KSRTC ನೌಕರರಿಗೆ ಅನ್ವಯ : ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ ವೃತ್ತಿ ತೆರಿಗೆಯಿಂದ ವಿನಾಯಿತಿ

Most read

ಸಣ್ಣ ಕುಟುಂಬ ಯೋಜನೆಯಡಿ ಒಂದೇ ಮಗುವಿದ್ದು, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ ವೃತ್ತಿ ತೆರಿಗೆಯಿಂದ ವಿನಾಯಿತಿ ನೀಡುವ ಬಗ್ಗೆ ಕೆಎಸ್‌ಆರ್‌ಟಿಸಿ ನಿಗಮ ಸುತ್ತೋಲೆ ಹೊರಡಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ನಿಗಮ, ವೃತ್ತಿ ತೆರಿಗೆಗೆ ಒಳಪಡುವ ದಂಪತಿಗಳ ಪೈಕಿ ಪತಿ/ಪತ್ನಿ ಇಬ್ಬರಲ್ಲಿ ಒಬ್ಬರು ಉದ್ಯೋಗಸ್ಥರಾಗಿದ್ದು, ಒಂದೇ ಮಗುವನ್ನು ಹೊಂದಿ. ಈ ಇಬ್ಬರಲ್ಲಿ ಒಬ್ಬರು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಲ್ಲಿ ಈ ರೀತಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಪತಿ/ಪತ್ನಿ ಉದ್ಯೋಗಸ್ಥರಾಗಿಲ್ಲದಿದ್ದರೂ ಉದ್ಯೋಗಸ್ಥ ಪತಿ/ಪತ್ನಿಗೆ ಅವರು ತತ್ಸಂಬಂಧ ಸರ್ಕಾರಿ ಆಸ್ಪತ್ರೆಯ ಡಿಸ್ಟಿಕ್ ಸರ್ಜನ್‌ರವರಿಂದ ಪ್ರಮಾಣಿಕರಿಸಲ್ಪಡುವ ಷರತ್ತುಗಳಿಗೆ ಒಳಪಟ್ಟಂತೆ ವೃತ್ತಿ ತೆರಿಗೆಯಿಂದ ವಿನಾಯಿತಿ ನೀಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದರಿ ವಿಷಯವನ್ನು ಪರಿಶೀಲಿಸಲಾಗಿ ಈ ಮೇಲಿನ ಸೌಲಭ್ಯವನ್ನು ಕರಾರಸಾನಿ ಸಂಸ್ಥೆಯಲ್ಲೂ ಅಳವಡಿಸಿಕೊಳ್ಳುವುದು ಸೂಕ್ತವಾಗಿರುತ್ತದೆ ಎಂದು ಆದೇಶಿದೆ.

ಅದರಂತೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಯು ಅಥವಾ ಅವರ ಪತಿ/ಪತ್ನಿ ಸಂಸ್ಥೆಯಲ್ಲಿ ಉದ್ಯೋಗಸ್ಥರಾಗಿಲ್ಲದಿದ್ದರೂ ಒಂದೇ ಮಗುವನ್ನು ಹೊಂದಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಈ ಸಂಬಂಧ ಸರ್ಕಾರಿ ಆಸ್ಪತ್ರೆಯ ಡಿಸ್ಟಿಕ್ ಸರ್ಜನ್‌ರವರಿಂದ ದೃಢೀಕರಿಸಲ್ಪಟ್ಟಿರುವ ಪ್ರಮಾಣ ಪತ್ರವನ್ನು ಹಾಜರು ಪಡಿಸುವ ಷರತ್ತಿಗೆ ಒಳಪಟ್ಟಂತೆ, ವೃತ್ತಿ ತೆರಿಗೆಯಿಂದ ವಿನಾಯಿತಿ ಪಡೆಯಲು ಅರ್ಹರಿರುತ್ತಾರೆಂದು ಆದೇಶಿಸಲಾಗಿದೆ ಹಾಗೂ ಈ ಹಿಂದಿನ ಅರ್ಹ ಪ್ರಕರಣಗಳಿಗೂ ಸೇರಿದಂತೆ, ಮೇಲ್ಕಂಡಂತೆ ವೃತ್ತಿ ತೆರಿಗೆ ರಿಯಾಯತಿ ಸೌಲಭ್ಯವು, ಸರ್ಕಾರವು ಹೊರಡಿಸಿದ ಉಲ್ಲೇಖಿತ ಸುತ್ತೋಲೆ ದಿನಾಂಕದಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ.

ಸಂಬಂಧಪಟ್ಟವರೆಲ್ಲರೂ ಈ ಮೇಲಿನ ಆದೇಶವನ್ನು ಗಮನದಲ್ಲಿಟ್ಟುಕೊಂಡು ಅದರಂತೆ ಇನ್ನು ಮುಂದೆ ವೃತ್ತಿ ತೆರಿಗೆ ರಿಯಾಯಿತಿ ನೀಡುವ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳತಕ್ಕದ್ದು ಎಂದು ಆದೇಶಿದೆ.

More articles

Latest article