Saturday, July 27, 2024

ಫೆಬ್ರುವರಿ 29ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ : ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯೇ ಮುಖ್ಯ ಆಶಯ!

Most read

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯನ್ನು ಆಯೋಜಿಸುವ ಕುರಿತು ಸಂಘಟನಾ ಸಮಿತಿಯ ಸಭೆಯನ್ನು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದೆ. ಸಂಘಟನಾ ಸಮಿತಿಯ ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಚಲನಚಿತ್ರೋತ್ಸವದಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಚಾರಗಳು, ಎಲ್ಲರ ಒಳಗೊಳ್ಳುವಿಕೆಯ (inclusiveness) ಕುರಿತ ಚಿತ್ರಗಳಿಗೆ ಒತ್ತು ನೀಡಲು, ಮನುಷ್ಯತ್ವದ ಸಂದೇಶ ನೀಡಲು ತೀರ್ಮಾನಿಸಲಾಯಿತು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿದೆ. ಬೆಲ್ಜಿಯಂ ನ ಅಂತರರಾಷ್ಟ್ರೀಯ ಚಿತ್ರ ನಿರ್ಮಾಪಕರ ಸಂಘಗಳ ಒಕ್ಕೂಟವಾದ  FIAPF ನ ಮಾನ್ಯತೆಯನ್ನು ಪಡೆದುಕೊಂಡಿದೆ.

15 ನೇ ಚಲನಚಿತ್ರೋತ್ಸವವನ್ನು ಫೆಬ್ರುವರಿ 29 ರಿಂದ ಮಾರ್ಚ್‌ 7 ರ ವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷವೂ ಫೆಬ್ರವರಿ, ಮಾರ್ಚ್ ಮಾಹೆಯಲ್ಲಿ ಚಿತ್ರೋತ್ಸವವನ್ನು ಏರ್ಪಡಿಸುತ್ತಿದ್ದು, ಈ ಬಾರಿಯೂ ಫೆಬ್ರವರಿ / ಮಾರ್ಚ್ ತಿಂಗಳಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಏರ್ಪಡಿಸಲು ಕೆಳಕಂಡಂತೆ ತಾತ್ಕಾಲಿಕ ದಿನಾಂಕಗಳ ವೇಳಾಪಟ್ಟಿ ಮಾಡಿಕೊಳ್ಳಲಾಗಿದೆ.

ಫೆಬ್ರವರಿ 29 ರಂದು ಗುರುವಾರ ಸಂಜೆ ಉದ್ಘಾಟನಾ ಸಮಾರಂಭ  (ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆ) ಮಾರ್ಚ್ 01 ರಿಂದ 07 ರವರೆಗೆ ಚಿತ್ರೋತ್ಸವದ ಚಲನಚಿತ್ರ ಪ್ರದರ್ಶನ. ಮಾರ್ಚ್ 07 ರಂದು ಗುರುವಾರ ಸಂಜೆ ಸಮಾರೋಪ ಸಮಾರಂಭ (ಮಾನ್ಯ ರಾಜ್ಯಪಾಲರಿಂದ ಪ್ರಶಸ್ತಿ ವಿತರಣೆ). ಉದ್ಘಾಟನಾ ಸಮಾರಂಭವನ್ನು ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗುವುದು.  ಸಮಾರೋಪ ಸಮಾರಂಭವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಚಲನಚಿತ್ರೋತ್ಸವ ಆಯೋಜನೆಗೆ 1.61 ಕೋಟಿ ರೂ. ಲಭ್ಯವಿದ್ದು, ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನ ಒದಗಿಸಲು ತೀರ್ಮಾನಿಸಲಾಯಿತು. ಲೀಲಾವತಿ, ಭಗವಾನ್‌ ಮತ್ತು ಸಿ.ವಿ. ಶಿವಶಂಕರ್‌ ಮೊದಲಾದ ಕನ್ನಡ ಚಿತ್ರರಂಗದ ಅಗಲಿದ ಗಣ್ಯರಿಗೆ ಗೌರವ ಸಲ್ಲಿಸಲು ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.

ಚಲನಚಿತ್ರೋತ್ಸವದಲ್ಲಿ ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಚಾರಗಳು, ಎಲ್ಲರ ಒಳಗೊಳ್ಳುವಿಕೆಯ (inclusiveness) ಕುರಿತ ಚಿತ್ರಗಳಿಗೆ ಒತ್ತು ನೀಡಲು, ಮನುಷ್ಯತ್ವದ ಸಂದೇಶ ನೀಡಲು ತೀರ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ಸರ್ಕಾರವು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಏರ್ಪಡಿಸುವ ಸಲುವಾಗಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಚಿತ್ರೋತ್ಸವದ ಸಂಘಟನಾ ಸಮಿತಿಯನ್ನು ಹಾಗೂ ಸರ್ಕಾರದ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಕೋರ್ ಸಮಿತಿಯನ್ನು ದಿನಾಂಕ : 30.12.2023 ರಂದು ರಚಿಸಿ ಆದೇಶ ಹೊರಡಿಸಿದೆ.

ಅದರನ್ವಯ ಚಿತ್ರೋತ್ಸವದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ದೇಶ-ವಿದೇಶಗಳ ಉತ್ತಮ ಸಿನಿಮಾಗಳನ್ನು ಚಿತ್ರೋತ್ಸವದಲ್ಲಿನ ಪ್ರದರ್ಶನಕ್ಕಾಗಿ ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.  ಚಿತ್ರೋತ್ಸವದ ಕೆಲಸಗಳಲ್ಲಿ ಪರಿಣಿತಿ ಹೊಂದಿರುವ  ವಿದ್ಯಾಶಂಕರ್‌ ಅವರನ್ನು ಕಲಾತ್ಮಕ ನಿರ್ದೇಶಕರಾಗಿ ನೇಮಕಮಾಡಲಾಗಿದೆ. ಇದರೊಂದಿಗೆ ಸಂಘಟಕರು / ತಾಂತ್ರಿಕ ಸಲಹೆಗಾರರು / ಸ್ವಯಂ ಸೇವಕರುಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಸಂಭಾವನೆ ಆಧಾರದಲ್ಲಿ ಇವರ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರೂ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಒರಿಯಾನ್ ಮಾಲ್ ನಲ್ಲಿರುವ ಪಿವಿಆರ್ ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗುವುದು.

More articles

Latest article