ಬೆಂಗಳೂರು: ಹೆಚ್ಚಿದ ಎಳನೀರಿಗೆ ಬೇಡಿಕೆ, ಇಳುವರಿ ಕುಸಿತ ಮೊದಲಾದ ಕಾರಣಗಳಿಗಾಗಿ ತೆಂಗಿನಕಾಯಿ ಬೆಲೆ ಮತ್ತೆ ಏರುತ್ತಲೇ ಇದೆ. 25 ರೂ. ಇದ್ದ ತೆಂಗಿನಕಾಯಿ ಬೆಲೆ ಈಗ 70 ರೂ.ನಿಂದ 80 ರೂ. ತಲುಪಿದೆ.
ಅಡುಗೆಯಲ್ಲಿ ತೆಂಗಿನಕಾಯಿ ಕೊಡುವ ರುಚಿಯೇ ಬೇರೆ. ಊಟ,ತಿಂಡಿಯ ರುಚಿ ಹೆಚ್ಚಿಸುವುದೇ ಚಟ್ನಿ, ಅದರಲ್ಲೂ ಕಾಯಿ ಚಟ್ನಿ. ಬಲಿತ ತೆಂಗಿನಕಾಯಿ ಬಳಸಿದರೆ ರುಚಿ ಮತ್ತಷ್ಟು ಕಳೆಕಟ್ಟುತ್ತದೆ. ಬೇಸಿಗೆಯಲ್ಲಿ ದೇಹಕ್ಕೆ ತೆಂಗಿನಕಾಯಿ ತಂಪು ನೀಡುತ್ತದೆ. ಆದರೆ ಈಗ ಹೋಟೆಲ್ ಗಳಲ್ಲಿ ಮಾತ್ರವಲ್ಲ, ಸಭೆ ಸಮಾರಂಭ ಮತ್ತು ಮದುವೆ ನಡೆಯುವ ಛತ್ರಗಳಲ್ಲೂ ತೆಂಗಿನಕಾಯಿ ಬಳಕೆ ಕಡಿಮೆಯಾಗಿದೆ.
ಬೆಂಗಳೂರಿಗೆ ತುಮಕೂರು, ಹಾಸನ ಮಂಡ್ಯದಿಂದ ತೆಂಗಿನಕಾಯಿ ಸರಬರಾಜಾಗುತ್ತದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದಲೂ ತೆಂಗಿನಕಾಯಿ ಪೂರೈಕೆಯಾಗುತ್ತದೆ.
ಮಾರುಕಟ್ಟೆಯಲ್ಲಿ ಎರಡು ರೀತಿಯ ತೆಂಗಿನಕಾಯಿ ಲಭ್ಯ. ಬಿಳಿ ಬಾದಾಮಿ ಮತ್ತು ಕಪ್ಪು ಬಾದಾಮಿ ತೆಂಗಿನಕಾಯಿ. ಅಡುಗೆಗೆ ಬಹುತೇಕ ಬಿಳಿ ಬಾದಾಮಿ ತೆಂಗಿನಕಾಯಿಯನ್ನೇ ಬಳಸಲಾಗುತ್ತದೆ. ಆದರೆ ಕಳೆದ ವರ್ಷ ಮಳೆ ಕಡಿಮೆಯಾಗಿ ಬರಗಾಲ ಆವರಿಸಿದ್ದರಿಂದ ಇಳುವರಿ ಕುಸಿತವಾಗಿದೆ. ಉತ್ತಮ ಬೆಲೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ, ರೈತರು ತೋಟಗಳಲ್ಲಿ
ಎಳನೀರನ್ನೇ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ತೆಂಗಿನಕಾಯಿಗೆ ಕೊರತೆ ಉಂಟಾಗಿದೆ. ತೆಂಗಿನಕಾಯಿ ಬೆಲೆ ಇಳಿಯಲು ಬಹುಶಃ ಇನ್ನೂ ಒಂದು ತಿಂಗಳು ಕಾಯಬೇಕಾಗುತ್ತದೆ ಎಂದು ಹೋಲ್ ಸೇಲ್ ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.
ಕಳೆದ ವರ್ಷ ಮಳೆ ಕಡಿಮೆಯಾಗಿ ತೆಂಗಿನ ಮರಗಳು ಗಣನೀಯ ಪ್ರಮಾಣದಲ್ಲಿ ಒಣಗಿ ನಾಶವಾಗಿವೆ. ಈಗ ಪೂರೈಕೆ ಕಡಿಮೆಯಾಗಿದೆ ಎಂದು ಮತ್ತೊಬ್ಬ ವ್ಯಾಪಾರಿ ಹೇಳುತ್ತಾರೆ. ಜತೆಗೆ ಇದು ಮದುವೆ ಸೀಸನ್. ತೆಂಗಿನಕಾಯಿಗೆ ಬೇಡಿಕೆ
ಹೆಚ್ಚು. ಈ ಕಾರಣಕ್ಕೂ ತೆಂಗಿನಕಾಯಿ ಬೆಲೆ ಏರಿಕೆ ಕಂಡಿದೆ.
ವಿವಾಹ ಸಮಾರಂಭಗಳ ಕ್ಯಾಟರರ್ ಒಬ್ಬರಾದ ಮೋಹನ್ ಮಾತನಾಡಿ 1000 ಜನರಿಗೆ ಅಡುಗೆ ಮಾಡುವ ಕಡೆ ಒಟ್ಟಿಗೆ 400 ತೆಂಗಿನಕಾಯಿ ಬಳಸುತ್ತಿದ್ದೆವು. ದರ ಹೆಚ್ಚಿರುವುದರಿಂದ ತೆಂಗಿನಕಾಯಿ ಬಳಕೆಯನ್ನು 80-100 ರಷ್ಟು ಕಡಿಮೆ ಮಾಡಿದ್ದೇವೆ ಎನ್ನುತ್ತಾರೆ.
ಹೋಟೆಲ್ ನಡೆಸುವವರದ್ದು ಮತ್ತೊಂದು ರೀತಿಯ ಸಮಸ್ಯೆ. ಕೇವಲ ತೆಂಗಿನಕಾಯಿ ಮಾತ್ರವಲ್ಲ, ಹಾಲು, ಗ್ಯಾಸ್, ಸಂಬಳ, ಡೀಸೆಲ್, ಬಾಡಿಗೆ, ತೆರಿಗೆ ಸೇರಿದಂತೆ ಎಲ್ಲದರ ಬೆಲೆ ಏರಿಕೆಯಾಗಿದೆ. ಹಾಗಾಗಿ ತೆಂಗಿನಕಾಯಿ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಿದ್ದೇವೆ. ಸಹಜವಾಗಿಯೇ ಗುಣಮಟ್ಟ ಒಂದಿಷ್ಟು ಕಡಿಮೆಯಾಗುತ್ತದೆ ಎಂದು ಹೋಟೆಲ್ ಮಾಲೀಕರೊಬ್ಬರು ವಿವರಿಸುತ್ತಾರೆ.