ಒಂದು ದೇಶದ ಭವಿಷ್ಯ ಆ ದೇಶದ ಮಕ್ಕಳ ಪ್ರತಿಭೆಯ ಮೇಲೆ ನಿಂತಿರುತ್ತದೆ. ಆದರೆ, ಆ ಪ್ರತಿಭೆ ಅರಳಬೇಕಾದರೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ವಿಪರ್ಯಾಸವೇನೆಂದರೆ ವೈದ್ಯಕೀಯ ಪ್ರವೇಶ ಪರೀಕ್ಷೆ ‘NEET́ (NATIONAL ELIGIBILITY CUM ENTRANCE TEST ) ಮೇಲ್ನೋಟಕ್ಕೆ ಸಮಾನವಾಗಿ ಕಂಡರೂ, Ground reality ಮಾತ್ರ ಬೇರೆಯೇ ಇದೆ.
ನಗರಗಳಲ್ಲಿ ತಲೆಯೆತ್ತಿರುವ ಸಾವಿರಾರು ಕೋಚಿಂಗ್ ಸೆಂಟರ್ ಗಳಿಗೆ ಲಕ್ಷಗಟ್ಟಲೆ ಹಣ ಸುರಿದು ಕೋಚಿಂಗ್ ಪಡೆಯುವ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಯ ನಡುವೆ ಕಷ್ಟಪಟ್ಟು ಓದುವ ಕೂಲಿ ಕಾರ್ಮಿಕರ ಮಕ್ಕಳು-ಇವರಿಬ್ಬರೂ ಪರೀಕ್ಷೆಯ ಆರಂಭಿಕ ರೇಖೆಯಲ್ಲಿ ಸಮಾನರಾಗಿ ನಿಲ್ಲಲು ಸಾಧ್ಯವೇ?
ಗ್ರಾಮೀಣ ಭಾಗದಲ್ಲಿ ಕೃಷಿಕ ಕುಟುಂಬದಿಂದ ಬಂದ ವಿದ್ಯಾರ್ಥಿಗಳು, ದಮನಿತರು ಮತ್ತು ಬಡ ಕುಟುಂಬದಿಂದ ಬಂದಂತಹ ಮಕ್ಕಳು ಶಿಕ್ಷಣವನ್ನು ತಮ್ಮ ಬದುಕು ಬದಲಿಸುವ ಏಕೈಕ ಮೆಟ್ಟಿಲು ಎಂದು ನಂಬಿದ್ದಾರೆ. ಆದರೆ, ಇಂದು ಶಿಕ್ಷಣ ವ್ಯವಸ್ಥೆಯೇ ಹಣದ ಮೇಲೆ ಅವಲಂಬಿತವಾಗಿದೆ ಮತ್ತು ಕಾರ್ಪೊರೇಟ್ ವ್ಯವಸ್ಥೆಯಾಗಿ ಬದಲಾಗಿದೆ. ಇಲ್ಲಿ ಪ್ರತಿಭೆಗಿಂತ ಆರ್ಥಿಕ ಸಾಮರ್ಥ್ಯವೇ ನಿರ್ಣಾಯಕವಾಗುತ್ತಿದೆ. NEET ಸುತ್ತ ಬೆಳೆದಿರುವ ಕೋಚಿಂಗ್ ಸಂಸ್ಕೃತಿ, ಖಾಸಗಿ ಸಂಸ್ಥೆಗಳ ಹಾವಳಿ ಮತ್ತು ಆಗಾಗ ಕೇಳಿಬರುವ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಪ್ರಕರಣಗಳು ಸಾಮಾನ್ಯ ವಿದ್ಯಾರ್ಥಿಗಳ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿವೆ.

ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಕೇವಲ ತಾಂತ್ರಿಕ ದೋಷವಲ್ಲ, ಅದೊಂದು ದೊಡ್ಡ ಜಾಲ, ಮಾಫಿಯಾ. ಅದು ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಮಾಡಿದ ದ್ರೋಹ. ಪರೀಕ್ಷಾ ಕೇಂದ್ರಗಳ ಭ್ರಷ್ಟಾಚಾರದಿಂದಾಗಿ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿರುವುದು ವ್ಯವಸ್ಥೆಯು ತಲೆತಗ್ಗಿಸಬೇಕಾದ ಸಂಗತಿ. ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಕನಸುಗಳನ್ನು ನನಸಾಗಿಸಬೇಕೇ ಹೊರತು, ಅವರ ಪಾಲಿಗೆ ಯಮಪಾಶವಾಗಬಾರದು.
ಇಂದು ಸಾರ್ವಜನಿಕ ವೇದಿಕೆಗಳಲ್ಲಿ ರಾಷ್ಟ್ರೀಯತೆ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತವೆ. ದಿನ ಬೆಳಗಾದರೆ ಹಿಂದೂ ಮುಸ್ಲಿಂ ಎಂದು ಜಪ ಮಾಡುವ ಸೋ ಕಾಲ್ಡ್ ದೇಶಭಕ್ತ ಸಂಘಟನೆಯ ವಕ್ತಾರರು, ರಾಜಕೀಯ ನೇತಾರರು ವಿದ್ಯಾರ್ಥಿಗಳ ಭವಿಷ್ಯ, ಶಿಕ್ಷಣದಲ್ಲಿನ ಅಸಮಾನತೆ, ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಆತ್ಮಹತ್ಯೆಯಂತಹ ‘ಜೀವಂತ ಸಮಸ್ಯೆ’ಗಳ ಬಗ್ಗೆ ತುಟಿ ಬಿಚ್ಚದೇ ಮೌನವಾಗಿ ಕುಳಿತಿದ್ದಾರೆ. ಯುವಜನತೆ ಈ ಮೌನವನ್ನು ಪ್ರಶ್ನಿಸಬೇಕಾದ ಕಾಲ ಸನ್ನಿಹಿತವಾಗಿದೆ.
ಶಿಕ್ಷಣವನ್ನು ಎಲ್ಲರಿಗೂ ಸಮಾನವಾಗಿ ತಲುಪಿಸುವುದು, ಕೂಲಿ ಕಾರ್ಮಿಕರ ಮಕ್ಕಳೂ ವೈದ್ಯರಾಗಬೇಕೆಂದು ಕಾಣುವ ಕನಸಿಗೆ ಭರವಸೆ ನೀಡುವುದು ಮತ್ತು ವಿದ್ಯಾರ್ಥಿಯ ಕಣ್ಣೀರಿಗಿಂತ ದೊಡ್ಡದಾದ ರಾಜಕೀಯವೇ ಇಲ್ಲ ಎಂದು ಅರಿಯುವುದೇ ನಿಜವಾದ ರಾಷ್ಟ್ರಭಕ್ತಿ ಅನ್ನೋದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು.
ಶಿಕ್ಷಣವು ಕೇವಲ ಶ್ರೀಮಂತರ ಸ್ವತ್ತಾಗಬಾರದು. ವ್ಯವಸ್ಥೆಯು ಬದಲಾಗಬೇಕಿದೆ, ಪರೀಕ್ಷೆಗಳು ನ್ಯಾಯಯುತವಾಗಿ ನಡೆಯಬೇಕು ಆಗ ಮಾತ್ರ ಯುವಕರಿಗೆ ದೇಶದ ಮೇಲೆ ನಂಬಿಕೆ ಉಳಿಯುತ್ತದೆ.
NEET ಬ್ಯಾನ್ ಆಗಬೇಕು, ಆಯಾ ರಾಜ್ಯಕ್ಕೆ ವೈದ್ಯಕೀಯ ಪರೀಕ್ಷೆಯ ಸ್ವಾಯತ್ತತೆ ನೀಡಬೇಕು.
ರುದ್ರು ಪುನೀತ್
ಯುವ ಚಿಂತಕ, ಬರಹಗಾರ
ಇದನ್ನೂ ಓದಿ- “ಮಹಾನಗರಗಳ ಮಹಾವತಾರಗಳು”


