ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ರದ್ದು; ಆತಂಕದಲ್ಲಿ ಕಾರ್ಮಿಕರು, ನೆರವಿಗೆ ಸರ್ಕಾರಕ್ಕೆ ಮನವಿ

Most read

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿಗಳ ಸೇವೆ ಬಂದ್‌ ಆಗಿದೆ. ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಇಂದಿನಿಂದ ಬೈಕ್ ಟ್ಯಾಕ್ಸಿಗಳ ಸೇವೆ ಸ್ಥಗಿತಗೊಂಡಿದೆ.

ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಮುಖಂಡರು, ​​ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು, ಬೈಕ್‌ ಟ್ಯಾಕ್ಸಿ ನಿಷೇಧದಿಂದ ಗಿಗ್ ಕಾರ್ಮಿಕರಿಗೆ ಸಮಸ್ಯೆಯಾಗಿಲಿದ್ದು, ಅವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

ಈ ಸೇವೆಯನ್ನು ರದ್ದುಗೊಳಿಸಿದರೆ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರು ಸಂಪೂರ್ಣ ಜೀವನೋಪಾಯದ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ. ರಾತ್ರೋರಾತ್ರಿ ನಮ್ಮನ್ನು ನಿಷೇಧಿಸಬೇಡಿ. ನಮ್ಮೊಂದಿಗೆ ಮಾತನಾಡಿ. ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣಿಸಲು, ನಿಯಮಗಳನ್ನು ಪಾಲಿಸಲು ಸಿದ್ದರಿದ್ದೇವೆ. ನಮ್ಮ ಕುಟುಂಬಗಳು ಬದುಕಲು ಸಹಾಯ ಮಾಡಿ. ಸಮಸ್ಯೆಗಳಿದ್ದರೆ, ನಾವು ಅವುಗಳನ್ನು ಒಟ್ಟಾಗಿ ಪರಿಹರಿಸೋಣ. ನಮ್ಮ ಧ್ವನಿಯನ್ನು ನಿರ್ಲಕ್ಷಿಸಬೇಡಿ ಎಂದು ಮನವಿ ಸಲ್ಲಿಸಿದೆ.

ಬೈಕ್ ಟ್ಯಾಕ್ಸಿಗಳನ್ನು ಬೆಂಬಲಿಸಿರುವ ಐಟಿ ದಿಗ್ಗಜ ಮೋಹನದಾಸ್ ಪೈ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಎಕ್ಸ್‌ ಮೂಲಕ ಮನವಿ ಮಾಡಿದ್ದು, ಡಿಸಿಎಂ ಡಿ ಕೆ ಶಿವಕುಮಾರ್ ಅವರೇ, ದಯವಿಟ್ಟು ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಿ. ಅವು ದೊಡ್ಡ ಕೆಲಸ ಮಾಡುತ್ತವೆ ಮತ್ತು ನಾಗರಿಕರಿಗೆ ಬಹಳ ಉಪಯುಕ್ತ ಸೇವೆ ಸಲ್ಲಿಸುತ್ತಿವೆ. ನಮ್ಮ ಮೆಟ್ರೋ ವೇಳಾಪಟ್ಟಿಯಲ್ಲಿ ಬಹಳ ಹಿಂದಿದೆ, ಬಸ್ ಸೇವೆ ಅಸಮರ್ಪಕವಾಗಿದೆ, ನಾವು ವೈಯಕ್ತಿಕ ವಾಹನಗಳನ್ನು ಬಳಸುವುದು ಕಷ್ಟಸಾಧ್ಯವಾಗಿದೆ. ಬೈಕ್ ಟ್ಯಾಕ್ಸಿಗಳು ವಾಹನಗಳನ್ನು ಕಡಿಮೆ ಮಾಡುತ್ತವೆ. ದಯವಿಟ್ಟು ಮಧ್ಯಪ್ರವೇಶಿಸಿ ಮತ್ತು ಅನುಮತಿ ನೀಡಿ ಎಂದು ಕೋರಿದ್ದಾರೆ.

More articles

Latest article