ನುಡಿನಮನ | ಮೃದು ಮಾತುಗಳ ಗಟ್ಟಿತನ – ಕುಸುಮಾ ಶಾನಭಾಗ

Most read

ನಾಡಿನ ಖ್ಯಾತ ಬರಹಗಾರ್ತಿ, ಪತ್ರಕರ್ತೆ, ಚಿಂತಕಿ ಕುಸುಮಾ ಶಾನಭಾಗ ನಿಧನರಾಗಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಅವರ ಸಹೋದ್ಯೋಗಿಯಾಗಿ ಹಲವು ವರ್ಷಗಳ ಗೆಳೆತನದ ಒಡನಾಟವನ್ನು ಅನುಭವಿಸಿ ಅವರಿಗೆ ಆಪ್ತರಾಗಿದ್ದ ಸಿ ಜಿ ಮಂಜುಳಾ ಅವರು ಅಗಲಿದ ಗೆಳತಿಯನ್ನು ನೆನೆದು ಬರೆದ ನುಡಿನಮನ ಇಲ್ಲಿದೆ.  

ʼಹೆಂಡತಿಯರನ್ನು ಹೊಡೆಯುವ ಗಂಡಂದಿರುʼ ಎಂಬುದೊಂದು ಲೇಖನ ʼಸುಧಾʼ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.  ನಾನಿನ್ನೂ ಆಗ ಪತ್ರಕರ್ತೆ ಆಗಿರಲಿಲ್ಲ.  ಆ ಲೇಖನದ ವಸ್ತು  ಹಾಗೂ ಆ ಲೇಖಕಿಯ ಹೆಸರು ಕುಸುಮಾ ಶಾನಭಾಗ ವಿಶೇಷವಾಗಿ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಮುಂದೆ ಸ್ವಲ್ಪ ಕಾಲದಲ್ಲೇ, ಸಹೋದ್ಯೋಗಿಯಾಗಿ ಹಲವು ವರ್ಷಗಳ ಗೆಳೆತನದ ಒಡನಾಟವನ್ನು ನೀಡಿದವರು ಕುಸುಮಾ ಶಾನಭಾಗ.

ಮುಖ್ಯ ವಾಹಿನಿಯ ಕನ್ನಡ ದಿನಪತ್ರಿಕೆಗಳ  ನ್ಯೂಸ್‌ ರೂಂಗಳಲ್ಲಿ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಲ್ಲಿದ್ದ ಕಾಲ.  ʼಪ್ರಜಾವಾಣಿʼಗೆ 1982ರ ನವೆಂಬರ್‌ನಲ್ಲಿ ಟ್ರೈನಿ ಉಪಸಂಪಾದಕಿ/ವರದಿಗಾರ್ತಿಯಾಗಿ ನಾನು ಸೇರಿಕೊಂಡ ಬ್ಯಾಚ್‌ನಲ್ಲೇ ಕುಸುಮಾ ಅವರೂ ಸ್ವಲ್ಪ ತಿಂಗಳುಗಳ ನಂತರ 1983ರಲ್ಲಿ ಪ್ರೊಬೇಷನರಿ ಉಪಸಂಪಾದಕಿ/ವರದಿಗಾರ್ತಿಯಾಗಿ ಸೇರಿಕೊಂಡರು.  ನ್ಯೂಸ್‌ ಡೆಸ್ಕ್‌, ಗ್ರಾಮಾಂತರ ಡೆಸ್ಕ್‌ , ಕರ್ನಾಟಕ ದರ್ಶನ, ವರದಿಗಾರ ವಿಭಾಗ, ಮಯೂರ –  ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಕುಸುಮಾ ಕೆಲಸ ಮಾಡಿದ್ದರು. ಈ ಬೇರೆ ಬೇರೆ ವಿಭಾಗಗಳಲ್ಲಿ ನಾನೂ ಕೆಲಸ ಮಾಡಿದ್ದರೂ ಏಕಕಾಲಕ್ಕೆ ಒಂದೇ ಟೀಮ್‌ನಲ್ಲಿ ನಾವಿಬ್ಬರೂ ಎಂದೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಆದರೆ  ಹಿರಿಯ ಪತ್ರಕರ್ತ ಎಸ್‌ ಜಿ ಮೈಸೂರ್‌ ಮಠ್‌ ಅವರು ʼಡೆಕ್ಕನ್‌ ಹೆರಾಲ್ಡ್‌ʼ ಹಾಗೂ ʼಪ್ರಜಾವಾಣಿʼಗೆ ನೇಮಕಗೊಂಡ ಹೊಸ ಪತ್ರಕರ್ತರಿಗೆ ನಡೆಸುತ್ತಿದ್ದಂತಹ ತರಬೇತಿ ತರಗತಿಗಳಿಗೆ ಹೋಗುತ್ತಿದ್ದಂತಹ ಸಂದರ್ಭದಲ್ಲಿ ನಾನು, ಕುಸುಮಾ ಹಾಗೂ ರಾಮದೇವ ರಾಕೆ ತುಂಬಾ ಹತ್ತಿರವಾದೆವು. ತರಗತಿಗಳು, ಅಸೈನ್‌ಮೆಂಟ್‌ಗಳ ಜೊತೆಗೆಯೇ  ಬಿಡುವು ಸಿಕ್ಕಲ್ಲಿ ಕಚೇರಿಯ ಪಕ್ಕದಲ್ಲೇ ಇದ್ದ ಬ್ಲೂ ಡೈಮಂಡ್‌, ಬ್ಲೂಮೂನ್‌ , ಚಿತ್ರಮಂದಿರಗಳಲ್ಲಿ ಸಾಕಷ್ಟು ಒಳ್ಳೆಯ ಇಂಗ್ಲಿಷ್‌ ಸಿನಿಮಾಗಳನ್ನು ಒಟ್ಟಿಗೇ ನೋಡಿದ್ದೂ ನೆನಪಾಗುತ್ತದೆ.  ರಾಕೆ ಅವರು ಈ ಮೊದಲೇ ಮೈಸೂರಿನಲ್ಲಿ ʼಪಂಚಮʼ ಪತ್ರಿಕೆ ಜವಾಬ್ದಾರಿ ಹೊತ್ತಿದ್ದಾಗಿನಿಂದಲೂ ನನಗೆ ಹಾಗೂ ನನ್ನ ಸಂಗಾತಿ ಪರಮೇಶ್‌ಗೆ ಆತ್ಮೀಯರಾಗಿದ್ದಂತಹವರು.

ಕುಸುಮಾ ಶಾನಭಾಗ

ʼಪ್ರಜಾವಾಣಿʼಗೆ ಸೇರುವ ಮೊದಲು ಕುಸುಮಾ  ʼಸಿಎಡ್ಸ್‌ ʼ ಎನ್ನುವ  ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ʼ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆʼ, ಸಿಎಡ್ಸ್‌ ನ ಭಾಗವಾಗಿತ್ತು.  ಆ ಸಂದರ್ಭದಲ್ಲಿ ಅವರು ಲೈಂಗಿಕ ವೃತ್ತಿನಿರತರ ಕುರಿತು ಸಂಶೋಧನಾ ಅಧ್ಯಯನ ನಡೆಸಿದ್ದರು. ಆ ಅಧ್ಯಯನ ಸಂದರ್ಭದಲ್ಲಿ ಅವರು ಎದುರಿಸಿದ ಕಷ್ಟಗಳು, ಸವಾಲುಗಳನ್ನು ಅನೇಕ ಬಾರಿ ನನ್ನ ಜೊತೆ ಮಾತನಾಡುವಾಗ ಹಂಚಿಕೊಳ್ಳುತ್ತಿದ್ದರು.  ಅಂತಹದೊಂದು ಅಧ್ಯಯನ, ಆ ದಿನಗಳಲ್ಲಿ ಕನ್ನಡ ಸಾರಸ್ವತಲೋಕಕ್ಕೆ ಹೊಸದಂತೂ ಆಗಿತ್ತು.  ತುಂಬಾ ಮಂದಿ ಕುಸುಮಾ ಅವರನ್ನು ಅವರ ಆ ಅಧ್ಯಯನದ ಕಾರಣಕ್ಕಾಗಿಯೂ ವಿಶೇಷವಾಗಿ ಗುರುತಿಸುತ್ತಿದ್ದರು. ಆದರೆ, ಅಧ್ಯಯನದ ಟಿಪ್ಪಣಿಗಳೆಲ್ಲಾ ಎಲ್ಲೆಲ್ಲೋ ಚೆಲ್ಲಾಪಿಲ್ಲಿಯಾಗಿಹೋಗಿದೆ ಎಂಬಂತಹ ನಿರಾಶೆ, ವಿಷಾದಗಳನ್ನು  ಕುಸುಮಾ ವ್ಯಕ್ತಪಡಿಸುತ್ತಿದ್ದುದುಂಟು. ಆದರೆ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ನಂತರ,  ಈ ಅಧ್ಯಯನಕ್ಕೆ ಸಂಬಂಧಿಸಿ,  ʼಕಾಯದ ಕಾರ್ಪಣ್ಯʼ ಹೆಸರಿನ ಪುಸ್ತಕವನ್ನು ಮಂಗಳೂರಿನ ಡೀಡ್ಸ್‌ ಸಂಸ್ಥೆಯ  ಸಹಕಾರದಿಂದ (ಹೇಮಾಂಶು ಪ್ರಕಾಶನದ ಮೂಲಕ) ಪ್ರಕಟಿಸಿದರು.

ಎಂಬತ್ತರ ದಶಕದಲ್ಲಿ ಪತ್ರಿಕಾ ವೃತ್ತಿಯ ಆರಂಭದ ಆ ದಿನಗಳಲ್ಲಿ ಕುಸುಮಾ ನನಗೆ ಆತ್ಮೀಯರಾಗಿದ್ದರು. ನನ್ನ ಹಾಗೂ ಪರಮೇಶ್‌ನ  ರಿಜಿಸ್ಟರ್‌ ಮದುವೆಗೆ ಸಹಿ ಹಾಕಿದವರಲ್ಲಿ ಅವರೂ ಒಬ್ಬರು.  ಮಹಿಳಾ ಹಕ್ಕುಗಳ ವಿವಿಧ ಆಯಾಮಗಳನ್ನು ಕುರಿತು ಎಷ್ಟೊಂದು ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದೆವು. ಪರಸ್ಪರರ ವೈಯಕ್ತಿಕ ಬದುಕುಗಳ ಸೂಕ್ಷ್ಮಗಳನ್ನೂ ಜಡ್ಜ್‌ಮೆಂಟಲ್‌ ಆಗದ ದೃಷ್ಟಿಕೋನಗಳಲ್ಲಿ ಮಾತನಾಡಿಕೊಳ್ಳುತ್ತಿದ್ದೆವು.  ಇದಕ್ಕೆ ನಮ್ಮ  ʼವೇವ್‌ ಲೆನ್ತ್‌ ʼ  ಹೊಂದುತ್ತದೆ ಎಂದು ಪರಸ್ಪರ ಹೇಳಿಕೊಳ್ಳುತ್ತಿದ್ದೆವು.  ನಾವಿಬ್ಬರೂ ಬೇರೆ ಬೇರೆ ಸಂದರ್ಭಗಳಲ್ಲಿ ಬೆಂಗಳೂರಿನ ವರದಿಗಾರ  ವಿಭಾಗದಲ್ಲಿ ಅಲ್ಪ ಕಾಲ ಕೆಲಸ ಮಾಡಿದ್ದೇವೆ. ಕುಸುಮಾ ವರದಿಗಾರ ವಿಭಾಗದಲ್ಲಿದ್ದ ಸಂದರ್ಭದಲ್ಲಿ ನ್ಯೂಸ್‌ ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ನಾನು ಹೋಗಿ ಅವರ ಬಳಿ ನಿಂತು ಮಾತನಾಡುತ್ತಿದ್ದಲ್ಲಿ,  ಆಗ ವರದಿಗಾರ ವಿಭಾಗದಲ್ಲಿದ್ದ ಸಹೋದ್ಯೋಗಿಗಳು,  ʼಜೇಡ ಬಲೆ ಕಟ್ಟುತ್ತಿದೆʼ ಎಂದು ತಮಾಷೆ ಮಾಡುತ್ತಿದ್ದರು.

ಮೆಲು ದನಿಯಲ್ಲೇ ನಿಧಾನಕ್ಕೆ ಸದಾ ಅನುನಯದ ಮಾತುಗಳನ್ನಾಡುತ್ತಿದ್ದವರು ಕುಸುಮಾ . ಹೆಸರುಗಳನ್ನು ಮರೆಯುವುದು,  ʼಓಹ್‌ ನನಗೆ ಗೊತ್ತಿರಲಿಲ್ಲʼ ʼಓಹ್‌ ನನಗೆ ಗೊತ್ತೇ ಆಗ್ಲಿಲ್ಲʼ ಎಂದು ಸಂಕೋಚದ ದನಿಯಲ್ಲಿ ಹೇಳುವುದು ಅವರದೇ ಶೈಲಿ. ನಮ್ಮ ಕುಟುಂಬದ ಸ್ನೇಹಿತರಲ್ಲೊಬ್ಬರಾದ ಮಾಧವ ಮೂರ್ತಿ ಅವರನ್ನು ಕುಸುಮಾ ಬೇರೆ ಬೇರೆ ಸಂದರ್ಭಗಳಲ್ಲಿ  ಭೇಟಿಯಾದಾಗಲೆಲ್ಲಾ ಅವರ ಹೆಸರನ್ನು ಸದಾ ಮರೆತು ʼವೇದವ್ಯಾಸ್‌ ʼ ಎಂದೇ ಕರೆದು ʼಅಯ್ಯೋ ಮರೆತೇಬಿಟ್ಟೆʼ ಎಂದು ಮೆಲ್ಲಗೆ ಹಿಂಜರಿಕೆಯ ನಗು ಮೂಡಿಸುತ್ತಿದ್ದುದೂ ಕಣ್ಣಿಗೆ ಕಟ್ಟಿದೆ.

ಎಡ ಪಂಥದ ವಿಚಾರಧಾರೆಗಳನ್ನು ಹೊಂದಿದ ಕನ್ನಡದ  ಖ್ಯಾತ ಕಾದಂಬರಿಕಾರರಾದ ಭಾರತೀಸುತರ ಮಗಳು ಕುಸುಮಾ. ಆದರ್ಶವನ್ನು ಜೀವನ ಮೌಲ್ಯವಾಗಿಸಿಕೊಂಡು ಬದುಕುವಾಗಿನ ಕಷ್ಟನಷ್ಟಗಳನ್ನು ಕಂಡವರಾಗಿದ್ದವರು. ತಂದೆ, ಸೋದರಿ ಕ್ಯಾನ್ಸರ್‌ ಕಾಯಿಲೆಯಿಂದ ತೀರಿಕೊಂಡಿದ್ದರು. ವಂಶಪಾರಂಪರ್ಯವಾಗಿ ತಮಗೂ ಕ್ಯಾನ್ಸರ್‌ ಬರಬಹುದು ಎಂಬ ಎಚ್ಚರವನ್ನು ಅವರು ಹೊಂದಿದ್ದರು. ಅದು ನಿಜವೇ ಆಗಿ ಹೋಗಿದ್ದು ದುರಂತ. ಒಂದಿಲ್ಲೊಂದು ಬಗೆಯ ತಲ್ಲಣ, ಆತಂಕಗಳನ್ನು ಸದಾ ಮನದಲ್ಲಿ ತುಂಬಿಕೊಂಡಿರುತ್ತಿದ್ದ ಕುಸುಮಾ ನಗುನಗುತ್ತಲೋ ತಮಾಷೆ ಮಾಡುತ್ತಲೋ ಆ ಭಾರಗಳನ್ನು  ಹಗುರವಾಗಿಸುತ್ತಿದ್ದದ್ದು ಅವರದೇ ವಿಶಿಷ್ಟತೆ.  ʼನನಗೆ ತುಂಬಾ ದಾಕ್ಷಿಣ್ಯʼ ಎಂದು ಹೇಳಿಕೊಳ್ಳುತ್ತಿದ್ದ ಕುಸುಮಾ ಅನೇಕ ಅಸಂಗತ ಗ್ರಹಿಕೆಗಳಿಗೂ  ಕಾರಣರಾಗುತ್ತಿದ್ದರೇನೋ!   

ಕುಸುಮಾ ಅವರಿಗೆ ಹೆಸರು ತಂದುಕೊಟ್ಟ ಅವರ ಕೃತಿ

 ಆದರ್ಶಗಳನ್ನು ಹೊಂದಿದ ಸರಳವಾದ ಶಿಸ್ತುಬದ್ಧ ಬದುಕು ಅವರದು ಎಂದು ನನಗನಿಸುತ್ತಿತ್ತು.  ಒಂಟಿಯಾಗಿ ತಮ್ಮ ಆಯ್ಕೆಯ ಬದುಕನ್ನು ಬದುಕಿದ ಕುಸುಮಾ ತಮ್ಮ ಸಾಕು ನಾಯಿ ಶೂಜನ ಬಗ್ಗೆ ಇನ್ನಿಲ್ಲದ ಪ್ರೀತಿಯನ್ನು ಹೊಂದಿದವರಾಗಿದ್ದರು. ತಮ್ಮ ಪುಸ್ತಕ  ʼಪುಟಗಳ ನಡುವಿನ ನವಿಲುಗರಿʼಯಲ್ಲಿ (ಅಂಕಿತ ಪ್ರಕಾಶನ, ಬೆಂಗಳೂರು) ಅವರು ಬರೆದಿರುವ  ʼನನಗೊಬ್ಬ ಮಗನಿದ್ದʼ ಎಂಬ ಅಧ್ಯಾಯ, ಶೂಜನ ತಂಟೆ, ತಕರಾರುಗಳು, ಸಾಕುವ ಕಷ್ಟಗಳ ಜೊತೆಗೇ, ಅವನೊಡನೆಯ ಅವಿನಾಭಾವ ಬಂಧವನ್ನು ಚಿತ್ರಿಸುತ್ತದೆ. ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಆಗ ಇದ್ದದ್ದು ಒಂದೇ ಒಂದು ಪೆಟ್‌ ಷಾಪ್‌  ʼಗ್ಲೆನಾಂಡ್‌ ಪೆಟ್‌ ಸ್ಟೋರ್ಸ್‌ʼ .  ಅಲ್ಲಿ ಶೂಜನಿಗಾಗಿ ಅವರು ಖರೀದಿಸುತ್ತಿದ್ದ ಶಾಂಪೂ, ಮತ್ತಿತರ ಲಕ್ಷುರಿ ವಸ್ತುಗಳ ಬಗ್ಗೆ ಸಹೋದ್ಯೋಗಿಗಳು  ಕೀಟಲೆ ಮಾಡುತ್ತಾ ʼಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಕುಸುಮಾ ಮನೆ ನಾಯಿಯಾಗಿ ಹುಟ್ಟಬೇಕುʼ  ಎನ್ನುತ್ತಿದ್ದರು. ಕಚೇರಿಗೆ ಕುಸುಮಾ ಸ್ವತಃ ಮಾಡಿ ತರುತ್ತಿದ್ದ ನೀರು ದೋಸೆಗಳ ರುಚಿಯನ್ನು ಹಲವು ಸಹೋದ್ಯೋಗಿಗಳು ಈಗಲೂ ಮರೆತಿಲ್ಲ.   

ಇದೇ ಪುಸ್ತಕದಲ್ಲಿ ʼಮುತ್ತತ್ತಿ ಕಾಡಿನಲ್ಲಿ ಒಂದು ರಾತ್ರಿʼ ಎಂಬ ಅಧ್ಯಾಯವು ಮುತ್ತತ್ತಿಯಲ್ಲಿ ಬೀಡು ಬಿಟ್ಟಿದ್ದಂತಹ  ರಾಜೀವ್‌ ಗಾಂಧಿಯನ್ನು ಹತ್ಯೆ ಮಾಡಿದ ಎಲ್‌ಟಿಟಿಇ ಉಗ್ರರ ತಂಡದ  ಕುರಿತಾದ ವಿವರಗಳನ್ನು ದಾಖಲಿಸಿದೆ. ಮಂಡ್ಯದಲ್ಲಿ ಜಿಲ್ಲಾ ವರದಿಗಾರ್ತಿಯಾಗಿದ್ದಾಗ, ದಿನದ ಕೆಲಸ ಮುಗಿಸಿ ರಾತ್ರಿ ಮಲಗುವ ಸಿದ್ಧತೆಯಲ್ಲಿದ್ದಾಗ ಬೆಂಗಳೂರಿನ ಕಚೇರಿಯಲ್ಲಿ ಆಗ ಮುಖ್ಯ ವರದಿಗಾರರಾಗಿದ್ದ ಆರ್.ಪಿ. ಜಗದೀಶ್‌ ಅವರು  ʼಎಲ್‌ಟಿಟಿಇ ಉಗ್ರರ ತಂಡವೊಂದು ಮುತ್ತತ್ತಿಯಲ್ಲಿದೆ. ಸಾಧ್ಯವಾದರೆ ಸತ್ಯಾಂಶ ತಿಳಿದು ಸುದ್ದಿ ಕಳಿಸಿ ʼ ಎಂದು ಹೇಳಿದ್ದು, ʼನನ್ನ ಪಾಲಿಗೆ ಅದು ಸಾಮಾನ್ಯ ರಾತ್ರಿಯಾಗದು ಎಂಬ ಸೂಚನೆಯನ್ನು ನೀಡಿತುʼ ಎಂದು ಕುಸುಮಾ ಬರೆದುಕೊಂಡಿದ್ದಾರೆ. ಆ ನಂತರ ಬೆಂಬಿಡದೆ ಸಾಧ್ಯವಾದ ಎಲ್ಲಾ ಮೂಲಗಳಿಂದಲೂ ಮಾಹಿತಿ ಪಡೆಯಲು ಯತ್ನಿಸುವುದಲ್ಲದೆ ಕೇಂದ್ರ ಮಾಹಿತಿ ವಿಭಾಗ, ಮಂಡ್ಯ ಜಿಲ್ಲೆಯ ಅಧಿಕಾರಿಯೊಬ್ಬರೊಂದಿಗೆ ಆ ಅಪರಾತ್ರಿಯಲ್ಲಿ ಕಾರೊಂದನ್ನು ಬಾಡಿಗೆಗೆ ಪಡೆದು ಸ್ಥಳಕ್ಕೆ ಭೇಟಿ ನೀಡಿ, ಉಗ್ರರು ಅಡಗಿದ್ದ ಮನೆ ಹಾಗೂ ಅಲ್ಲಿ ನಡೆದ ಕಾರ್ಯಾಚರಣೆಯ ವಿವರಗಳನ್ನು ಪಡೆದುಕೊಂಡ ಬಗೆಯನ್ನು ತುಂಬಾ ಆಸಕ್ತಿದಾಯಕವಾಗಿ ಈ ಅಧ್ಯಾಯದಲ್ಲಿ ಕುಸುಮಾ ವಿವರಿಸಿದ್ದಾರೆ.  ಪತ್ರಕರ್ತರಿಗಿರಬೇಕಾದ ಕುತೂಹಲ, ಕೆಲಸದ ಕುರಿತಾದ ಪ್ರೀತಿ, ಶ್ರದ್ಧೆ, ಬದ್ಧತೆಗಳಿಗೆ ಮಾದರಿಯಾಗಿರುವಂತಹದ್ದು ಈ ಪ್ರಸಂಗ.  

ಹಾಗೆಯೇ ʼಸುದ್ದಿಯಾಗದ ಸುದ್ದಿʼ ಅಧ್ಯಾಯವು ವರದಿಗಾರರಿಗೆ ಇರಬೇಕಾದ ಜವಾಬ್ದಾರಿಯನ್ನು ದಾಖಲಿಸುವಂತಹದ್ದು. 1991ರಲ್ಲಿ ಕುಸುಮಾ ಅವರು ಮಂಡ್ಯ ಜಿಲ್ಲೆ ವರದಿಗಾರ್ತಿಯಾಗಿದ್ದ ಸಂದರ್ಭದಲ್ಲಿ ತಮಿಳುನಾಡಿನ ಪರವಾಗಿ ಕಾವೇರಿ ನ್ಯಾಯ ಮಂಡಳಿ ನೀಡಿದ್ದ ಮಧ್ಯಂತರ ತೀರ್ಪಿನಿಂದಾಗಿ   ಮಂಡ್ಯ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಂಡಿತ್ತು. ಈ ಸಂದರ್ಭದಲ್ಲಿ ʼಗುಂಡ್ಲುಪೇಟೆಯ ಗಡಿ ಗ್ರಾಮದಲ್ಲಿ ಯಾರೊ ತಮಿಳರು ಕೆಲವು ಕನ್ನಡಿಗರ ತಲೆ ಬೋಳಿಸಿದರುʼ ಎಂಬ ಸುದ್ದಿ ಹರಡಿ ಕಾವೇರಿ ಚಳವಳಿ ತೀವ್ರ ಹಿಂಸೆಗೆ ತಿರುಗಿತ್ತು. ʼವಾಸ್ತವವಾಗಿ ಗುಂಡ್ಲುಪೇಟೆ ಸಮೀಪ ಯಾವ ತಮಿಳು ಹುಡುಗರು, ಯಾವ ಕನ್ನಡ ಹುಡುಗರ ತಲೆ ಬೋಳಿಸಿದರೆಂದು ಗೊತ್ತಾಗಲೇ ಇಲ್ಲ……ಅದು ಸುಳ್ಳು ಸುದ್ದಿಯಾಗಿತ್ತು. ಒಂದು ಸುಳ್ಳು ಸುದ್ದಿಯಿಂದ ಎಷ್ಟೆಲ್ಲ ಅನಾಹುತ ಆಗಿ ಹೋಯಿತುʼ ಎಂದು ಕುಸುಮಾ ಬರೆಯುತ್ತಾರೆ.  ಇದೇ ಸಂದರ್ಭದಲ್ಲಿ ʼಸುದ್ದಿ ಮಾಡಬಾರದುʼ ಎಂದು ಷರತ್ತು ಹಾಕಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಜನರಲ್‌ ಮ್ಯಾನೇಜರ್‌,  ಯಾರೋ ಪುಂಡರಿಂದ ಯದ್ವಾತದ್ವಾ ತಲೆ ಬೋಳಿಸಿಕೊಂಡು ಹೆದರಿದ್ದಂತಹ ತಮಿಳುನಾಡಿನಿಂದ ಕಬ್ಬು ಕಟಾವಿನ ಕೂಲಿ ಕೆಲಸಕ್ಕೆ ಬಂದಿದ್ದ ತಾಯಿ, ಮಗ, ಸೊಸೆ, ಮೊಮ್ಮಗನನ್ನು ಭೇಟಿ ಮಾಡಿಸುತ್ತಾರೆ. ಜನರಿಗೆ ವಿಷಯ ತಿಳಿಯುವ ಮೊದಲೇ ಕಾರಿನಲ್ಲಿ ಈ ಸಂತ್ರಸ್ತರನ್ನು ಸುರಕ್ಷಿತವಾಗಿ ತಮಿಳುನಾಡಿಗೆ ವಾಪಸ್‌ ಕಳಿಸುವ ಸಿದ್ಧತೆಯನ್ನೂ  ಆ ಜನರಲ್‌ ಮ್ಯಾನೇಜರ್‌  ಮಾಡಿಕೊಂಡಿರುತ್ತಾರೆ. ಆಗ, ಯಾರಿಗೂ ಸಿಕ್ಕಿರದ ಈ ʼಸ್ಕೂಪ್‌ʼ,   ವರದಿ ಮಾಡಬೇಕೇ ಬೇಡವೇ ಎಂಬ ದ್ವಂದ್ವ ಕಾಡಿದುದನ್ನು ಕುಸುಮಾ ಬರೆಯುತ್ತಾರೆ. ʼಸುದ್ದಿ ಮಾಡುವುದಿಲ್ಲ ʼ ಎಂದು ನಿರ್ಧರಿಸಿ ಮನೆಗೆ ಬಂದ ನಂತರ ಈ ಬಗೆಯ ಘಟನೆ ನಡೆದಿದೆ ಎಂದು ವೃತ್ತಿಬದ್ಧತೆಗೆ ಅನುಗುಣವಾಗಿ ಸಂಪಾದಕರು, ಸುದ್ದಿ ಸಂಪಾದಕರಿಗೆ ಮಾಹಿತಿ ನೀಡುತ್ತಾರೆ. ʼಸುದ್ದಿ ಮಾಡುವುದು ಬೇಡ, ಆದರೆ ಮಂಡ್ಯ ಚಳವಳಿಯ ಬಗ್ಗೆ ಲೇಖನ ಬರೆಯುವಾಗ ಸೇರಿಸಿಕೊಳ್ಳಬಹುದುʼ ಎಂದು ಅವರುಗಳೂ ಸಲಹೆ ನೀಡುತ್ತಾರೆ ಎಂಬುದನ್ನು ದಾಖಲಿಸಿದ್ದಾರೆ.  

ಸುಳ್ಳು ಸುದ್ದಿಗಳು ಹಾಗೂ ಅತಿರಂಜಿತ ಸುದ್ದಿಗಳು ವಿಜೃಂಭಿಸುತ್ತಿರುವ ಇಂದಿನ ಕಾಲದಲ್ಲಿ ವರದಿಗಾರರು ಕೆಲವು ಸಂದರ್ಭಗಳಲ್ಲಿ ತಾಳಬೇಕಾದ ಸಂಯಮ, ವಿವೇಕಗಳಿಗೆ ಇದು ಉದಾಹರಣೆ.

ಹಾಗೆಯೇ ಸುದ್ದಿ ಮನೆಯೊಳಗಿನ ರಾಜಕೀಯಗಳು, ಅಹಂಗಳು, ಸಣ್ಣತನಗಳು, ಬರೆಯಲು ಬರೆಯುವುದಿಲ್ಲವೆಂಬ ಗೂಬೆ ಕೂರಿಸಿ ಆತ್ಮವಿಶ್ವಾಸ ಕುಂದಿಸಿ ಮೆರೆಯುವವರು  – ಹೀಗೆ ಭಿನ್ನ ವ್ಯಕ್ತಿತ್ವಗಳ ಚಿತ್ರಣಗಳೂ ಇಲ್ಲಿವೆ.  ʼಆದರೆ ಇದು ಒಂದು ಮುಖ. ಈ ಸುದ್ದಿಲೋಕದಲ್ಲಿ ಮಾನವೀಯತೆಯೂ ಇದೆʼ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.   

ಸೂಕ್ಷ್ಮ ಮನಸ್ಸಿನ ಕುಸುಮಾ ಹಲವು ವಿಚಾರಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸಿ ಅನಗತ್ಯವಾದ ನೋವುಗಳನ್ನು ಅನುಭವಿಸುತ್ತಿದ್ದದ್ದೂ ಇತ್ತು. ಹಾಗೆಯೇ ಅತಿ ಸೂಕ್ಷ್ಮವಾಗಿ ಗ್ರಹಿಸುತ್ತಿದ್ದುದರಿಂದ ಕೆಲವು ಕಠಿಣ ಸತ್ಯಗಳು ಕಣ್ಣಿಗೆ ರಾಚುತ್ತಿದ್ದುದೂ ಇತ್ತು.  

ಪತ್ರಿಕಾಲಯದಲ್ಲಿ ಸುಮಾರು ಎರಡು ದಶಕಗಳ ಉದ್ಯೋಗದ  ನಂತರ ಸ್ವಯಂ ನಿವೃತ್ತಿ ಪಡೆದ ಮೇಲೆ ಕುಸುಮಾ ಸುಮ್ಮನೆ ಕೂರಲಿಲ್ಲ. ಬರವಣಿಗೆಯನ್ನು ಮುಂದುವರಿಸಿದರು.  ʼಮಣ್ಣಿಂದ ಎದ್ದವರುʼ (ನವಕರ್ನಾಟಕ ಪ್ರಕಾಶನ) ಎಂಬ ಕಾದಂಬರಿ ಹಾಗೂ ʼ ನೆನಪುಗಳ ಬೆನ್ನೇರಿʼ  (ಹೇಮಾಂಶು ಪ್ರಕಾಶನ, ಮಂಗಳೂರು) ಎಂಬ ಕಥಾ ಸಂಕಲನವನ್ನೂ ಅವರು ಪ್ರಕಟಿಸಿದ್ದಾರೆ.

ಕುಸುಮಾ ಅವರೊಂದಿಗೆ ಲೇಖಕಿ

ಪತ್ರಿಕಾಲಯ ಬಿಟ್ಟ ಮೇಲೆ ಅವರೊಂದಿಗಿನ ಒಡನಾಟ ಕಡಿಮೆಯಾಗಿತ್ತು. ಧಾವಂತದ ನಮ್ಮನಮ್ಮದೇ ಬದುಕುಗಳಲ್ಲಿ ಕಳೆದು ಹೋಗಿದ್ದೆವು. ನನ್ನ ನಿವೃತ್ತಿಯ ನಂತರ ನಮ್ಮ ಒಡನಾಟ ಆಗೊಮ್ಮೆ ಈಗೊಮ್ಮೆ ಫೋನ್‌ ಕಾಲ್‌, ವಾಟ್ಸ್ಯಾಪ್‌ ಚಾಟ್‌ಗಳಿಗೆ ಸೀಮಿತವಾಗಿತ್ತು. ಬುಡಕಟ್ಟು ಸಮುದಾಯದವರ  ಜೊತೆ ಕೆಲಸ ಮಾಡುತ್ತಿದ್ದ ಕ್ಷೀರಸಾಗರ ಅವರು ಬ್ರೈನ್‌ ಹೆಮರೇಜ್‌ ಆಗಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ  ತೀರಿಕೊಳ್ಳುವ ಮೊದಲು ಅವರನ್ನು ನೋಡುವುದಕ್ಕಾಗಿ ಹೋಗಿದ್ದ ನಾವು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದೆವು. ಇದಾಗಿ ಆಗಲೇ ನಾಲ್ಕು ವರ್ಷಗಳು ಕಳೆದು ಹೋಗಿವೆ. ಅದೇ ಕುಸುಮಾ ಜೊತೆಗಿನ ನನ್ನ ಕಡೆಯ ಭೇಟಿ.  ಆದರೆ ಆಗೊಮ್ಮೆ ಈಗೊಮ್ಮೆ ಫೋನ್‌ ಕರೆಗಳಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತಾಗಿ ಚರ್ಚಿಸುತ್ತಾ ನಮ್ಮ ಚಿಂತನೆಗಳಿಗೆ ಪರಸ್ಪರ ಬಲಗಳನ್ನು ತುಂಬಿಕೊಳ್ಳುತ್ತಿದ್ದೆವು.  ಈ ವರ್ಷ ಮಾರ್ಚ್‌ ತಿಂಗಳಲ್ಲಿ ಅವರ  ಆರೋಗ್ಯ ವಿಚಾರಿಸಿದ ನನ್ನ  ವಾಟ್ಸ್ಯಾಪ್‌ ಟೆಕ್ಸ್ಟ್‌ ಸಂದೇಶಕ್ಕೆ ʼ ಆರೋಗ್ಯ ಸುಧಾರಿಸುತ್ತಿದೆ……ʼ ಎಂದು ಕಳಿಸಿದ ಸಂದೇಶವೇ ಕೊನೆ. ಆ ನಂತರ ಅವರ ಆರೋಗ್ಯ ಹದಗೆಟ್ಟಿರುವುದು ನನಗೆ ಗೊತ್ತಾಗಲೇ ಇಲ್ಲ. ಹೀಗಾಗಿಯೇ ಭಾನುವಾರ ಸಂಜೆ (ಜೂನ್‌ 21)  ʼ ಮಾನಸ ಬಳಗʼದ ಎಚ್‌ ಎಸ್‌ ರಾಜೇಶ್ವರಿ ಅವರು  ಕುಸುಮಾ ನಿಧನದ ವಾರ್ತೆಯನ್ನು ಫೋನ್‌ನಲ್ಲಿ ತಿಳಿಸಿದಾಗ ಆಘಾತವಾಗಿತ್ತು. 

ʼ ಸತ್ತ ನಂತರ  ತಮ್ಮ ದೇಹವನ್ನು ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಗೆ ದಾನ ಮಾಡುವ ಕಾರ್ಡ್‌ ಅನ್ನು ಕುಸುಮಾ 2014ರಲ್ಲೇ ಮಾಡಿಸಿಟ್ಟಿದ್ದರುʼ ಎಂದು  ಕುಸುಮಾ ತೀರಿಕೊಂಡ ಸಂಜೆ ಕುಸುಮಾ ಅವರ ಅಕ್ಕನ ಮನೆಗೆ ಲೇಖಕಿ ಹಾಗೂ ಗೆಳತಿ ನೇಮಿಚಂದ್ರ ಜೊತೆ ಹೋದಾಗ ಅವರ ತಂಗಿ ಸ್ವರ್ಣ ಕಾರ್ಡ್‌ ಅನ್ನು ತೋರಿಸಿದರು. ʼಆದರೆ, ಕ್ಯಾನ್ಸರ್‌  ಇದ್ದ ಕಾರಣ ದೇಹವನ್ನು ಅಂಗೀಕರಿಸಲಾಗುವುದಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ದರಿಂದ ವಿದ್ಯುತ್‌ ಚಿತಾಗಾರದಲ್ಲಿ  ಕ್ರಿಮೇಟ್‌ ಮಾಡಬೇಕಾಯಿತು.  ಕುಸುಮಾ ಅಂದುಕೊಂಡಂತೆ ಆಗಲಿಲ್ಲʼ ಎಂದು ಸ್ವರ್ಣ ನಿಟ್ಟುಸಿರಿಟ್ಟರು. ʼಭೇಟಿಯಾಗೋಣʼ ಎಂದು ಕುಸುಮಾ ಈ ವರ್ಷ ಜನವರಿ ತಿಂಗಳಲ್ಲಿ ಕಳಿಸಿರುವ  ಮೊಬೈಲ್‌ ಟೆಕ್ಸ್ಟ್‌ ಸಂದೇಶ ಇದೆ.  ನಾನೂ ಅದಕ್ಕೆ ಸ್ಪಂದಿಸಿದ್ದೆ. ಆದರೆ ಅಂದುಕೊಂಡಂತೆ ಆ ಭೇಟಿ ಸಾಧ್ಯವಾಗಲೇ ಇಲ್ಲವಲ್ಲ ಎಂಬ ಕೊರಗು ನನ್ನನ್ನೂ ಕಾಡುತ್ತಿದೆ.  ಮತ್ತೆಂದೂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂಬ ಅರಿವು ನನ್ನ ಮನದ ಮೂಲೆಯಲ್ಲಿ ಖಾಲಿತನ, ಶೂನ್ಯವನ್ನು ತುಂಬಿದೆ.

ಸಿ ಜಿ ಮಂಜುಳಾ

ಹಿರಿಯ ಪತ್ರಕರ್ತರು

ಇದನ್ನೂ ಓದಿ- ರೂಪಕವಾಗಿ ಧ್ವನಿಸುವ ಪುಟ್ಟ ಸಿನಿಮಾ ʼಹರಿಶ್ಚಂದ್ರʼ

More articles

Latest article