ನವದೆಹಲಿ: ದೇಶದ ಬಡವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿರುವುದರಿಂದ ದೀರ್ಘಕಾಲದವರೆಗೆ ತೆರಿಗೆ ವಿನಾಯಿತಿ ಕೋರಬೇಡಿ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ದಿಮೆದಾರರಿಗೆ ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಾರಿಗೆ ಹಾಗೂ ಹೆದ್ದಾರಿ ಸಚಿವ ಗಡ್ಕರಿ, ಮುಂದಿನ ಎರಡು ವರ್ಷಗಳಲ್ಲಿ ದೇಶದ ಸಾಗಣೆ ವೆಚ್ಚ ಶೇ. 9ಕ್ಕೆ ತಗ್ಗಲಿದೆ ಎಂದು ಹೇಳಿದ್ದಾರೆ. ಜಿ ಎಸ್ ಟಿ ಹಾಗೂ ತೆರಿಗೆ ವಿನಾಯಿತಿ ಕೋರಬೇಡಿ. ತೆರಿಗೆ ನಿರಂತರ ಪ್ರಕ್ರಿಯೆ. ಒಂದು ವೇಳೆ ನಾವು ತೆರಿಗೆ ಕಡಿಮೆ ಮಾಡಿದರೆ, ನೀವು ಇನ್ನೂ ಹೆಚ್ಚಿನದ್ದನ್ನು ಕೇಳುತ್ತೀರಿ. ಇದು ಮಾನವನ ಸಹಜ ಗುಣ ಎಂದು ಹೇಳಿದ್ದಾರೆ.
ತೆರಿಗೆ ಕಡಿಮೆ ಮಾಡಬೇಕು ಎಂಬ ಆಸೆ ನಮಗೂ ಇದೆ. ಆದರೆ ತೆರಿಗೆ ಇಲ್ಲದೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಆಗುವುದಿಲ್ಲ. ಶ್ರೀಮಂತರಿಂದ ತೆರಿಗೆ ಪಡೆದುಕೊಂಡು ಬಡವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ನೀಡುವುದು ಸರ್ಕಾರದ ಕೆಲಸ. ಸರ್ಕಾರಕ್ಕೂ ತನ್ನದೇ ಆದ ಮಿತಿಗಳಿವೆ ಎಂದಿದ್ದಾರೆ.
ಸದ್ಯ ಭಾರತದ ಸಾಗಣೆ ವೆಚ್ಚ ಶೇ. 14- 15 ರಷ್ಟಿದೆ. ಮುಂದಿನ 2 ವರ್ಷಗಳಲ್ಲಿ ಅದು ಶೇ. 9 ಕ್ಕೆ ಇಳಿಯಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಚೀನಾದ ಸಾಗಣೆ ವೆಚ್ಚ ಶೇ. 8ರಷ್ಟಿದೆ. ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ಶೇ. 12ರಷ್ಟಿದೆ. ದೇಶದಲ್ಲಿ ಹೆಚ್ಚುತ್ತಿರುವ ಬಂಡವಾಳ ಹೂಡಿಕೆಯಿಂದಾಗಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ನೀವು ಸಂಪತ್ತು ಸೃಷ್ಟಿಕರ್ತರು ಮಾತ್ರವಲ್ಲದೆ, ಉದ್ಯೋಗ ಸೃಷ್ಟಿಕರ್ತರೂ ಆಗಿರುತ್ತೀರಿ. ಈ ಸುವರ್ಣ ಯುಗದ ಪ್ರಯೋಜನವನ್ನು ನಾವು ಬಳಸಿಕೊಳ್ಳಬೇಕು ಎಂದು ಗಡ್ಕರಿ ಹೇಳಿದ್ದಾರೆ