ಕೊಪ್ಪಳ: ಕನ್ನಡದಲ್ಲಿ ಮಾತಾಡಿ ಎಂದ ಪ್ರಯಾಣಿಕರ ಮೇಲೆ ಟಿಸಿಯೊಬ್ಬರು (ಟಿಕೆಟ್ ಕಲೆಕ್ಟರ್) ಹಲ್ಲೆ ಮಾಡಿರುವ ಪ್ರಕರಣ ಮೊನ್ನೆ ರಾತ್ರಿ
ಹಂಪಿ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ. ಕೊಪ್ಪಳ ಮೂಲದ ಭಾಷಾ ಅತ್ತಾರ ಅವರ ಮೇಲೆ ಟಿಸಿ ಹಲ್ಲೆ ಮಾಡಿದ್ದಾರೆ. ಭಾಷಾ ಅತ್ತಾರ್ ಅವರು ಮೈಸೂರಿನಿಂದ ಕೊಪ್ಪಳಕ್ಕೆ ಆಗಮಿಸುತ್ತಿದ್ದರು.
ಟಿಕೆಟ್ ಪರಿಶೀಲನೆಗೆ ಬಂದಿದ್ದ ಟಿಸಿ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಇದನ್ನು ವಿರೋಧಿಸಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಟಿಸಿ ಹಲ್ಲೆ ನಡೆಸಿದ್ದಾರೆ. ಹಿಂದಿ ಭಾಷಿಕ ಟಿಸಿ ವಿರುದ್ಧ ಕೊಪ್ಪಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ.
ನೂರಾರು ಕರವೇ ಕಾರ್ಯಕರ್ತರು ಕೊಪ್ಪಳ ರೈಲ್ವೆ ಸ್ಟೇಷನ್ ಎದುರುಗಡೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು, ಟಿಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು. ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಮೇಲೆ ಹಿಂದಿವಾಲಗಳ ದೌರ್ಜನ್ಯ ಮಿತಿಮೀರುತ್ತಿದೆ. ಯಾವುದೇ ಭಾಷಿಕ ನೌಕರರಾದರೂ ಕರ್ನಾಟಕದಲ್ಲಿ ಕನ್ನಡ ಕಲಿಯಲೇಬೇಕು ಎಂದು ಕರವೇ ಆಗ್ರಹಪಡಿಸಿದೆ.