ರಾಜಪ್ಪ ದಳವಾಯಿ ಅವರ ಎಂಟು ನಿಮಿಷಗಳ ಪುಟ್ಟ ಸಿನಿಮಾ ಹರಿಶ್ಚಂದ್ರ. ಇದು ಕಿರುಚಲನಚಿತ್ರಗಳ ವಿಭಾಗದಲ್ಲಿ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇನ್ಕಾನೇರ್ಷನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2025 ರಲ್ಲಿ ನಡೆದ ಸ್ಪರ್ಧೆಯಲ್ಲಿ ಉತ್ತಮ ಚಿತ್ರದ ಪ್ರಶಸ್ತಿ ಇದಕ್ಕೆ ದೊರೆತಿದೆ. ಉತ್ತಮ ಚಿತ್ರಕತೆ, ಉತ್ತಮ ನಿರ್ದೇಶಕ ಪ್ರಶಸ್ತಿ ರಾಜಪ್ಪ ಅವರಿಗೆ ದೊರೆತಿದೆ. ಉತ್ತಮ ಡಿಒಪಿ, ಉತ್ತಮ ಸಂಕಲನ ಪ್ರಶಸ್ತಿ, ಉತ್ತಮ ನಟ ಪ್ರಶಸ್ತಿ, ಉತ್ತಮ ಕತೆ, ಉತ್ತಮ ಪೋಷಕ ನಟನಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಎಲ್ಲ ಕ್ಷೇತ್ರಗಳಲ್ಲೂ ಉತ್ತಮವಾಗಿ ಮೂಡಿ ಬಂದಿರುವ ಈ ಕಿರುಚಿತ್ರವನ್ನು ಸಮಸ್ತ ಮಾನವರು ನೋಡಬೇಕಾಗಿದೆ. ಯಾಕೆಂದರೆ ಇಂದು ಭೂಮಿಗಾಗಿ ಹಪಹಪಿಸುವ ಹಾಗೂ ಹಣದ ಹಿಂದೆ ಬಿದ್ದು ತಮ್ಮನ್ನು ಉದ್ಧಾರ ಮಾಡಿಕೊಳ್ಳುತ್ತಾ ಇತರರನ್ನು ಅಂದರೆ ಭೂಮಿ ಕಸಿದು ರೈತರ ಮುಂದಿನ ಪೀಳಿಗೆಯನ್ನು ದುಸ್ಥಿತಿಗೆ ತಳ್ಳುವ ಜಾಗತೀಕರಣದ ಹಣದ ಹಪಹಪಿಗೆ ಕನ್ನಡಿ ಹಿಡಿದಿದೆ ಈ ಚಿತ್ರ.
ಸಿನಿಮಾದ ಕತೆ ಬಹಳ ಚಿಕ್ಕದು. ಇಂಥ ಸೂಕ್ಷ್ಮ ಕಿರುಕತೆಗಳು ಹುಟ್ಟುತ್ತಿರುವ ಇಂದಿನ ಕಾಲದಲ್ಲಿ ಈ ಕತೆ ವಿಸ್ತರಿಸುವ ಮನೋಭೂಮಿಕೆ ಅತ್ಯಂತ ಉತ್ತಮ ರೂಪಕವಾಗಿ ಕಾಣುತ್ತದೆ. ‘ಸಾಲ ತೀರಿಸ್ತಾರಂತೆ ಈ ಭೂಮಿ ಸಾಲ ಯಾರಾದರೂ ತೀರಸಕ್ಕೆ ಆಗ್ತದಾ’ ಎಂದು ಕೇಕೆ ಹಾಕುವ ಹೆಣ ಸುಡುವ ಕೆಂಡಗಣ್ಣಸ್ವಾಮಿ ಉರುಫ್ ಹರಿಶ್ಚಂದ್ರ ಹೆಸರಿಂದ ಹಿಡಿದು ಅವನಾಡುವ ಮಾತು ಮತ್ತು ಅಲ್ಲಿನ ವಾತಾವರಣ ಎಲ್ಲವೂ ರೂಪಕವಾಗಿ ನೋಡುಗರನ್ನು ತಟ್ಟುತ್ತದೆ. ಎಷ್ಟೋ ತತ್ತ್ವಜ್ಞಾನಿಗಳ ಮಾತೊಂದು ಹೀಗೆ ಇಂದು ದೃಶ್ಯದಲ್ಲಿ ರೂಪಕವಾಗಿ ಪ್ರತಿಬಿಂಬಿತವಾಗಿ ಕಾಣುವುದೇ ಅದ್ಭುತ. ನಿರ್ದೇಶಕರೊಬ್ಬರ ಕಲೆಗಾರಿಕೆಗೊಂದು ನಿದರ್ಶನ. ಇದಕ್ಕೆ ಪ್ರಶಸ್ತಿ ಬಂದಿದೆ ಎಂಬುದು ಹೆಗ್ಗಳಿಕೆಯಲ್ಲ, ಇದಕ್ಕೆ ಮತ್ತಷ್ಟು ಪ್ರಶಸ್ತಿಗಳು ಬಂದರೂ ಹೆಮ್ಮೆಯೇ. ಆದರೆ ನನಗೆ ರಾಜಪ್ಪ ಅವರ ಪ್ರತಿಭೆಯ ಬೆಸ್ಟ್ ಆಫ್ ದಿ ಬೆಸ್ಟ್ ಎಂಬುದನ್ನು ಇದು ಕಾಣಿಸಿತು. ಪ್ರತಿ ದೃಶ್ಯ ಕೂಡ ಮನುಷ್ಯರ ವಿಡಂಬನೆಯನ್ನು ದರ್ಶಿಸುತ್ತದೆ. ಹಾಗೆಯೇ ನೋಡುವ ನೋಟವನ್ನು ಹಿಗ್ಗಿಸುತ್ತದೆ. ಈ ಭೂಮಿಯನ್ನು ಕಿತ್ತು ತಿನ್ನುತ್ತಾ ಅದರ ಮೇಲೆ ಯಜಮಾನಿಕೆಯನ್ನೇರಿ ಕುಣಿಯುವ ಎಲ್ಲಾ ರೀತಿಯ ಹಿಂಸೆಗಳ ಅನಾವರಣವಾಗಿ ಕಾಣುತ್ತದೆ.
‘ಸೋರುತಿಹುದು ಮನೆಯ ಮಾಳಿಗಿ’ ಹಾಡಿನ ಮೂಲಕ ಒಬ್ಬ ವ್ಯಾಪಾರಿಯ ಬಾಯಿಯಿಂದ ನುಡಿಸುತ್ತಾ ಅವನಿಂದಲೆ ‘ಕಾಯಿ ಕರ್ಪೂರ ಬ್ಯಾಡವಾ ಸರ್’ ಎಂಬಲ್ಲಿಂದಲೇ ಕತೆ ತನ್ನ ಶಕ್ತಿಯನ್ನು ತೋರುತ್ತದೆ. ‘ಮನೆಯ ಮಾಳಿಗಿ’ ಶರೀಫರ ರೂಪಕ. ಈ ರೂಪಕ ಇಡೀ ವಿಶ್ವದ ಇಂದಿನ ವಿದ್ಯಮಾನಗಳನ್ನು ಹಿಡಿದಿಟ್ಟಿದೆ. ಎಲ್ಲೆಲ್ಲೂ ಯುದ್ಧದ ಅಹಂಕಾರ, ಜಾತಿಗಳ ನಡುವಿನ ಅಹಂಕಾರ, ಧರ್ಮ-ಧರ್ಮಗಳ ಶ್ರೇಷ್ಠತೆಯ ವ್ಯಸನಗಳನ್ನು ನೋಡುತ್ತಿರುವ ಯಾರಿಗಾದರೂ ಸರಿ ಈ ಸಿನಿಮಾ ಒಂದು ದರ್ಶನವನ್ನು ಪಡೆಯುವಂತೆ ಮಾಡುತ್ತದೆ. ಕುಂಭಮೇಳದ ಸಾವುಗಳು ಐ.ಪಿ.ಎಲ್. ಸಾವುಗಳ ಹಿಂದಿನ ಸುಳ್ಳನ್ನು ಮನುಷ್ಯರ ಭ್ರಮೆಯನ್ನು ನುಚ್ಚುನೂರು ಮಾಡುತ್ತದೆ.
‘ಕಣ್ಣು ತೆರೆದು ನೋಡಿದೊಡನೆ ಎಲ್ಲೆಲ್ಲೂ ಡಂಬಾಚಾರ’ ಎಂಬ ಎರಡು ಸಾಲಿನ ತುಣುಕುಗಳು ಕೂಡ ಈಗಿನ ಆಧುನಿಕತೆಯ ಸೋಗನ್ನು ಕಟ್ಟಿಕೊಡುತ್ತದೆ.
ಬೆರಣಿ, ಸೀಮೆಎಣ್ಣೆಗಾಗಿ ಪಡೆದ ಸಾಲ ವಸೂಲಿಗೆ ಬರುವ ಬ್ಯಾಂಕಿನ ಅಧಿಕಾರಿಯ ಡಂಬತನವನ್ನು ಅತ್ಯಂತ ಶಕ್ತವಾಗಿ ಇಂದಿನ ಪರಿಸ್ಥಿತಿಯಲ್ಲಿ ವಿಚಾರಕ್ಕೆ ಒಡ್ಡುತ್ತದೆ. ಸಾವಿರಾರು ಕೋಟಿ ಸಾಲ ಮಾಡಿದ ವ್ಯಕ್ತಿಗಳನ್ನು ಬಿಟ್ಟು ಸ್ಮಶಾನದಲ್ಲಿ ಹಲವಾರು ಅನಾಥ ಶವಗಳನ್ನು ಸುಡುತ್ತಾ ಕಾಯಕ ಮಾಡುವ ವ್ಯಕ್ತಿಯ ಹಿಂದೆ ಬೀಳುವ ಅಧಿಕಾರಿಯ ಚಿತ್ರಣ ನಮ್ಮನ್ನು ನಾವೇ ವಿಡಂಬಿಸುವಂತಿದೆ. ಅದು ‘ಡ್ಯೂಟಿ’ ಎಂಬ ಪದಬಳಕೆಯ ಮೂಲಕ ಇಂದಿನ ಯುವಕರ ಕೆಲಸಗಳ ಸ್ಥಿತಿಯನ್ನು ಅನಾವರಣ ಮಾಡುತ್ತದೆ. ಹಣವಿಲ್ಲದೆ ಅಥವಾ ಕನಿಷ್ಠ ಹಣಕ್ಕಾಗಿ ದುಡಿಯುತ್ತಿರುವ ಇಂಥ ಕಾರ್ಮಿಕರ ಬದುಕನ್ನು ಅವರ ಮಾನವೀಯತೆಯನ್ನು ಪ್ರಚುರ ಪಡಿಸುತ್ತದೆ.
ಈ ಭೂಮಿಯೇ ತನ್ನದೆಂದು ಬಿಂಬಿಸುವ ಅಧಿಕಾರಶಾಹಿ, ರಾಜಕಾರಣಿಗಳ ಡಂಬಾಚಾರಕ್ಕೆ ದೃಶ್ಯರೂಪಕಗಳು ಕಾಣಿಸುವಂತೆ ಮಾಡುವ ನಟರೂ ಕೂಡ ಅವರ ಆಂಗಿಕಾಭಿನಯಗಳ ಮೂಲಕ ಕಟ್ಟಿಕೊಡುವ ಅಭಿನಯ ಮನೋಜ್ಞವಾಗಿದೆ. ಅವರ ಅಭಿನಯವನ್ನು ಹೇಳಲು ನನ್ನಲ್ಲಿ ಪದಗಳಿಲ್ಲ. ಸಮಂತ ಮೈತ್ರೇಯಾ ಅವರ ಅಭಿನಯವಂತೂ ನೋಟ, ಆಂಗಿಕ ಅಭಿನಯ, ದೇಹಭಾಷೆ, ಸಂಭಾಷಣೆಯನ್ನು ಹೇಳುವ ರೀತಿ ಎಲ್ಲವೂ ರೂಪಕವಾಗಿ ನೋಡುಗರ ಎದೆಯನ್ನು ಮೆಟ್ಟಿ ತುಳಿಯದೆ ಬಿಡದು. ಪದ್ಮಾ ದೇವರಾಜ ಅವರು ಮಹಿಳೆಯರ ರೂಪಕವಾಗಿ ಬಿಡುತ್ತಾರೆ. ಚಳುವಳಿಗಳ ಹೆಸರಲ್ಲಿ ಸಂಸಾರ ಮರೆತರೂ ಅವರೊಂದು ಸಾರ್ಥಕತೆಗೆ ದುಡಿಯುವ ಹೆಮ್ಮೆ ಎಂಬುದು ಒಂದು ಕಡೆಯಾದರೆ ಅದು ಅದೇ ಮಹಿಳೆಯ ಸ್ಥಿತಿಯನ್ನು ಅನಾವರಣಗೊಳಿಸುತ್ತದೆ ಎಂಬುದು ಇನ್ನೊಂದೆಡೆ. ಅವಳ ದುಡಿಮೆ ಅವಳದು. ಹೀಗೆ ಈ ಎರಡು ಲೋಕದ ಒಳ-ಹೊರಗಣ ಚಿತ್ರಣವನ್ನು ಕ್ಷಣದಲ್ಲಿ ದಾಖಲಿಸುತ್ತದೆ.
ಬರೀ ಎಂಟು ನಿಮಿಷಗಳ ಈ ಸಿನಿಮಾ ಮಾನವರ ಹತ್ತಾರು ನಡೆನುಡಿಗಳನ್ನು ಹೆಚ್ಚು ಹೆಚ್ಚು ಶಕ್ತಿಯುತವಾಗಿ ಕಟ್ಟಿಕೊಡುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಬಹುಮಾನಗಳು ಬಂದಿರುವುದು ಅತಿಶಯೋಕ್ತಿಯಲ್ಲ. ಆದರೆ ಈ ಸಿನಿಮಾವನ್ನು ನೋಡುವ ಮೂಲಕ ಅವರ ಪ್ರತಿಭೆಗೆ ನಾವೆಲ್ಲ ಒಂದು ಚಪ್ಪಾಳೆಯನ್ನು ನೀಡೋಣ. ಅದನ್ನು ನೋಡಿ ನಾವು ಸಂತೋಷ ಪಡೋಣ.
ಬಂಡಾಯ ಚಳುವಳಿಯ ಬೇರುಗಳೊಂದಿಗೆ ಬೆಳೆದು ಬಂದ ಬಾನು ಮುಷ್ತಾಕ್ ಹಾಗೂ ರಾಜಪ್ಪ ದಳವಾಯಿ ಅವರ ಈ ಸಾಧನೆಗಳನ್ನು, ಕನ್ನಡದ ಕತೆಗಳನ್ನು ಅಂತಾರಾಷ್ಟ್ರೀಯ ಓದುಗರಿಗೆ ತಲುಪಿಸಿದ ದೀಪಾಬಾಸ್ತಿಯವರನ್ನು ನೆನೆಯುತ್ತಾ ಸಿನಿಮಾ ನೋಡಿ, ಬಾನು ಅವರ ಕತೆಗಳನ್ನು ಓದುತ್ತಾ ಅವರಿಬ್ಬರನ್ನೂ ಅಭಿನಂದಿಸೋಣ.
ಪ್ರೊ.ಆರ್.ಸುನಂದಮ್ಮ
ನಿವೃತ್ತ ಪ್ರಾಧ್ಯಾಪಕರು.
ಇದನ್ನೂ ಓದಿ- ಕುಳಿತು ತಿನ್ನುವವರು, ದುಡಿದು ಉಣ್ಣುವವರು ಮತ್ತು ಬೆಂಕಿಯ ಮಳೆ