ಬೆಂಗಳೂರು: ಮನುವಾದದ ಪ್ರವರ್ತಕರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ತನ್ನ ‘ಶೂ’ ಎಸೆದಿದ್ದಾರೆ. ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ, ನ್ಯಾಯದ ಮೇಲಿನ ದಾಳಿ, ಸಂವಿಧಾನದ ಮೇಲಿನ ದಾಳಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಂಕ್ ಖರ್ಗೆ ಟೀಕಿಸಿದ್ದಾರೆ.
ಮನುವಾದಿಗಳ ಈ ಮನಸ್ಥಿತಿಯ ಪ್ರೋತ್ಸಾಹಕರು ಯಾರು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಇದು ಕೇವಲ ಶೂ ದಾಳಿಯಲ್ಲ, ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿ.
ಸಂವಿಧಾನದ ಮೇಲೆ ಮನುವಾದಿಗಳಿಗೆ ಇರುವ ಅಸಹನೆಗೆ ಹಾಗೂ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದರೂ ಶೋಷಿತರ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. “ಸಂವಿಧಾನ ಅಪಾಯದಲ್ಲಿದೆ“ ಎಂಬ ನಮ್ಮ ಆತಂಕಕ್ಕೆ ಇಂದು ನೇರ ಪುರಾವೆ ಸಿಕ್ಕಿದೆ.
ಈ ದೇಶದ ಆಡಳಿತ ಇಂದು ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲವೇ?
ದೇಶದ ಇತಿಹಾಸದಲ್ಲಿ ಎಂದೂ ನಡೆಯದ ಈ ಮಾದರಿಯ ಕೃತ್ಯ ಈಗ ನಡೆದಿದೆ. ಮನುವಾದಿಗಳ ಈ ಕಪ್ಪು ಚುಕ್ಕೆಯನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಆರೆಸ್ಸೆಸ್ ಪ್ರತಿಪಾದಿಸುವ ಮನುಸ್ಮೃತಿಯ ಆಧಾರದಲ್ಲಿ ನಡೆಯುತ್ತಿದೆಯೇ? ಈ ಘಟನೆಯ ಹೊಣೆಯನ್ನು ಕೇಂದ್ರ ಸರ್ಕಾರ ಹೊರುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.