ಬೆಂಗಳೂರು : ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮೂರನೇ ಭಾಷೆಯಾಗಿ ಜಾರಿಗೊಳಿಸಬೇಕು ಎಂದು ಎನ್ಸಿಇಆರ್ಟಿ ಸೂಚನೆ ಹೊರಡಿಸಿದೆ. ದೇಶದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆಯೇ? ದೇಶವನ್ನು ಒಡೆಯುವ ಸಂಚೇನಾದರೂ ನಡೆಯುತ್ತಿದೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಕೇಂದ್ರೀಯ ಸಂಸ್ಥೆಗಳ ಈ ಹುಚ್ಚಾಟಗಳಿಂದಾಗಿ ದೇಶ ದುರ್ಬಲವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಎನ್ಸಿಇಆರ್ಟಿ ಹೊರಡಿಸಿರುವ ಸೂಚನೆ ರಾಜ್ಯದ ಭಾಷಾ ಕಾನೂನು, ಸಂವಿಧಾನದ ಒಕ್ಕೂಟ ವ್ಯವಸ್ಥೆ ಹಾಗೂ ಕರ್ನಾಟಕದ ಸ್ವಾಭಿಮಾನದ ಮೇಲಿನ ನೇರ ದಾಳಿಯಾಗಿದೆ. ಈ ಆದೇಶವನ್ನು ಕರ್ನಾಟಕ ರಕ್ಷಣಾ ವೇದಿಕೆ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಮಾತ್ರವಲ್ಲ, ಈ ಆದೇಶವನ್ನು ಹೊರಡಿಸಿದ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ x ನಲ್ಲಿ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕರ್ನಾಟಕ ಕನ್ನಡ ಭಾಷಾ ಕಲಿಕಾ ಅಧಿನಿಯಮ, 2015 ಹಾಗೂ ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯವಾಗಿದೆ. ಈ ಕಾನೂನು ಸಿಬಿಎಸ್ಇ, ಐಸಿಎಸ್ಇ ಸೇರಿದಂತೆ ಎಲ್ಲ ಶಾಲೆಗಳಿಗೂ ಅನ್ವಯಿಸುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಪರಿಗಣಿಸುವ ಎನ್ಸಿಇಆರ್ಟಿ ನಿರ್ಧಾರವು ರಾಜ್ಯದ ಕಾನೂನನ್ನು ಉಲ್ಲಂಘಿಸುವ ದುಸ್ಸಾಹಸವಾಗಿದೆ. ಕರ್ನಾಟಕವನ್ನು ನಾವು ಎನ್ಸಿಇಆರ್ಟಿಗೆ ಬರೆದುಕೊಟ್ಟಿಲ್ಲ. ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರವೂ ಆ ಸಂಸ್ಥೆಗೆ ಇಲ್ಲ.
ಕರ್ನಾಟಕದ ಕಾನೂನು ಸ್ಪಷ್ಟವಾಗಿದ್ದರೂ ಅದನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಇದು ನೇರವಾಗಿ ದೇಶ ಒಡೆಯುವ ಸಂಚು ಎಂದೇ ನಾವು ಭಾವಿಸಬೇಕಾಗುತ್ತದೆ.
ಕರ್ನಾಟಕದ ಭಾಷಾ ಕಾನೂನನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ. ಕನ್ನಡವನ್ನು ಮೂರನೇ ಭಾಷೆಗೆ ಇಳಿಸುವ ಯಾವುದೇ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಕರ್ನಾಟಕದ ಕಾನೂನು ಹಾಗೂ ರಾಜ್ಯದ ಭಾಷಾ ಹಕ್ಕುಗಳಿಗೆ ಗೌರವ ನೀಡಬೇಕು.
ರಾಜ್ಯ ಸರ್ಕಾರ ಕೂಡಲೇ ಈ ವಿಷಯದಲ್ಲಿ ಅಧಿಕೃತ ನಿಲುವು ಪ್ರಕಟಿಸಿ, ಎನ್ಸಿಇಆರ್ಟಿ ಆದೇಶವನ್ನು ತಿರಸ್ಕರಿಸಿ ಕನ್ನಡದ ಹಕ್ಕನ್ನು ರಕ್ಷಿಸಬೇಕು. ಕನ್ನಡದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನವೇ ಅಂತಿಮ. ರಾಜ್ಯದ ಕಾನೂನಿಗಿಂತ ಮೇಲಾಗಿ ಯಾವುದೇ ಸಂಸ್ಥೆ ಅಥವಾ ಅಧಿಕಾರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು.
ಎನ್ಸಿಇಆರ್ಟಿ ತನ್ನ ಕನ್ನಡ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ. ಒಂದು ವೇಳೆ ಎನ್ಸಿಇಆರ್ಟಿ ಬಲವಂತವಾಗಿ ಈ ಆದೇಶವನ್ನು ಜಾರಿಗೊಳಿಸಲು ಯತ್ನಿಸಿದರೆ ರಾಜ್ಯದಲ್ಲಿ ರಕ್ತಕ್ರಾಂತಿಯೇ ನಡೆಯುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ.

