ನವದೆಹಲಿ : ನೀಟ್ ಅಕ್ರಮ ವಿರೋಧಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಲೆದಂಡಕ್ಕೆ ಆಗ್ರಹಿಸಿ ದೆಹಲಿ ಸೇರಿ ದೇಶದಾದ್ಯಂತ ನಡೆಯುತ್ತಿರುವ ಯುವಕರ ಪ್ರತಿಭಟನೆಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಂಡಿಯೂರಿದೆ.
ನೀಟ್ ಪರೀಕ್ಷೆ ರದ್ದಾದ ಬಳಿಕ ನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ಕೊಡಬೇಕು, ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಮತ್ತು ಪ್ರತಿಭಟನಾಕಾರರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂಬ ಮೂರು ಪ್ರಮುಖ ಬೇಡಿಕೆಗಳನ್ನು ಕಾಕ್ರೋಚ್ ಜನತಾ ಪಕ್ಷ ಮುಂದಿಟ್ಟಿತ್ತು. ಈ ಸಂಬಂಧ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಶುಕ್ರವಾರ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಸಿಜೆಪಿ ವಕ್ತಾರರಾದ ಸೌರಬ್ ದಾಸ್ ಮತ್ತು ಆಶುತೋಷ್ ರಂಕಾ ಅವರೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ಕೇಂದ್ರ ಸಚಿವರು ಪ್ರತಿಭಟನಾಕಾರರ ಮೇಲೆ ಹಾಕಿರುವ ಕೇಸ್ಗಳನ್ನು ವಾಪಸ್ ಪಡೆಯುವುದು ಮತ್ತು ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡುವ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಕೇಂದ್ರ ಸಚಿವ ಪ್ರಧಾನ್ ರಾಜೀನಾಮೆ ನೀಡಲೇಬೇಕು ಎಂದು ಸಿಜೆಪಿ ಪ್ರತಿನಿಧಿಗಳು ಪಟ್ಟು ಹಿಡಿದಿದ್ದರಿಂದ ಈ ಸಂಬಂಧ ಶನಿವಾರ ಮಧ್ಯಾಹ್ನದವರೆಗೂ ಸಮಯಾವಕಾಶ ನೀಡಿ. ನಾಳೆ ಮತ್ತೊಂದು ಸಭೆ ನಡೆಸೋಣ ಎಂದು ಕೇಂದ್ರ ಸಚಿವರು ವಾಪಸ್ ತೆರಳಿದ್ದಾರೆ.
ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಡ ತೀವ್ರವಾಗಿದ್ದು, ಒಂದು ವೇಳೆ ಅವರು ರಾಜೀನಾಮೆ ನೀಡದೇ ಹೋದಲ್ಲಿ ದೇಶದಾದ್ಯಂತ ಯುವಜನತೆಯ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಸಿಜೆಪಿ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಲಾಗುತ್ತದೆ ಎಂಬುದನ್ನು ಶನಿವಾರ ಮಧ್ಯಾಹ್ನದವರೆಗೂ ಕಾದು ನೋಡಬೇಕು.
ಮೋದಿ ರಾಜೀನಾಮೆ ಕೇಳಬೇಕಾಗುತ್ತದೆ: ಅಭಿಜೀತ್ ದೀಪ್ಕೆ
ಪ್ರಧಾನಿ ನರೇಂದ್ರ ಮೋದಿಯವರೇ, ನೀಟ್ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಕೂಡಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಿರಿ. ಇಲ್ಲಿದಿದ್ದರೆ ದೇಶದ ಯುವಜನತೆಯಿಂದ ನಿಮ್ಮ ರಾಜೀನಾಮೆ ಕೇಳಬೇಕಾಗುತ್ತದೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಮುಖಂಡ ಅಭಿಜೀತ್ ಧೀಪ್ಕೆ ಹೇಳಿದ್ದಾರೆ.
ಕೇಂದ್ರ ಸಚಿವರ ಭೇಟಿ ನಂತರ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಹೋರಾಟ ಪ್ರಧಾನಿ ರಾಜೀನಾಮೆಯ ಬೇಡಿಕೆಯಾಗಿಯೂ ರೂಪಾಂತರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದ ಕೊಟ್ಯಂತರ ವಿದ್ಯಾರ್ಥಿಗಳಿಗಿಂತ ನಿಮ್ಮ ಸರ್ಕಾರದ ಒಬ್ಬ ಅಸಮರ್ಥ ಹಾಗೂ ವಿಫಲ ಸಚಿವ ದೊಡ್ಡವರಲ್ಲ. ಒಬ್ಬ ವಿಫಲ ಸಚಿವರನ್ನು ವಿದ್ಯಾರ್ಥಿಗಳಿಗಿಂತ ಹೆಚ್ಚು ಮಹತ್ವದ್ದೆಂದು ಪರಿಗಣಿಸಿದರೆ, ಮುಂದಿನ ಚುನಾವಣೆಯಲ್ಲಿ ದೇಶದ ಜನರು ನಿಮಗೆ ಮತ ಹಾಕುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ದೀಪ್ಕೆ ವಾಗ್ದಾಳಿ ನಡೆಸಿದರು.
ಉಪವಾಸ ಕೊನೆಗೊಳಿಸಿದ ಸೋನಮ್ ವಾಂಗ್ಚುಕ್
ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಕಳೆದ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.
ಉಪವಾಸ ಅಂತ್ಯಗೊಳಿಸುವಂತೆ ಪ್ರಧಾನಿ ಮೋದಿ ಅವರ ಕರೆ ಮಾಡಿ ಮನವಿ ಮಾಡಿದ್ದರು. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಆಸ್ಪತ್ರೆಗೆ ತೆರಳಿ ಸರ್ಕಾರದ ಪರವಾಗಿ ಭರವಸೆಗಳನ್ನು ನೀಡಿದರು. ಬಳಿಕ ಕೇಂದ್ರ ಸಚಿವರುಗಳು ಸೋನಮ್ ವಾಂಗ್ಚುಕ್ ಅವರಿಗೆ ಸೂಪ್ ಕುಡಿಸಿ ಉಪವಾಸ ಅಂತ್ಯಗೊಳಿಸಿದರು.
ಪ್ರತಿಭಟನಾಕಾರ ವಿದ್ಯಾರ್ಥಿಗಳ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯುವುದು ಮತ್ತು ನೀಟ್ ಪರೀಕ್ಷೆ ರದ್ದು ಬಳಿಕ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ನೀಡುವುದು, ಮುಂದಿನ ದಿನಗಳಲ್ಲಿ ಇಂತಹ ಪರೀಕ್ಷಾ ಅಕ್ರಮಗಳು ನಡೆಯದಂತೆ ಕ್ರಮ ವಹಿಸಬೇಕು ಎಂಬ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದರಿಂದ ಉಪವಾಸ ಅಂತ್ಯಗೊಳಿಸಿರುವುದಾಗಿ ಸೋನಮ್ ವಾಂಗ್ಚುಕ್ ಪ್ರಕಟಿಸಿದರು.
ಈ ಸಂಬಂಧ ಎಕ್ಸ್ ಮೂಲಕ ಸಂದೇಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಸೋನಮ್ ಅವರು ವೈದ್ಯರ ಸಲಹೆಯಂತೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಬೇಗ ತಮ್ಮ ಹಿಂದಿನ ತೂಕವನ್ನು ಮರಳಿ ಪಡೆಯಬೇಕು ಎಂದು ನಾನು ಒತ್ತಾಯಿಸುತ್ತೇನೆ. ಸೋನಮ್ ಆರೋಗ್ಯವಾಗಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

