ಮುಂಬೈ : ಐಪಿಎಲ್ 2026ರ ಆವೃತ್ತಿಯು ಮುಂಬೈ ಇಂಡಿಯನ್ಸ್ ಪಾಲಿಗೆ ಸವಾಲುಗಳ ಸರಣಿಯಾಗಿಯೇ ಮುಂದುವರಿದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕಾಗಿ ಇಡೀ ತಂಡ ಧರ್ಮಶಾಲಾಗೆ ಪ್ರಯಾಣ ಬೆಳೆಸಿದ್ದರೆ, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡದೊಂದಿಗೆ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ, ಮುಂಬೈನಲ್ಲೇ ಉಳಿದು ವೈಯಕ್ತಿಕವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಮಂಗಳವಾರ ತಡರಾತ್ರಿ ಅವರು ನೆಟ್ ಬೌಲರ್ಗಳ ವಿರುದ್ಧ ಬ್ಯಾಟಿಂಗ್ ನಡೆಸುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿರುವ ಹಾರ್ದಿಕ್, ಪಂಜಾಬ್ ವಿರುದ್ಧ ಕಣಕ್ಕಿಳಿಯುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸದ್ಯ ತಂಡದ ವೈದ್ಯಕೀಯ ಮಂಡಳಿಯು ಅವರ ಫಿಟ್ನೆಸ್ ಮೇಲೆ ತೀವ್ರ ನಿಗಾ ಇಟ್ಟಿದೆ.
ಪ್ಲೇ-ಆಫ್ ರೇಸ್ನಿಂದ ಹೊರಬಿದ್ದ MI
ಆರ್ಸಿಬಿ ವಿರುದ್ಧದ ರೋಚಕ ಪಂದ್ಯದಲ್ಲಿ ಎರಡು ವಿಕೆಟ್ಗಳ ಸೋಲು ಅನುಭವಿಸಿದ ಮುಂಬೈ ಇಂಡಿಯನ್ಸ್, ಈ ಬಾರಿಯ ಪ್ಲೇ-ಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖ್ಯ ತರಬೇತುದಾರ ಮಹೇಲಾ ಜಯವರ್ಧನೆ, “ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ನಾವು ವಿಫಲವಾಗಿದ್ದೇವೆ” ಎಂದು ಒಪ್ಪಿಕೊಂಡಿದ್ದಾರೆ.
ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಈ ಸೀಸನ್ ಮರೆತುಹೋಗುವಂತಹದ್ದಾಗಿದೆ. ಆಡಿದ ಪಂದ್ಯಗಳಲ್ಲಿ ಅವರು ಕೇವಲ 146 ರನ್ ಮತ್ತು 4 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಮುಂಬರುವ ಪಂದ್ಯಗಳು ತಂಡದ ಗೌರವ ಉಳಿಸಿಕೊಳ್ಳಲು ಮಾತ್ರ ಸೀಮಿತವಾಗಿವೆ.

