ನವದೆಹಲಿ : ಕ್ಷೇತ್ರ ಮರುವಿಂಗಡಣೆಗೆ ದಕ್ಷಿಣ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಜನಸಂಖ್ಯೆ ಹೆಚ್ಚಿರುವ ನಿರ್ದಿಷ್ಟ ದೊಡ್ಡ ಗಾತ್ರದ ಲೋಕಸಭಾ ಕ್ಷೇತ್ರಗಳನ್ನು ಮರು ವಿಂಗಡನೆ ನಡೆಸುವ ಹೊಸ ಸೂತ್ರವನ್ನು ಮಂಡಿಸಿದೆ.
ಮೊದಲು ದೇಶದಲ್ಲಿ ಸದ್ಯ ಇರುವ 543 ಕ್ಷೇತ್ರಗಳಿಂದ 824 ಕ್ಷೇತ್ರಗಳ ಹೆಚ್ಚಳಕ್ಕೆ ಸಲಹಾ ಮಂಡಳಿ ಸೂಚಿಸಿತ್ತು. ಜನ ಸಂಖ್ಯೆ ಆಧರಿಸಿ ಕ್ಷೇತ್ರ ಮರು ವಿಂಗಡಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇದನ್ನು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳಂ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳು ವಿರೋಧಿಸಿ ಜನ ಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರು ವಿಂಗಡಣೆ ಮಾಡಿದರೆ ಕಡಿಮೆ ಜನ ಸಂಖ್ಯೆ ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳ ಸೀಟುಗಳು ಕಡಿಮೆಯಾಗಿ ತಮ್ಮ ಪ್ರಾತಿನಿಧ್ಯ ಕಳೆದುಕೊಳ್ಳಲಿವೆ. ಉತ್ತರ ಭಾರತದ ಜನರು ಗೆಲ್ಲಿಸಿದ ಪಕ್ಷಗಳು ಅಧಿಕಾರ ಅನುಭವಿಸುತ್ತವೆ.
ದಕ್ಷಿಣ ಭಾರತದ ರಾಜ್ಯಗಳನ್ನು ಕಡೆಗಣಿಸಿದಂತಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದವು. ಅಲ್ಲದೆ ಈ ಕಾಯ್ದೆಗೆ ಸಂಸತ್ತಿನಲ್ಲಿ ಸೋಲಾಗಿತ್ತು. ಹೀಗಾಗಿ ಮರು ವಿಂಗಡಣೆಯನ್ನು ಜನಸಂಖ್ಯಾ ಆಧಾರಕ್ಕೆ ಬದಲಾಗಿ ಜನಸಂಖ್ಯೆ ಹೆಚ್ಚಿರುವ ನಿರ್ದಿಷ್ಟ ದೊಡ್ಡ ಗಾತ್ರದ ಲೋಕಸಭಾ ಕ್ಷೇತ್ರಗಳನ್ನು ಮರು ವಿಂಗಡನೆ ನಡೆಸುವ ಹೊಸ ಸೂತ್ರವನ್ನು ಮಂಡಿಸಿದೆ.
ಕರ್ನಾಟಕಕ್ಕೆ 41-42 ಸೀಟುಗಳು:
ಇದನ್ನು ಆಧರಿಸಿ ರಾಜ್ಯದಲ್ಲಿ ಕ್ಷೇತ್ರ ಮರುವಿಂಗಡನೆ ಯೋಜನೆಯ ಪುನರ್ರಚನೆಯನ್ನು ಪ್ರಸ್ತಾಪಿಸಲಾಗಿದೆ.
ದಕ್ಷಿಣ ರಾಜ್ಯಗಳು ಅನುಪಾತದ ಪ್ರಾತಿನಿಧ್ಯ ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರೂಪಿಸಿರುವ ನೀಲನಕ್ಷೆಯಡಿಯಲ್ಲಿ ಕರ್ನಾಟಕ 41ರಿಂದ 42 ಲೋಕಸಭಾ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಈ ವಿಂಗಡನೆ ದೊಡ್ಡ ಕ್ಷೇತ್ರದಲ್ಲಿನ ಒತ್ತಡ ಕಡಿಮೆ ಮಾಡಲು, ನಗರ ಮತದಾರರ ನಿರಾಸಕ್ತಿಯನ್ನು ಪರಿಹರಿಸಲು ಮತ್ತು ಸಾಂಸ್ಕೃತಿಕ ಕ್ರೋಢೀಕರಣವನ್ನು ಹತೋಟಿಗೆ ತರುವ ಉದ್ದೇಶ ಹೊಂದಿದೆ. ಇದರಲ್ಲಿ ಮಹಿಳೆಯರಿಗೆ ಮಾತ್ರ ಮತಗಟ್ಟೆಗಳು ಮತ್ತು ವಿಸ್ತೃತ ಸಮಯಗಳಂತಹ ಒಳಗೊಳ್ಳುವಿಕೆಯ ಕ್ರಮಗಳಿವೆ. ಮತದಾನ ಪ್ರಮಾಣವನ್ನು ಗರಿಷ್ಠಗೊಳಿಸುವ ಕಾರ್ಯವನ್ನು ಮರು ವಿಂಗಡಣೆ ಮರುರೂಪಿಸಲಿದೆ ಎಂದು ತಿಳಿದು ಬಂದಿದೆ.
ಹೊಸದಾಗಿ ಪ್ರಸ್ತಾಪಿಸಲಾದ ಸೂತ್ರದಲ್ಲಿ ರಾಜ್ಯದ ಬೆಳಗಾವಿ, ಧಾರವಾಡ ಮತ್ತು ವಿಜಯಪುರದಂತಹ ವಿಸ್ತೀರ್ಣದಲ್ಲಿ ದೊಡ್ಡ ಕ್ಷೇತ್ರಗಳನ್ನು ಮೂರು ಕ್ಷೇತ್ರಗಳಾಗಿ ವಿಭಜನೆ ನಡೆಸುವ ಯೋಜನೆಯನ್ನು ಸಲಹಾ ಮಂಡಳಿ ಶಿಫಾರಸು ಮಾಡಿದೆ.
ಈ ವರದಿಯಲ್ಲಿ ಎಸ್ಸಿಗಿಂತ ಎಸ್ಟಿ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿದೆ. ನಗರದಲ್ಲಿ ಮತದಾನ ಪ್ರಮಾಣ ಕುಸಿತ ಕಂಡಿದೆ. ನಗರ ಮತ್ತು ಗ್ರಾಮೀಣ ಮಹಿಳಾ ಮತದಾರರ ಮತದಾನದ ಅಂತರ ಹೆಚ್ಚಿದ್ದು, ನಗರದಲ್ಲಿ ಮಹಿಳಾ ಮತದಾನ ಪ್ರಮಾಣ ಕುಸಿದಿರುವ ಕುರಿತು ಉಲ್ಲೇಖಿಸಲಾಗಿದೆ.
2018ರ ಬೂತ್ ತರ್ಕಬದ್ಧಗೊಳಿಸುವಿಕೆಯು ಹೊರೆ ಕಡಿಮೆ ಮಾಡಿ, ಮತದಾನವನ್ನು ಹೆಚ್ಚಿಸಿದೆ. ಉದ್ದೇಶಿತ ಕ್ಷೇತ್ರ ಮರು ವಿಂಗಡಣೆ ಯೋಜನೆಯು ಮತದಾನವನ್ನು ಶೇ.0.3ರಿಂದ 2.3ರಷ್ಟು ಹೆಚ್ಚಿಸುತ್ತದೆ ಎಂದು ಊಹಿಸಲಾಗಿದೆ.
ಮೂರು ಕ್ಷೇತ್ರಗಳಾಗಿ ವಿಭಜನೆ
ಬೆಳಗಾವಿ ಭೌಗೋಳಿಕವಾಗಿ ವಿಶಾಲ ಮತ್ತು ಜನಸಂಖ್ಯೆಯಿಂದಲೂ ದಟ್ಟವಾಗಿದ್ದು, ಅದರ ಗಾತ್ರದಿಂದಾಗಿ ರಚನಾತ್ಮಕ ಘರ್ಷಣೆಯಿಂದ ಬಳಲುತ್ತಿದೆ. ಬೃಹತ್ ಕ್ಷೇತ್ರಗಳು ವ್ಯವಸ್ಥಾಪನಾ ದೂರ ಮತ್ತು ಆಡಳಿತಾತ್ಮಕ ಒತ್ತಡದಿಂದಾಗಿ ಮತದಾರರ ಮತದಾನದ ಭಾಗಿತ್ವವನ್ನು ಕಡಿಮೆ ಮಾಡುತ್ತಿದೆ ಎಂದು ಕಾರ್ಯಪತ್ರ ತೋರಿಸಿದೆ. ಇದನ್ನು ಮೂರು ರೀತಿಯಲ್ಲಿ ವಿಭಜಿಸುವುದರಿಂದ ಮತಗಟ್ಟೆಗಳಿಗೆ ಇರುವ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಸ್ಥಳೀಯ ಆಡಳಿತವನ್ನು ಅತ್ಯುತ್ತಮವಾಗಿಸುತ್ತದೆ ಎಂಬುದು ಕಾರ್ಯಪತ್ರದಲ್ಲಿರುವ ಸಲಹೆ.
ಪ್ರಮುಖ ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗಿರುವ ಧಾರವಾಡ ನಗರದ ಮತದಾರರುಮತದಾನ ಮಾಡಲು ನಿರಾಸಕ್ತಿ ಹೊಂದಿದ್ದಾರೆ. ನಗರ ಕೇಂದ್ರಗಳು ವಲಸೆ ಸಮಸ್ಯೆಗಳು ಮತ್ತು ದೀರ್ಘ ಸರತಿ ಸಾಲುಗಳಿಂದಾಗಿ ಮತದಾನ ಮಾಡಲು ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಧಾರವಾಡವನ್ನು ಮೂರು ಸಣ್ಣ ಕ್ಷೇತ್ರಗಳಾಗಿ ವಿಂಗಡಿಸುವುದರಿಂದ ಈ ಸಮಸ್ಯೆಗಳನ್ನು ದೂರ ಮಾಡಬಹುದು ಎಂಬುದು ಕಾರ್ಯಪತ್ರದಲ್ಲಿದೆ.
ವಿಜಯಪುರವನ್ನು ಮೂರು ಕ್ಷೇತ್ರಗಳಾಗಿ ವಿಭಜಿಸುವ ಮೂಲಕ, ವಿನ್ಯಾಸವು ಈ ಸ್ಥಳೀಯ ಸಜ್ಜುಗೊಳಿಸುವಿಕೆಯನ್ನು ಬಳಸಿಕೊಳ್ಳುತ್ತದೆ. ಮತದಾನ ಪ್ರತಿಕ್ರಿಯೆ ಗರಿಷ್ಠಗೊಳಿಸಲು ಹೊಸ ಗಡಿಗಳನ್ನಿಡುತ್ತದೆ.

