ಬೆಳ್ತಂಗಡಿ : ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಬುರುಡೆ ಷಡ್ಯಂತ್ರದ ತನಿಖೆಯನ್ನು ಪೂರ್ಣಗೊಳಿಸಿರುವ ವಿಶೇಷ ತನಿಖಾ ದಳ ಬೆಳ್ತಂಗಡಿ ನ್ಯಾಯಾಲಯಕ್ಕೆ ಬರೋಬ್ಬರಿ 7,005 ಪುಟಗಳ ಬೃಹತ್ ಅಂತಿಮ ವರದಿಯನ್ನು ಸಲ್ಲಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳ ತಂಡವು ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರ ಮುಂದೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಹಾಜರಾಗಿ, ಒಟ್ಟು 12 ಕಡತಗಳಲ್ಲಿ ಸಮಗ್ರ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದೆ.
ಈ ಹಿಂದೆ ಸಲ್ಲಿಕೆಯಾಗಿದ್ದ 3,923 ಪುಟಗಳ ವರದಿ ಹಾಗೂ ಪ್ರಸ್ತುತ ಸಿದ್ಧಪಡಿಸಲಾದ 3,082 ಪುಟಗಳ ವರದಿಗಳನ್ನು ಒಳಗೊಂಡಂತೆ ಈ ಅಂತಿಮ ಚಾರ್ಜ್ ಶೀಟ್ ಸಿದ್ಧಪಡಿಸಲಾಗಿದೆ.
ಕಳೆದ ವರ್ಷದ ನವೆಂಬರ್ 20 ರಂದು ಎಸ್ಐಟಿ ಅಧಿಕಾರಿಗಳು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 215 ರ ಅಡಿಯಲ್ಲಿ ಸುಳ್ಳು ಸಾಕ್ಷ್ಯ ನುಡಿದ ಆರೋಪದ ಮೇರೆಗೆ ನ್ಯಾಯಾಲಯಕ್ಕೆ ಮಹತ್ವದ ವರದಿ ನೀಡಿದ್ದರು. ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಹಾಗೂ ಮಾಜಿ ಮಾಸ್ಕ್ ಮ್ಯಾನ್ ಸಿ.ಎನ್. ಚಿನ್ನಯ್ಯ ಸೇರಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ವಿಠಲ್ ಗೌಡ ಹಾಗೂ ಸುಜಾತಾ ಭಟ್ ಸೇರಿ ಒಟ್ಟು ಆರು ಜನರ ವಿರುದ್ಧ ದೋಷಾರೋಪ ಹೊರಿಸಲಾಗಿದೆ.
ನ್ಯಾಯಾಲಯದಲ್ಲಿ ಅಧಿಕಾರಿಗಳು, ಆರೋಪಿ ಹಾಜರು:
ವರದಿ ಸಲ್ಲಿಕೆಯಾಗುವ ಸಂದರ್ಭದಲ್ಲಿ ಎಸ್ಐಟಿ ಎಸ್ಪಿ ಸಿ.ಎ. ಸೈಮನ್, ಇನ್ಸ್ಪೆಕ್ಟರ್ಗಳಾದ ಕುಸುಮಾಧರ್, ಮಂಜುನಾಥ್ ಹಾಗೂ ಅವರ ಸಿಬ್ಬಂದಿ ವರ್ಗದವರು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಇವರೊಂದಿಗೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ ಕೂಡ ಕೋರ್ಟ್ ಕಲಾಪದಲ್ಲಿ ಹಾಜರಾಗಿದ್ದನು. 2025 ರ ಆಗಸ್ಟ್ 23 ರಂದು ಎಸ್ಐಟಿ ತಂಡದಿಂದ ಬಂಧನಕ್ಕೊಳಗಾಗಿದ್ದ ಚಿನ್ನಯ್ಯ ಮತ್ತು ಇತರೆ ಆರೋಪಿಗಳ ವಿರುದ್ಧದ ತನಿಖೆ ಈಗ ಅಧಿಕೃತವಾಗಿ ಮುಕ್ತಾಯದ ಹಂತ ತಲುಪಿದ್ದು, ಕಾನೂನು ಹೋರಾಟ ತೀವ್ರಗೊಂಡಿದೆ.

