ತಿರುವನಂತಪುರ: ಭಾರತ ಮಾತೆಯ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾನದಂಡ ಇಲ್ಲದ ಕಾರಣ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅದನ್ನು ಬಳಸಲು ಅನುಮತಿ ನೀಡುವುದು ಅಸಾಧ್ಯ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.
ರಾಜಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದನ್ನು ಕಾರ್ಯಕ್ರಮ ಪಟ್ಟಿಗೆ ಸೇರಿಸಲು ರಾಜಭವನ ಒತ್ತಾಯಿಸಿತ್ತು. ಆದರೆ ಅದನ್ನು ನಿರಾಕರಿಸಿ, ಕಾರ್ಯಕ್ರಮವನ್ನು ರಾಜ್ಯ ಕೃಷಿ ಇಲಾಖೆ ಬೇರೆಡೆಗೆ ಸ್ಥಳಾಂತರಿಸಿತ್ತು.
ಈ ಬೆಳವಣಿಗೆ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರ ಭಾರತ ಮಾತೆಯ ಭಾವಚಿತ್ರ ಹಾಗೂ ಅದಕ್ಕೆ ಸಂಬಂಧಿಸಿದ ಮಾನದಂಡಗಳ ಬಗ್ಗೆ ಸಂವಿಧಾನವಾಗಲೀ, ಭಾರತ ಸರ್ಕಾರವಾಗಲೀ ಅಧಿಕೃತವಾಗಿ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ವಿವಾದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್, ಭಾರತ ಮಾತೆಯ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ತಿಳಿಸಿದ್ದಾರೆ.
ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಸರ್ಕಾರಿ ಕಾರ್ಯಕ್ರಮಗಳನ್ನು ರಾಜಕೀಯ ಕಾರ್ಯಕ್ರಮಗಳಾಗಿ ಪರಿವರ್ತಿಸಬಾರದು ಎಂದು ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ಅವರು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಅವರೂ ರಾಜ್ಯಪಾಲರ ನಡೆಗೆ ಕಿಡಿ ಕಾರಿದ್ದಾರೆ.
ರಾಜಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ, ಆರ್ ಎಸ್ ಎಸ್ ಬಳಸುವ ಭಾರತ ಮಾತೆಯ ಭಾವಚಿತ್ರ ಬಳಸಲಾಗಿತ್ತು. ಅದರಲ್ಲಿ ಭಾರತದ ಧ್ವಜ ಇರಲಿಲ್ಲ. ರಾಜಕೀಯ ಸಂಘಟನೆಯ ಧ್ವಜ ಅದಾಗಿತ್ತು. ಹೀಗಾಗಿ ಪುಷ್ಪನಮನ ಸಲ್ಲಿಸಲಿಲ್ಲ ಎಂದು ಸಚಿವ ಪ್ರಸಾದ್ ತಿಳಿಸಿದ್ದಾರೆ.