ನವದೆಹಲಿ, ಮಾರ್ಚ್ 24: ಪ್ರಜೆಗಳು ಪ್ರತಿ ಸವಾಲಿಗೂ ಸಿದ್ಧರಾಗಿರಿ. ಈ ಯುದ್ಧದ ಪರಿಣಾಮ ದೀರ್ಘಕಾಲಿಕವಾಗಬಹುದು. ಆದರೆ ಸರ್ಕಾರ ಎಚ್ಚರದಲ್ಲಿದ್ದೆ ಮತ್ತು ನಮಗೆ ದೇಶದ ಹಿತವೇ ಮುಖ್ಯ ಎಂದು ನಾನು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯ ಸಭೆಯಲ್ಲಿ ಇಂದು ಮಾತನಾಡಿದ ಅವರು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಅಮೆರಿಕಾ-ಇಸ್ರೇಲ್-ಇರಾನ್ ಯುದ್ಧದ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಈ ಯುದ್ಧವು ಶಕ್ತಿ ಸರಬರಾಜು ಸರಪಳಿಗಳು, ತೈಲ-ಗ್ಯಾಸ್ ಸರಬರಾಜು ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದ ಅವರು ವಿಶೇಷವಾಗಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
“ಕಷ್ಟದ ಸಮಯದಲ್ಲಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳು ಹೆಚ್ಚು ತೊಂದರೆಗೀಡಾಗುತ್ತಾರೆ. ರಾಜ್ಯಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದ ಅವರು ಕಾಳಸಂತೆ ತಡೆಯುವುದು, ವಲಸೆ ಕಾರ್ಮಿಕರ ರಕ್ಷಣೆ ಮತ್ತು ಸರಬರಾಜು ಸರಳತೆಯನ್ನು ಕಾಯ್ದುಕೊಳ್ಳುವುದು ರಾಜ್ಯಗಳ ಮುಖ್ಯ ಕರ್ತವ್ಯ ಎಂದು ಸೂಚಿಸಿದರು.
ಸರ್ಕಾರವು ಏಳು ಸಬಲೀಕರಣ ಗುಂಪುಗಳನ್ನು ರಚಿಸಿದೆ. ಇವು ತೈಲ, ಸರಬರಾಜು ಸರಪಳಿ, ರಸಾಯನಿಕ ಗೊಬ್ಬರ ಮತ್ತು ದ್ರವ್ಯಲಾಭ ನಿಯಂತ್ರಣದ ಬಗ್ಗೆ ಯೋಜನೆ ರೂಪಿಸುತ್ತಿವೆ. ಭಾರತವು ಕಚ್ಚಾ ತೈಲ ಆಮದನ್ನು ೨೭ ದೇಶಗಳಿಂದ ೪೧ ದೇಶಗಳಿಗೆ ವಿಸ್ತರಿಸಿದೆ. ಪೆಟ್ರೋಲಿಯಂ ರಿಸರ್ವ್ಗಳನ್ನು ೫೩ ಲಕ್ಷ ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಲಾಗಿದ್ದು ಇನ್ನೂ ೬೫ ಲಕ್ಷಕ್ಕೆ ಏರಿಸುವ ಯೋಜನೆ ಇದೆ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ರಾಜತಾಂತ್ರಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಭಾರತ ಯುದ್ಧನಿರತ ಎಲ್ಲ ಪಕ್ಷಗಳ ಜೊತೆ ಸಂಪರ್ಕದಲ್ಲಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕಾ ಸೇರಿದಂತೆ ಎಲ್ಲಾ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಸಂಭಾಷಣೆ ಮತ್ತು ರಾಜತಾಂತ್ರಿಕತೆ ಮೂಲಕ ಶಾಂತಿ ಸಾಧಿಸುವುದೇ ನಮ್ಮ ಗುರಿ” ಎಂದು ಅವರು ಹೇಳಿದರು.
ಇದುವರೆಗೆ ಭಾರತವು ೩.೭೫ ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ತಂದಿದೆ. ಇರಾನ್ನಿಂದಲೇ ೧,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು (ಹೆಚ್ಚಿನವರು ವೈದ್ಯಕೀಯ ವಿದ್ಯಾರ್ಥಿಗಳು) ಸುರಕ್ಷಿತವಾಗಿ ಮರಳಿದ್ದಾರೆ.
ಕೊರೊನಾ ಸಮಯದಂತೆ ಎಲ್ಲಾ ರಾಜ್ಯಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು. ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಿದೆ. ಸರ್ಕಾರ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

