ಗೋರಖಪುರ: ಹೋಳಿ ಹಬ್ಬದ ಬಣ್ಣಗಳಿಂದ ಸಮಸ್ಯೆಯಾಗುತ್ತದೆ ಎನ್ನುವವರು ದೇಶ ಬಿಟ್ಟು ತೊಲಗಬೇಕು ಎಂದು ಉತ್ತರಪ್ರದೇಶದ ಮೀನುಗಾರಿಕಾ ಸಚಿವ, ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಗೋರಖಪುರದಲ್ಲಿ ‘ಹೋಳಿ ಮಿಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಗೊಂದಲ ಸೃಷ್ಟಿಸಲು ವಿರೋಧ ಪಕ್ಷದ ಕೆಲವು ನಾಯಕರು ಪ್ರಯತ್ನಿಸುತ್ತಿದ್ದಾರೆ. ಹೋಳಿ ಆಚರಣೆಗೆ ಧರ್ಮವನ್ನು ಜೋಡಿಸುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶುಕ್ರವಾರದ ನಮಾಜ್ ಪ್ರಾರ್ಥನೆಯ ವೇಳೆ ಜನರು ಪರಸ್ಪರ ತಬ್ಬಿಕೊಳ್ಳುತ್ತಾರೆ. ಹೋಳಿ ಆಚರಣೆಯಲ್ಲೂ ಅದೇ ರೀತಿ ನಡೆಯುತ್ತದೆ. ಎರಡೂ (ಹೋಳಿ ಹಾಗೂ ರಂಜಾನ್) ಒಗ್ಗಟ್ಟಿನ ಹಬ್ಬಗಳಾಗಿವೆ. ಆದರೆ ಕೆಲವು ರಾಜಕಾರಣಿಗಳು ಏಕತೆಯನ್ನು ಬಯಸುವುದಿಲ್ಲ. ಒಂದು ನಿರ್ದಿಷ್ಟ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಬಣ್ಣಗಳ ಸಮಸ್ಯೆ ಇದ್ದರೆ, ಮನೆಯೊಳಗೆ ಇರಬಾರದು. ದೇಶವನ್ನೇ ತೊರೆಯಬೇಕು ಎಂದು ಅವರು ಹೇಳಿದ್ದಾರೆ.
ಒಂದು ನಿರ್ದಿಷ್ಟ ಸಮುದಾಯವು ವಸ್ತ್ರ, ಮನೆ ಅಲಂಕಾರ ಹಾಗೂ ವ್ಯವಹಾರಗಳಲ್ಲಿ ಅತಿ ಹೆಚ್ಚಿನ ಬಣ್ಣಗಳನ್ನು ಬಳಸುತ್ತಿದೆ. ನಿಜವಾಗಿಯೂ ಬಣ್ಣಗಳಿಂದ ಅವರಿಗೆ ಸಮಸ್ಯೆಯಿದ್ದರೆ ಇದು ಹೇಗೆ ಸಾಧ್ಯ ಎಂದು ನಿಷಾದ್ ಪ್ರಶ್ನಿಸಿದ್ದಾರೆ. ಬಣ್ಣಗಳನ್ನು ಹಚ್ಚುವುದರಿಂದ ನಂಬಿಕೆಗೆ ಹಾನಿಯಾಗುತ್ತದೆ ಎಂದು ಕೆಲವು ಹೇಳುತ್ತಾರೆ.ಹಾಗಾದರೆ ವರ್ಣರಂಜಿತ ಬಟ್ಟೆಗಳನ್ನು ಹೇಗೆ ಮತ್ತು ಏಕೆ ಧರಿಸುತ್ತಾರೆ? ಹೆಚ್ಚಿನ ಸಂಖ್ಯೆಯ ಬಣ್ಣಗಳ ವ್ಯಾಪಾರಿಗಳು ಈ ಸಮುದಾಯಕ್ಕೆ ಸೇರಿದವರು ಎಂದು ಅವರು ಹೇಳಿದ್ದಾರೆ.