ಬೆಂಗಳೂರು, ಆ.8 : ಕರ್ನಾಟಕದಲ್ಲಿ ಅಕ್ರಮ ವಲಸೆಯ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮವನ್ನು ಸ್ವಾಗತಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಇದುವರೆಗೆ ಕೇವಲ ಬಾಂಗ್ಲಾ ವಲಸಿಗರ ಕುರಿತು ಮಾತುಗಳೇ ಹೆಚ್ಚಾಗಿದ್ದವು. ಗೃಹಸಚಿವರು ಕಾರ್ಯಾಚರಣೆಗೆ ಇಳಿದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕರ್ನಾಟಕ ಯಾವುದೇ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿಲ್ಲ. ಹೀಗಿದ್ದರೂ ವಿದೇಶಗಳಿಂದ ಬಂದ ಶಂಕಿತ ಅಕ್ರಮ ವಲಸಿಗರು ರಾಜ್ಯದಲ್ಲಿ ಪತ್ತೆಯಾಗುತ್ತಿರುವುದು ಗಂಭೀರ ವಿಚಾರ. ಅವರು ಯಾವ ಮಾರ್ಗದ ಮೂಲಕ ಕರ್ನಾಟಕ ಪ್ರವೇಶಿಸುತ್ತಿದ್ದಾರೆ, ಅವರಿಗೆ ಯಾರು ಆಶ್ರಯ, ಉದ್ಯೋಗ ಅಥವಾ ನಕಲಿ ದಾಖಲೆಗಳನ್ನು ಒದಗಿಸುತ್ತಿದ್ದಾರೆ ಎಂಬುದರ ಸಮಗ್ರ ತನಿಖೆ ನಡೆಯಬೇಕು. ಅಕ್ರಮ ವಲಸೆಯ ಹಿಂದೆ ಇರುವ ಜಾಲವನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ.
ಅಕ್ರಮ ವಲಸೆ ಎಂಬುದು ಯಾವುದೇ ಒಂದು ಸಮುದಾಯ ಅಥವಾ ಧರ್ಮದ ವಿರುದ್ಧದ ವಿಚಾರವಲ್ಲ. ಇದು ದೇಶದ ಕಾನೂನು, ರಾಷ್ಟ್ರೀಯ ಭದ್ರತೆ ಮತ್ತು ರಾಜ್ಯದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಕಾನೂನುಬದ್ಧವಾಗಿ ಭಾರತಕ್ಕೆ ಬಂದಿರುವ ವಿದೇಶಿಗರಿಗೆ ಯಾವುದೇ ತೊಂದರೆ ನೀಡಬಾರದು. ಆದರೆ ಅಕ್ರಮವಾಗಿ ಪ್ರವೇಶಿಸಿ, ನಕಲಿ ದಾಖಲೆಗಳ ಮೂಲಕ ನೆಲೆಸಿರುವವರ ವಿರುದ್ಧ ಕಾನೂನು ತನ್ನ ಕೆಲಸ ಮಾಡಲೇಬೇಕು. ಇದಕ್ಕಾಗಿ ಮೀನ ಮೇಷ ಎಣಿಸುವ ಯಾವ ಅಗತ್ಯವೂ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರದಲ್ಲಿ ‘ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸಲಾಗುವುದು ಹಾಗೂ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸುತ್ತದೆ. ಇದನ್ನು ಒಂದು ರಾಜಕೀಯ ವಿಷಯವನ್ನಾಗಿ ನೋಡದೆ, ಪ್ರತಿಯೊಬ್ಬ ಕನ್ನಡಿಗರೂ ಈ ಕಾರ್ಯಾಚರಣೆಯನ್ನು ಬೆಂಬಲಿಸಬೇಕು ಎಂದು ಅವರು ಕೋರಿದ್ದಾರೆ.
ಗಡಿ ಭದ್ರತೆ ಕೇಂದ್ರ ಸರ್ಕಾರದ ಜವಾಬ್ದಾರಿಯಾದರೆ, ರಾಜ್ಯದೊಳಗೆ ಅಕ್ರಮ ವಲಸಿಗರನ್ನು ಗುರುತಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಅಕ್ರಮ ವಲಸೆಯ ಮೂಲವನ್ನೇ ಪತ್ತೆಹಚ್ಚುವ ಅಗತ್ಯವಿದೆ. ಇಷ್ಟೊಂದು ಪ್ರಮಾಣದಲ್ಲಿ ಬಾಂಗ್ಲಾ ವಲಸಿಗರು ಹೇಗೆ ಭಾರತವನ್ನು ಪ್ರವೇಶಿಸುತ್ತಿದ್ದಾರೆ ಎಂಬುದರ ಕುರಿತು ಕೇಂದ್ರ ಸರ್ಕಾರ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಹಿತಾಸಕ್ತಿಯ ರಕ್ಷಣೆಯ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಪ್ರತಿಯೊಂದು ಕಾನೂನುಬದ್ಧ ಕ್ರಮಕ್ಕೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವಾಗಿ ನಿಲ್ಲಲಿದೆ ಎಂದು ಘೋಷಿಸಿರುವ ಟಿ.ಎ.ನಾರಾಯಣಗೌಡ ಅವರು, ಅಕ್ರಮ ವಲಸೆಯ ವಿರುದ್ಧ ದಿಟ್ಟ ನಿಲುವು ತಳೆದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅಭಿನಂದಿಸಿದ್ದಾರೆ.
ಹಾಗೆಯೇ ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ಕ್ರಿಮಿನಲ್ ಹಿನ್ನೆಲೆಯ ವಲಸಿಗರು ಪ್ರವೇಶಿಸಿ, ಇಲ್ಲಿ ಅನೇಕ ಕ್ರಿಮಿನಿಲ್ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅಂಥವರನ್ನು ಸಹ ಗುರುತಿಸಿ ಅವರ ರಾಜ್ಯಗಳಿಗೆ ಹಿಂದಕ್ಕೆ ಕಳಿಸುವ ಅಭಿಯಾನವನ್ನೂ ಸರ್ಕಾರ ಮಾಡಬೇಕು. ಕರ್ನಾಟಕ ಶಾಂತಿಪ್ರಿಯ ರಾಜ್ಯ. ಹೊರರಾಜ್ಯಗಳಿಂದ ಇಲ್ಲಿಗೆ ಬಂದು ಕ್ರಿಮಿನಲ್ ಚಟುವಟಿಕೆ ನಡೆಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಕರ್ನಾಟಕದ ಭದ್ರತೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

