Saturday, July 27, 2024

ಜಿಲ್ಲಾ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ 8 ವಾರಗಳಲ್ಲಿ ಚುನಾವಣೆ ನಡೆಸಿ : ಹೈಕೋರ್ಟ್

Most read

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ದಾವಣಗೆರೆ ಜಿಲ್ಲಾ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಮುಂದಿನ ಎಂಟು ವಾರಗಳಲ್ಲಿ ಚುನಾವಣೆ ನಡೆಸುವಂತೆ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ಎರಡೂ ಡಿಸಿಸಿ ಬ್ಯಾಂಕುಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ಪ್ರಕಟಿಸಿದೆ. ನ್ಯಾಯಾಲಯ ನೀಡಿರುವ ಎಲ್ಲಾ ಮಧ್ಯಂತರ ಆದೇಶಗಳು ರದ್ದಾಗಿದ್ದು, ಸಂಬಂಧಪಟ್ಟ ಪ್ರಾಧಿಕಾರಗಳು ತಕ್ಷಣ ಕಾನೂನು ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ 2018 ನವೆಂಬರ್‌ 12ಕ್ಕೆ ಚುನಾವಣೆ ನಡೆದಿತ್ತು. 2023ರ ನವೆಂಬರ್‌ 11ಕ್ಕೆ ಆಡಳಿತ ಮಂಡಳಿಯ ಐದು ವರ್ಷದ ಕಾಲಾವಧಿ ಮುಗಿದಿತ್ತು. ಚುನಾವಣೆ ನಡೆಸುವಂತೆ ಅವಧಿ ಮುಗಿಯವ 6 ತಿಂಗಳು ಮುಂಚಿತವಾಗಿ, ಅಂದರೆ 2023ರ ಮೇ 4ರಂದು ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 2023-2028ರ ಅವಧಿಗೆ 2023ರ ಅಕ್ಟೋಬರ್‌ 27ರಿಂದ ನವೆಂಬರ್‌ 4ರವರೆಗೆ ಚುನಾವಣೆ ನಡೆಸಲು 2023ರ ಸೆಪ್ಟೆಂಬರ್‌ 1ರಂದು ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಿದ್ದರು. ಈ ಮಧ್ಯೆ, ಮತದಾರರ ಪಟ್ಟಿಯಲ್ಲಿನ ಗೊಂದಲಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಚುನಾವಣಾ ವೇಳಾಪಟ್ಟಿಯನ್ನು ಹಿಂಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕಿನ ಕೆಲ ನಿರ್ದೇಶಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಕಾಲಮಿತಿಯೊಳಗೆ, ಅಂದರೆ ಗರಿಷ್ಠ 120 ದಿನಗಳಲ್ಲಿ ಚುನಾವಣೆ ನಡೆಸಬೇಕು, ಚುನಾವಣೆ ವಿಳಂಬಕ್ಕೆ ಸರ್ಕಾರ ಮತ್ತು ಬ್ಯಾಂಕಿನ ಆಡಳಿತ ಇಬ್ಬರಿಂದಲೂ ಲೋಪ ಆಗಿದ್ದರಿಂದ ಅವಧಿ ಮುಗಿದ ಆಡಳಿತ ಮಂಡಳಿಯಲ್ಲಿದ್ದ ನಿರ್ದೇಶಕರಿಗೆ ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಬಾರದು ಎಂದು 2023ರ ಅಕ್ಟೋಬರ್‌ 12ರಂದು ಏಕಸದಸ್ಯ ಪೀಠ ಆದೇಶ ನೀಡಿತ್ತು. ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವಿಷಯವೂ ಒಂದೇ ಆಗಿದ್ದರಿಂದ ಆ ಅರ್ಜಿಯನ್ನೂ ಸೇರಿಸಿ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದರಿಂದ ಎರಡೂ ಬ್ಯಾಂಕುಗಳಿಗೂ ಆದೇಶ ಅನ್ವಯವಾಗಿತ್ತು. 

ಚುನಾವಣೆಗಳನ್ನು 120 ದಿನಗಳಲ್ಲಿ ನಡೆಸುವಂತೆ ಏಕಸಕದಸ್ಯ ಪೀಠದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ಈ ಮೇಲ್ಮನವಿಗಳನ್ನು ಮಾನ್ಯ ಮಾಡಿರುವ ವಿಭಾಗೀಯ ಪೀಠ ಎಂಟು ವಾರಗಳಲ್ಲಿ ಚುನಾವಣೆ ನಡೆಸುವಂತೆ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

More articles

Latest article