ನವದೆಹಲಿ: ಎಐ ಇಂಪ್ಯಾಕ್ಟ್ ಶೃಂಗಸಭೆಯ ಸ್ಥಳದಲ್ಲಿ ಶರ್ಟ್ ಕಳಚಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ನಾಲ್ವರು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕಾರ್ಯಕರ್ತರನ್ನು ಐದು ದಿನಗಳ ಕಸ್ಟಡಿಗೆ ನೀಡುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಮೇಲಿನ ಆದೇಶವನ್ನು ದೆಹಲಿ ನ್ಯಾಯಾಲಯ ಶನಿವಾರ ಕಾಯ್ದಿರಿಸಿದೆ.
ಬಂಧಿತ ಐವೈಸಿ ಕಾರ್ಯಕರ್ತರನ್ನು ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ರವಿ ಅವರ ಮುಂದೆ ಹಾಜರುಪಡಿಸಲಾಯಿತು. ಬಂಧಿತರು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಚಿತ್ರಗಳಿರುವ ಟಿ-ಶರ್ಟ್ಗಳನ್ನು ಧರಿಸಿದ್ದಾರೆ ಎಂದು ವಾದಿಸಿದ ದೆಹಲಿ ಪೊಲೀಸರು ಬಂಧಿತ ಪ್ರತಿಭಟನಾಕಾರರನ್ನು ಐದು ದಿನಗಳ ಕಸ್ಟಡಿಗೆ ಕೋರಿದರು. ವಾದ-ವಿವಾದಗಳು ಪೂರ್ಣಗೊಂಡ ನಂತರ ಅವರು ಆದೇಶವನ್ನು ಕಾಯ್ದಿರಿಸಿದರು.
ಬಿಹಾರದ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ; ಐವೈಸಿ ರಾಜ್ಯ ಕಾರ್ಯದರ್ಶಿ ಕುಂದನ್ ಯಾದವ್, ಉತ್ತರ ಪ್ರದೇಶದ ಯುವ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್, ಮತ್ತು ತೆಲಂಗಾಣದ ನರಸಿಂಹ ಯಾದವ್ ಬಂಧಿತ ಪ್ರತಿಭಟನಾಕಾರರು.


