ಶಿವಮೊಗ್ಗ: ಸಮಾಜದಲ್ಲಿ ಮಾದಕ ವ್ಯಸನಕ್ಕೆ ಒಳಗಾಗದಂತೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಯುವಜನಾಂಗ ಅದರ ಹಿಂದೆಯೇ ಬಿದ್ದಿದೆ. ತಮ್ಮ ಮೊಮ್ಮಗ ,ಮಾದಕ ವ್ಯಸನಕ್ಕೆ ದಾಸನಾಗಿರುವುದನ್ನು ಖಂಡಿಸಿ ಅಜ್ಜಿಯೊಬ್ಬಳು ದೂರು ನೀಡಲು ಹೊರಟಿದ್ದಾಗ ಸ್ವಂತ ಮೊಮ್ಮಗನೇ ಅಜ್ಜಿಯನ್ನು ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆನಂದರಾವ್ ಬಡಾವಣೆಯ ತಖ್ವಾ ಮಸೀದಿ ರಸ್ತೆಯಲ್ಲಿ ನಡೆದಿದೆ. ʼ
ತನ್ನ ಮೊಮ್ಮಗನನ್ನು ಗಾಂಜಾ ಪ್ರಕರಣದಲ್ಲಿ ಹಿಡಿದುಕೊಡಬೇಕು ಎಂದು ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ ಮೊಮ್ಮಗ ಕಿಶೋರ್ ಎಂಬಾತ ಅಜ್ಜಿಯ ಮೇಲೆ ರಸ್ತೆಯಲ್ಲೇ ಸೈಜುಗಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇದನ್ನು ಕಂಡ ಸ್ಥಳೀಯರು ಭಯಭೀತರಾಗಿದ್ದಾರೆ.
ಅಜ್ಜಿ ತನ್ನ ಮೊಮ್ಮಗನ ಗಾಂಜಾ ಚಾಳಿಯ ವಿರುದ್ಧ ಪದೇ ಪದೇ ಪೊಲೀಸರಿಗೆ ದೂರು ನೀಡುತ್ತಿದ್ದಳು. ಇವತ್ತು ಸಂಜೆ ಕೂಡ ದೂರು ನೀಡಲು ಹೊರಟಾಗ ಆಕೆಯ ಮೊಮ್ಮಗ ಕೆಳಕ್ಕೆ ಬೀಳಿಸಿ ಸೈಜ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ಹಿಂದೆಯೂ ಮಿಳಘಟ್ಟ ಬಡಾವಣೆಯಲ್ಲಿ ಗಾಂಜಾ ಹಾವಳಿ ಹೆಚ್ಚಿರುವ ಬಗ್ಗೆ ಹಲವು ಬಾರಿ ದೂರು ಸಲ್ಲಿಸಲಾಗಿತ್ತು. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಈ ಘಟನೆ ನಡೆಯುತ್ತಿರುಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

