ಬೆಂಗಳೂರು ಆ.17 : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣದ ಬಳಿಕ ಮೈದಾನವನ್ನು ಮನುವಾದಿಗಳು ಹೋಮ – ಹವನದ ಮುಖಾಂತರ ಶುದ್ದೀಕರಿಸಿ ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಿರುವುದನ್ನು ಖಂಡಿಸಿ ಮೇಲ್ಮನೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರಗೊಂಡಿತು. ಕಾಂಗ್ರೆಸ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ್ ವಿಧಾನ ಪರಿಷತ್ ನಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಆ.8ರಂದು ಉತ್ತರಾಖಂಡದ ಹಲ್ದವಾನಿ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ನಿರ್ಗಮಿಸಿದ ಬಳಿಕ ಮನುವಾದಿಗಳು ಭಾಷಣ ಮಾಡಿದ ಸ್ಥಳವನ್ನ ಹೋಮ-ಹವನಗಳ ಮೂಲಕ ಶುದ್ದೀಕರಿಸಿ ಸಾರ್ವಜನಿವಾಗಿ ಅಸ್ಪೃಶ್ಯತೆ ಆಚರಿಸಿದ್ದರು. ಈ ಘಟನೆ ಖಂಡಿಸಿ ತನಿಖೆಗೆ ಆದೇಶಿಸಲಾಗಿದೆ. ಈ ಕುರಿತು ವಿಧಾನಪರಿಷತ್ನಲ್ಲಿ ಖಂಡನಾ ನಿರ್ಣಯ ಮಂಡಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು, ದಲಿತರನ್ನ ಹೊರಗಿಡುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.
ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವಾಲ್ಮೀಕಿ ನಿಗಮದ ಬಗ್ಗೆ ಮಾತನಾಡುವ ಬಿಜೆಪಿಯು, ಸಾರ್ವಜನಿಕವಾಗಿ ಅಸ್ಪ್ಯಶ್ಯತೆ ಆಚರಣೆ ಮಾಡಿದೆ. ಯಾವ ನೈತಿಕತೆ ಇಟ್ಟುಕೊಂಡು ವಾಲ್ಮೀಕಿ ನಿಗಮದ ಬಗ್ಗೆ ಮಾತನಾಡುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ಅಕ್ರೋಶ ಹೊರಹಾಕಿದರು.
‘ಆರ್ಎಸ್ಎಸ್ ಎಂಬುದು ಒಂದು ವಿಷಸರ್ಪದಂತೆ. ಈ ರೀತಿಯ ಮನಸ್ಥಿತಿಗಳು ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯನ್ನು ಜೀವಂತವಾಗಿಡಲು ಯತ್ನಿಸುತ್ತಿವೆ. ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ಸಂವಿಧಾನಕ್ಕೆ ಮಾಡಿದ ಈ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಬಿಜೆಪಿ ಪಕ್ಷದ ಸದಸ್ಯರು ತೀವ್ರವಾಗಿ ವಿರೋಧಿಸಿ ಗದ್ದಲ ಸೃಷ್ಟಿಸಿದರು. ಉಭಯ ಪಕ್ಷಗಳ ಆರೋಪ – ಪ್ರತ್ಯಾರೋಪಗಳ ನಡುವೆಯೇ ಖಂಡನಾ ನಿರ್ಣಯವನ್ನ ಸಭಾಪತಿಗಳು ಅಂಗೀಕರಿಸಿದರು.
ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಮಾತನಾಡಿದ್ದಕ್ಕಾಗಿ ಶುದ್ಧೀಕರಣ ಮಾಡಲಾಗಿದೆ ಎಂದು ಆ ಸಂಘಟನೆ ಸಮರ್ಥಿಸಿಕೊಂಡಿದ್ದರೂ, ಕಾಂಗ್ರೆಸ್ ಇದನ್ನು ದಲಿತರ ವಿರುದ್ಧದ “ಅಸ್ಪೃಶ್ಯತೆ ಆಚರಣೆ” ಮತ್ತು ಮನುಸ್ಮೃತಿ ಮಾನಸಿಕತೆ ಎಂದು ತೀವ್ರವಾಗಿ ಖಂಡಿಸಿದೆ.
ಖುದ್ದು ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ದೇಶದಲ್ಲಿ ದಲಿತರಿಗೆ ಜಾಗವಿಲ್ಲವೇ. ನನ್ನನ್ನು ಅಸ್ಪೃಶ್ಯನಂತೆ ನಡೆಸಿಕೊಳ್ಳಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು. ಇನ್ನು ಈ ಘಟನೆಯನ್ನು ರಾಜ್ಯಸಭೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

