ಬೆಂಗಳೂರು : ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಂದ 15 ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ವಿರೋಧಿಸಿ ವಿವಿಧ ಕನ್ನಡ ಪರ ಹಾಗೂ ರೈತ ಸಂಘಟನೆಗಳು ಹಿಂದೆ ಘೋಷಿಸಿದಂತೆ ಆ.13ರಂದು (ನಾಳೆ) ಕರ್ನಾಟಕ ಬಂದ್ ನಡೆಸಲು ಇಂದು ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಿವೆ.
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಗುರುವಾರ ಬಂದ್ ನಡೆಸುತ್ತೇವೆ ಎಂದು ಘೋಷಿಸಿದರೆ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಬುಧವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.
ರೈತ ಹೋರಾಟಗಾರ್ತಿ ಸುನಾಂದ ಜೈರಾಮ್ ಸೇರಿದಂತೆ ಹಲವು ರೈತರ ಹೋರಾಟಗಾರರು ಮಂಗಳವಾರ ತುರ್ತು ಸಭೆ ನಡೆಸಿ ಚರ್ಚಿಸಿದರು. ಅಂತಿಮ ನಿರ್ಧಾರವನ್ನು ಬುಧವಾರ ಮತ್ತೆ ಸಭೆ ಸೇರಿ ಘೋಷಿಸುವುದಾಗಿ ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬುಧವಾರ ಸಭೆ ನಡಸಿ ನಿರ್ಧಾರ ತಿಳಿಸುವುದಾಗಿ ಹೇಳಿವೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹುಬ್ಬಳ್ಳಿಯಲ್ಲಿ ಮಾತನಾಡಿ ನಾವು ಹಿಂದೆ ಕರೆಕೊಟ್ಟಿದ್ದಂತೆ ಗುರುವಾರ ಬಂದ್ ನಡೆಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಅಲ್ಪ ಪ್ರಮಾಣದ ಮಳೆಯಾಗಿ ತಮಿಳುನಾಡಿಗೆ ಪ್ರಾಧಿಕಾರ ಸೂಚಿಸಿದ್ದಕ್ಕಿಂತ ಹೆಚ್ಚು ನೀರು ಹರಿದು ಹೋಗಿದೆ. ಈಗ ಇಂದು ಮತ್ತೊಮ್ಮೆ ಪ್ರಾಧಿಕಾರ ಆದೇಶ ನೀಡಿ ನೀರು ಹರಿಸುವಂತೆ ಸೂಚಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ನೀರು ಬಿಡುವುದನ್ನು ವಿರೋಧಿಸಿ ಬಂದ್ ಮಾಡುತ್ತೇವೆ. ಇದಕ್ಕೆ ಎಲ್ಲ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ ಎಂದರು.
ಸೋಮವಾರ ಕೂಡ ಬಂದ್ ನಡೆಸುವ ಬಗ್ಗೆ ಹಲವು ಸಂಘಟನೆಗಳು ಸಭೆ ನಡೆಸಿದ್ದವು. ಆದರೆ ಒಮ್ಮತಕೆ ಬರಲು ವಿಫಲವಾಗಿದ್ದವು. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ತಮಿಳುನಾಡಿಗೂ ನೀರು ಹರಿಯುತ್ತಿರುವುದರಿಂದ ಬಂದ್ ಬೇಡ ಎಂದು ಕೆಲವರು ಹೇಳಿದ್ದರು. ಆದರೆ ಮಂಗಳವಾರ ಪ್ರಾಧಿಕಾರ ಮತ್ತೆ ನೀರು ಹರಿಸುವಂತೆ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಬಂದ್ ನಡೆಸಲು ಬಹುತೇಕ ಸಂಘಟನೆಗಳು ಮುಂದಾಗಿವೆ. ಅಂತಿಮವಾಗಿ ಬುಧವಾರ ನಿರ್ಧಾರ ಹೊರ ಬೀಳಲಿದೆ.

