ರಾಂಚಿ : ಜಾರ್ಖಂಡ್ನಲ್ಲಿ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿ ಚಾರ್ಜ್ ಹಾಗೂ ನೀರಿನ ಫಿರಂಗಿಗಳನ್ನು ಪೊಲೀಸರು ಸಿಡಿಸಿದ್ದಾರೆ.
ಜಾರ್ಖಂಡ್ನ ರಾಂಚಿಯಲ್ಲಿ ಇಂದು ಪ್ರತಿಭಟನಕಾರರು ರಾಜ್ಯ ವಿಧಾನಸಭೆಯತ್ತ ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ವಿದ್ಯಾರ್ಥಿಗಳ ಗುಂಪಿನ ಮೇಲೆ ಪೊಲೀಸರು ವಾಟರ್ ಕ್ಯಾನನ್ಗಳ (ನೀರಿನ ಫಿರಂಗಿ) ಮೂಲಕ ನೀರು ಸಿಂಪಡಿಸಿದರು. ಆದರೆ, ಪ್ರತಿಭಟನಾಕಾರರಲ್ಲಿ ಕೆಲವರು ನೀರಿಗೆ ನೃತ್ಯ ಮಾಡಿದ್ದಾರೆ. ಉತ್ಸಾಹದಿಂದ ಕುಣಿದಾಡಿದ್ದಾರೆ.
ಉದ್ಯೋಗದಲ್ಲಿ ನಡೆದ ಅಕ್ರಮ ನೇಮಕಾತಿ ವಿರುದ್ಧ ಕಳೆದ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೆಎಲ್ಕೆಎಂ ನಾಯಕ ದೇವೇಂದ್ರ ನಾಥ್ ಮಹ್ತೋ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ 10.5 ಕೆಜಿ ತೂಕ ಕಳೆದುಕೊಂಡಿದ್ದಾರೆ. ಆಂಬ್ಯುಲೆನ್ಸ್ನಲ್ಲಿ ಕುಳಿತು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ಭಾವಚಿತ್ರವನ್ನು ಹಿಡಿದುಕೊಂಡಿರುವುದು ಕಂಡುಬಂದಿತು.
ನಿಷೇಧಾಜ್ಞೆ ಜಾರಿಗೊಳಿದ್ದರೂ ಸುಮಾರು 4 ಕಿಲೋಮೀಟರ್ ಉದ್ದದ ಈ ಸಂಪೂರ್ಣ ಮಾರ್ಗದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಹಾಗೂ ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು, ನೇಮಕಾತಿ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ನಿವಾಸದ ಹೊರಗೆ ಧರಣಿ ನಡೆಸುತ್ತಿದ್ದ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಮತ್ತು ಬಿಜೆಪಿ ನಾಯಕ ಆದಿತ್ಯ ಸಾಹು ಅವರನ್ನು ವಶಕ್ಕೆ ಪಡೆಯಲಾಗಿತ್ತು.
14ನೇ ಜೆಪಿಎಸ್ಸಿ ಸಂಯೋಜಿತ ನಾಗರಿಕ ಸೇವಾ ಪರೀಕ್ಷೆಯ ಪ್ರಾಥಮಿಕ ಪರೀಕ್ಷೆ ಸೇರಿದಂತೆ ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಮರುದಿನವೇ ಈ ಮೆರವಣಿಗೆ ನಡೆಯಿತು. ಭಾನುವಾರ ಜೆಪಿಎಸ್ಸಿಯ ಮೂವರು ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೂಡ ನೀಡಿದ್ದರು.

