ ವಿಶೇಷ | ನಗರಾರಣ್ಯಗಳ ನಡುವೆ

Most read

ನಗರದ ಸೌಂದರ್ಯ ವೃದ್ಧಿಯಲ್ಲಿ ನಗರಾರಣ್ಯಗಳ ಪಾತ್ರ ದೊಡ್ಡದು. ಅವುಗಳ ಬಾಷ್ಪವಿಸರ್ಜನೆಯಿಂದ ಹವೆ ತಂಪುಗೊಂಡು ಮನಸ್ಸಿಗೆ ಆಹ್ಲಾದದ ಅನುಭವವಾಗುತ್ತದೆ. ದೈನಂದಿನ ಒತ್ತಡಗಳ ನಡುವೆ ಅವುಗಳ ನೆರಳಿಗಾಶಿಸಿ ಹಮ್ಮಿಕೊಳ್ಳುವ ಪಿಕ್‍ನಿಕ್‍ಗಳಿಂದ ಖುಷಿ ಸಿಗುತ್ತದೆ. ಮುಖ್ಯವಾಗಿ ಮಕ್ಕಳಿಗೆ ಇಂತಹ ಪಿಕ್‍ನಿಕ್‍ಗಳು ಬಾಲ್ಯದ ಸುಂದರ ಅನುಭವಗಳಾಗಿರುತ್ತವೆ. ಹಕ್ಕಿ ವೀಕ್ಷಣೆ, ಚಿಟ್ಟೆಗಳ ವೀಕ್ಷಣೆ, ಕೀಟಗಳ ವೀಕ್ಷಣೆಗಳ ಜೊತೆ ಗಿಡ ಮರಗಳ ಪರಿಚಯ ಮಾಡಿಕೊಳ್ಳುವ ಮೂಲಕ ಮಕ್ಕಳು ನಿಸರ್ಗಕ್ಕೆ ಹತ್ತಿರವಾಗುತ್ತಾರೆ. ಹೀಗೆ ಹತ್ತಿರವಾದ ಮನಸ್ಸು ಕ್ರಮೇಣ ಜೀವ ವಿರೋಧಿ ಭಾವನೆಗಳ ಪ್ರಭಾವಕ್ಕೆ ಸಿಲುಕದಿರುವ ಸಂಭವ ಹೆಚ್ಚು ಕೆ ಎಸ್‌ ರವಿಕುಮಾರ್‌, ವಿಜ್ಞಾನ ಲೇಖಕರು.

ಜನನಿಬಿಡ ನಗರಗಳಿಗೆ ಮರನಿಬಿಡ ಅಡವಿಗಳ ಅಗತ್ಯ ಬಹಳವಿದೆ ಅನಿಸುತ್ತೆ. ಬೆಳೆಯುವ ನಗರಕ್ಕೆ ನೀರು, ವಿದ್ಯುತ್‍ನಂತಹ ಸೌಲಭ್ಯ ಒದಗಿಸುವ ಸವಾಲು ಒಂದೆಡೆ, ಸ್ಥಿರಾಸ್ತಿಯ ರೂಪಾಯಿ ಮೌಲ್ಯ ಹೆಚ್ಚುತ್ತ ಸಾಗುವ ಸಂಭ್ರಮ ಇನ್ನೊಂದೆಡೆ. ಇವೆರಡರ ನಡುವೆ ‘ಅಭಿವೃದ್ಧಿ’ಯ ಹಪಾಹಪಿಯು ನಿರ್ಲಕ್ಷಿಸುವ ಎರಡು ಮುಖ್ಯ ಜೀವಪರ ಅಂಶಗಳೆಂದರೆ ಉತ್ತಮ ಆರೋಗ್ಯಕ್ಕೆ ಪೂರಕವಾದ ಒಂದು ನೈಸರ್ಗಿಕ ಪರಿಸರವನ್ನು ಉಳಿಸಿಕೊಳ್ಳುವುದು (ಅಥವಾ ರೂಪಿಸಿಕೊಳ್ಳುವುದು), ಎರಡನೆಯದು ಅದನ್ನು ಮಕ್ಕಳಿಗಾಗಿ ಸಂರಕ್ಷಿಸುವುದು.

ನಾವು ಒಮ್ಮೆ ಸುಮ್ಮನೆ ಆಲೋಚಿಸೋಣ. ಚೆನ್ನೈ ನಗರವನ್ನು ಒಂದು ಅರಣ್ಯದ ವರ್ತುಲ ದಟ್ಟವಾಗಿ ಸುತ್ತುವರೆದಿದ್ದರೆ ಅದು ಪ್ರವಾಹಕ್ಕೆ ತುತ್ತಾಗುತ್ತಿತ್ತೆ? ಮರಗಳ ದಟ್ಟಣೆ ನೀರಿನ ರಭಸಕ್ಕೆ ತಡೆಯೊಡ್ಡುತ್ತದೆ ಎಂಬ ಸತ್ಯ ಒಬ್ಬ ಶಾಲೆಗೆ ಹೋಗದ ವ್ಯಕ್ತಿಗೂ ಗೊತ್ತಿದೆ. ಎಲ್ಲೆಲ್ಲಿ ಕಾಂಡ್ಲಾ ಕಾಡುಗಳಿರುತ್ತವೋ ಅಲ್ಲೆಲ್ಲ ಸುನಾಮಿ ಅಲೆಗಳು ತೀರವನ್ನು ಅಪ್ಪಳಿಸುವುದಿಲ್ಲ. ಹುಚ್ಚು ಗಾಳಿಯ ವೇಗವನ್ನು ತಗ್ಗಿಸಲು ಅರಣ್ಯಗಳು ಬೇಕು. ಬಯಲುಸೀಮೆಯಲ್ಲಾಗುವಷ್ಟು ಬಿರುಗಾಳಿಯ ಹಾನಿ ಮಲೆನಾಡಿನಲ್ಲಿ ಕಡಿಮೆಯೇ ಎನ್ನಬೇಕು.

ಮರದೆಲೆಗಳು ತಮ್ಮ ಮೇಲೆ ಧೂಳು ಧರಿಸಿ ಧೂಳಿನ ಹರಡಿಕೆಯನ್ನು ನಿಯಂತ್ರಿಸುತ್ತವೆ. ಹೊಗೆ ತುಂಬಿದ ಕಾವಳ(Smog)ವನ್ನೂ ಹೀಗೆಯೆ ತಿಳಿಗೊಳಿಸಬಲ್ಲವು. ನಗರಜೀವನದ ಗದ್ದಲವನ್ನು ಹೀರಿ ಶಬ್ದ ಮಾಲಿನ್ಯವನ್ನು ಕಡಿತ ಗೊಳಿಸುವ ಕಲೆಯು ಮರಗಳಿಗೆ ಗೊತ್ತು.

ಮಳೆಯ ಬಹುಪಾಲನ್ನು ನೆಲಕ್ಕೆ ಇಂಗಿಸಿ ನಗರದ ಅಂರ್ತಜಲದ ಮಟ್ಟ ಹೆಚ್ಚಿಸುವ ಕೆಲಸಕ್ಕೆ ಮರಗಳೆಂದೂ ಪಗಾರ ಕೇಳುವುದಿಲ್ಲ.

ವಾಹನಗಳು ಮತ್ತು ಕೈಗಾರಿಕೆಗಳಿಂದ ಇಂಗಾಲದ ಡೈ ಆಕ್ಸೈಡ್ ಅಧಿಕಗೊಳ್ಳುತ್ತ ಸಾಗಿ ನಗರ ವಲಯದಲ್ಲಿ ಆಮ್ಲಜನಕದ ಪ್ರಮಾಣ ಕುಂಠಿತಗೊಳ್ಳುವುದು. ಮರಗಳು ಯಥೇಚ್ಛ ಸುತ್ತುವರಿದ ಕಡೆ ಆಮ್ಲಜನಕದ ಪ್ರಮಾಣ ಹೆಚ್ಚುತ್ತೆ ಎಂದು ಒತ್ತಿ ಹೇಳಬೇಕಾಗಿಲ್ಲ ಅಲ್ಲವೆ?

ಇನ್ನು ವಾಯುಮಾಲಿನ್ಯದ ಕಡೆ ನೋಡೋಣ. ಸ್ಟೊಮಾಟಗಳ ಮೂಲಕ ಟನ್ನುಗಟ್ಟಲೆ ಪ್ರಮಾಣದಲ್ಲಿ ಹೀರಲ್ಪಡುವ ಇಂಗಾಲದ ಮಾನಾಕ್ಸೈಡ್, ಸಲ್ಫರ್ ಡೈ ಆಕ್ಷೈಡ್, ನೈಟ್ರೋಜಿನ್ ಡೈ ಆಕ್ಷೈಡ್ ಮತ್ತು ಓಜೋನ್‍ಗಳು ಎಲೆಗಳ ನೀರಿನಂಶದಲ್ಲಿ ಬಂಧಿಯಾಗುತ್ತವೆ. ಕ್ರಮೇಣ ನಾವು ಉಸಿರಾಡುವ ಗಾಳಿ ಶುದ್ಧಗೊಳ್ಳುತ್ತದೆ. ವಾಯುಮಾಲಿನ್ಯ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಉತ್ತೇಜನಕಾರಿಯಾದುದು. ಈ ಉತ್ತೇಜನವನ್ನು ಕುಗ್ಗಿಸಲು ನಗರಾರಣ್ಯಗಳು ನೆರವಾಗುತ್ತವೆ. ಇಂಗಾಲದ ಡೈ ಆಕ್ಷೈಡ್ ಹೆಚ್ಚಿದರೆ ಅದು ಸೂರ್ಯನ ಶಾಖವನ್ನು ಹಿಡಿದಿರಿಸುತ್ತದೆ. ಗಿಡಮರಗಳು ಇಂಗಾಲವನ್ನು ಬಳಸಿಕೊಂಡು ಆ ಶಾಖವನ್ನು ತಗ್ಗಿಸಬಲ್ಲವು. ಸ್ಥಳೀಯ ಉಷ್ಣತೆಯನ್ನು 3 ರಿಂದ 5 ಡಿಗ್ರಿ ಸೆಲ್ಸಿಯಸ್‍ವರೆಗೆ ತಗ್ಗಿಸಬಲ್ಲ ಸಾಮರ್ಥ್ಯ ಸ್ಥಳೀಯ ಅರಣ್ಯಗಳಿಗಿದೆ.

ಅರಣ್ಯಗಳು ತಮ್ಮೆಡೆಗೆ ಜೀವ ಸಂಕುಲಗಳನ್ನೇ ಸೆಳೆದುಕೊಳ್ಳುತ್ತವೆ. ಅದೆಷ್ಟೋ ಬಗೆಯ ಹಕ್ಕಿಗಳು ಹಾನಿಕಾರಕ ಕೀಟಗಳನ್ನು ನುಂಗಿ ಬೆಳೆ ಉಳಿಸುವುದು ಗೊತ್ತಲ್ಲ. ಉದಾಹರಣೆಗೆ ಕೊಕ್ಕರೆಗಳು ನಗರ ಸಮೀಪದ ಹೊಲ ಗದ್ದೆಗಳಲ್ಲೂ ಮಿಡಿತೆಗಳನ್ನು ನುಂಗುತ್ತ ರೈತರಿಗೆ ನೆರವಾಗುವುದನ್ನು ನಾವು ಕಾಣುತ್ತೇವೆ. ಗೂಬೆಗಳಿಂದ ಇಲಿ, ಹೆಗ್ಗಣಗಳ ಸಂಖ್ಯೆ ಕುಗ್ಗುತ್ತದೆ.

ನಗರಾರಣ್ಯಗಳ ನಡುವೆ ಅಲ್ಲಲ್ಲಿ ವಿಜ್ಞಾನದ ಪಾರ್ಕುಗಳನ್ನು, ನೈಸರ್ಗಿಕ ಮ್ಯೂಸಿಯಮ್‍ಗಳನ್ನು, ಹಕ್ಕಿ ಹಾಗೂ ಚಿಟ್ಟೆ ವೀಕ್ಷಣೆಗೆ ರಕ್ಷಿತ ವಲಯಗಳನ್ನು, ಜಾಗಿಂಗ್ ಮತ್ತು ಸೈಕ್ಲಿಂಗ್ ಪಥಗಳನ್ನು, ಕೊಳಗಳನ್ನು ನಿರ್ಮಿಸುವುದು ಹೆಚ್ಚುವರಿ ಆಕರ್ಷಣೆಯಾಗಬಹುದು. ಸಣ್ಣ ದೊಡ್ಡ ಗುಡ್ಡಗಳಿದ್ದರೆ ಅವುಗಳ ಮೇಲೆ ಆಕಾಶವೀಕ್ಷಣೆಗೆಂದು ವೇಧಶಾಲೆ(Observatory) ಗಳನ್ನು ನಿರ್ಮಿಸಬಹುದಾಗಿದೆ (ಅವುಗಳ ನಿರ್ವಹಣೆಗೆ ಭೇಟಿಕಾರರಿಂದ ಔಪಚಾರಿಕವಾಗಿ ಪ್ರವೇಶ ಶುಲ್ಕವನ್ನು ಪಡೆಯಬಹುದಾಗಿದೆ). ಮನೋರಂಜನೆ, ವ್ಯಾಯಾಮ ಮತ್ತು ಜ್ಞಾನವರ್ಧನೆಗಳನ್ನು ಒಟ್ಟಿಗೆ ಒಯ್ಯುವ ಪ್ರಯತ್ನ ಅತ್ಯಪರೂಪದಲ್ಲಿ ಅಪರೂಪ. ಇವು ಮೂರೂ ಸೇರಿದರೆ ವಿಕಾಸಗೊಳ್ಳುವ ವ್ಯಕ್ತಿತ್ವದ ಸ್ವರೂಪವೇ ವಿಭಿನ್ನವಾಗಿರುತ್ತದೆ. ಒಂದು ಆರೋಗ್ಯಕರ ಆಲೋಚನೆಗಳ ಪೀಳಿಗೆಯ ನಿರ್ಮಾಣಕ್ಕೆ ವಿಸ್ಮಯಕಾರಿ ಕೊಡುಗೆಯಾಗಿರುತ್ತದೆ.  

ಬೆಂಗಳೂರು ವಿಪರೀತ ವೇಗದಲ್ಲಿ ಬೆಳೆಯುತ್ತ ಜಗತ್ತಿನ ಗಮನ ಸೆಳೆದಿರುವ ನಗರವಾಗಿದೆ. ವಾತಾವರಣದ ಯಾವ ಅಂಶವೂ ಈ ತನಕ ಅತಿರೇಕಕ್ಕೆ ಹೋಗದೆ ಒಂದು ಸ್ವಸ್ಥ ಬದುಕಿಗೆ ಯೋಗ್ಯವಾದ ನಗರ ಎಂಬ ಬಿರುದನ್ನು ಅದು ಕಳಚಿಕೊಳ್ಳುತ್ತಿದೆ. ಜನದಟ್ಟಣೆ, ವಾಹನದಟ್ಟಣೆ, ಸಂಪನ್ಮೂಲಗಳ ಕೊರತೆ, ಮಿತಿಮೀರಿದ ಮಾಲಿನ್ಯ, ಧಗೆ, ಇಕ್ಕಟ್ಟು, ಗದ್ದಲಗಳ ಗೊಂಡಾರಣ್ಯವಾಗುತ್ತಿದೆ. ಅನಿಯಂತ್ರಿತ ನಗರೀಕರಣದ ಬಲಿಪಶುವಾಗುವುದನ್ನು ತಪ್ಪಿಸಬೇಕಿದ್ದರೆ ಬೆಂಗಳೂರಿಗೆ ನಗರಾರಣ್ಯಗಳು ಬಹಳ ಅಗತ್ಯ ಇವೆ. ಅವು ಬೆಳೆದರೆ ಮಕ್ಕಳ ಪೀಳಿಗೆಗೆ ಒಳ್ಳೆಯ ಪರಿಸರ ದೊರಕುತ್ತದೆ. ಆ ನಿಟ್ಟಿನಲ್ಲಿ ಇಡೀ ದೇಶದಲ್ಲೇ ಮೊದಲಬಾರಿಗೆ ನಗರಾರಣ್ಯ ಬೆಳೆಸುವ ಒಂದು ಹೊಸ ಬಗೆಯ ಅದ್ಭುತ ಸದವಕಾಶವು ಕರ್ನಾಟಕ ರಾಜ್ಯ ಸರ್ಕಾರದೆದುರಿಗಿದೆ. ಅಂದಹಾಗೆ ನಗರಾರಣ್ಯಗಳು ಉದ್ಯಾನದ ರೀತಿ ಕಾಣಬಾರದು. ಅರಣ್ಯ ಹೊಕ್ಕಾಗ ಯಾವ ಭಾವನೆ ಮೂಡುವುದೋ ಅದನ್ನೆ ನೆನಪಿಸುವಂತಿರಬೇಕು.

ಮತ್ತೆ ಇನ್ನೊಂದು ವಿಚಾರ. ನಗರಾರಣ್ಯಗಳು ಪ್ಲಾಸ್ಟಿಕ್ ಕಸ, ಕೊಳೆಯುವ ಕಸ, ಮತ್ತಿತರ ದುರ್ನಾತದ ಕಸಗಳ ಸಗ್ಗವಾಗುವುದಾದರೆ ಅವನ್ನು ಬೆಳೆಸದಿರುವುದೇ ಲೇಸು.

ಎಲ್ಲೆಲ್ಲಿ ಅನುಪಯುಕ್ತ ಮತ್ತು ನಿರ್ಲಕ್ಷಿತ ಸರ್ಕಾರಿ ಜಮೀನುಗಳು ಇವೆಯೋ ಅವುಗಳನ್ನು ಮೇಲೆ ವಿವರಿಸಿದಂತೆ ಹಸಿರು ನೆಲೆ ಮತ್ತು ರಚನಾತ್ಮಕ ಚಟುವಟಿಕೆಗಳ ಕಾರ್ಯಕ್ಷೇತ್ರಗಳಾಗಿ ಪರಿವರ್ತಿಸಬಹುದಾಗಿದೆ. ಬೆಂಗಳೂರು ಆ ದಿಕ್ಕಿನೆಡೆಗೆ ಸಾಗುವ ನಗರವಾಗಲಿ ಎಂಬುದು ನಮ್ಮ ಹೆಬ್ಬಯಕೆ. ಹ್ಞಾಂ, ಬೆಂಗಳೂರೊಂದು ಬದಲಾದರೆ ಸಾಕೇ, ಕರುನಾಡಿನ ಉಳಿದ ಊರುಗಳೂ ಹಸಿರಾಗಲಿ.

ಕೆ.ಎಸ್. ರವಿಕುಮಾರ್,

ಭಾರತೀಯ ಜೀವ ವಿಮಾ ನಿಗಮ, ಹಾಸನ

ಮೊ : 8951055154

ಇದನ್ನೂ ಓದಿ- ಆಫ್ರಿಕಾದ ಗೂಗಿ: ಬರಹ ಮತ್ತು ಬಂಡಾಯ

More articles

Latest article