ಕೋಲಾರ ಸೆ.3: ನೀಲಗಿರಿ ತೋಪಿನಲ್ಲಿ ಅಪರಿಚಿತ ಮಹಿಳೆಯೊಬ್ಬರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಉತ್ತನೂರು ಬಳಿ ನಡೆದಿದೆ.
ಉತ್ತನೂರು ಸಮೀಪದ ನೀಲಗಿರಿ ತೋಪಿನಲ್ಲಿ ಮೃತದೇಹ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮೃತ ಮಹಿಳೆಗೆ ಸುಮಾರು 25ರಿಂದ 30 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಮಹಿಳೆ ಎಷ್ಟು ದಿನಗಳ ಹಿಂದೆ ಮೃತಪಟ್ಟಿದ್ದಾರೆ ಎಂಬುದು ಕೂಡ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಮಹಿಳೆಯ ಮೃತದೇಹ ಪತ್ತೆಯಾಗಿರುವ ಸ್ಥಳ ಮತ್ತು ಅದರ ಸ್ಥಿತಿಯನ್ನು ಆಧರಿಸಿ, ಬೇರೆಡೆ ಮಹಿಳೆಯನ್ನು ಕೊಲೆ ಮಾಡಿ ನೀಲಗಿರಿ ತೋಪಿನಲ್ಲಿ ಶವವನ್ನು ತಂದು ಎಸೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಇದುವರೆಗೆ ಇದು ಖಚಿತವಾಗಿಲ್ಲ. ಮಹಿಳೆಯ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ನಂತರವೇ ಇದು ಕೊಲೆಯೇ ಅಥವಾ ಬೇರೆ ಕಾರಣದಿಂದ ಸಂಭವಿಸಿರುವ ಸಾವೇ ಎಂಬುದು ಸ್ಪಷ್ಟವಾಗಲಿದೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ,ಸುಮಾರು 15 ದಿನಗಳಿಗೂ ಮುಂಚೆ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಉತ್ತನೂರು ಗ್ರಾಮದ ಕೆಂಚನಹಳ್ಳಿ ಸಮೀಪವಿರುವ ನೀಲಗಿರಿ ತೋಪಿನಲ್ಲಿ ಈ ಗುರುತು ಸಿಗದ ಶವ ಪತ್ತೆಯಾಗಿದೆ. ಬಹಳ ದಿನಗಳ ಹಿಂದೆ ಈ ಕೊಲೆ ನಡೆದಿರಬಹುದು. ಎನ್ನಲಾಗಿದೆ ಪ್ರಸ್ತುತ ಪೊಲೀಸರು ಸುತ್ತಮುತ್ತಲ ಗ್ರಾಮಗಳಲ್ಲಿ ಯಾವುದಾದರೂ ಮಹಿಳೆಯ ನಾಪತ್ತೆ ಇರಬಹುದೇನೋ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಸ್ಥಳಕ್ಕೆ ಅಡಿಷನಲ್ ಎಸ್ ಪಿ ಜಗದೀಶ್ ಹಾಗೂ ಎ ಎಸ್ ಪಿ ಮನಿಷಾ ಮನೋಹಿ ಭೇಟಿ ನೀಡಿದ್ದಾರೆ
ಉತ್ತನೂರು ಮುಳಬಾಗಿಲು ತಾಲೂಕಿಗೆ ಸೇರಿದ ಗ್ರಾಮವಾಗಿದ್ದು, ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

