ಬೀಜಿಂಗ್ : ಟಿಬೆಟ್ನಲ್ಲಿರುವ ಚೀನಾ-ನೇಪಾಳ ಗಡಿ ಪ್ರದೇಶದ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದಾಗಿ ಕಾಣೆಯಾದವರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಸರ್ವ ಪ್ರಯತ್ನಗಳನ್ನು ಮಾಡುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬುಧವಾರ ಆದೇಶಿಸಿದ್ದಾರೆ.
ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಲು ‘ಪೀಪಲ್ಸ್ ಆರ್ಮ್ಡ್ ಪೊಲೀಸ್’ನ ಕ್ಸಿಗಾಜೆ ಪಡೆಯ ಒಟ್ಟು 145 ಅಧಿಕಾರಿಗಳು ಮತ್ತು ಸೈನಿಕರನ್ನು ಬಾಧಿತ ಗಡಿ ಪ್ರದೇಶಕ್ಕೆ ಕಳುಹಿಸಲಾಗಿದೆ.
ಬುಧವಾರ ಮುಂಜಾನೆ ಟಿಬೆಟ್ನ ಗಡಿಯಲ್ಲಿರುವ ನೇಪಾಳದ ಎರಡು ಜಿಲ್ಲೆಗಳಲ್ಲಿ ಸಂಭವಿಸಿದ ಹಠಾತ್ ಮತ್ತು ಭಾರಿ ಪ್ರವಾಹವು ಕನಿಷ್ಠ ನಾಲ್ವರ ಸಾವಿಗೆ ಕಾರಣವಾಯಿತು; ಅಲ್ಲದೆ, ನದಿಯ ದಡದಲ್ಲಿರುವ ವಸತಿ ಪ್ರದೇಶಗಳಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿತು ಮತ್ತು ಕನಿಷ್ಠ ಒಂದು ಡಜನ್ ಜಲವಿದ್ಯುತ್ ಯೋಜನೆಗಳಿಗೆ ಹಾನಿ ಉಂಟುಮಾಡಿತು.
ಕಾಣೆಯಾಗಿರುವ ಸುಮಾರು 400 ಮಂದಿಯಲ್ಲಿ ಕನಿಷ್ಠ 105 ಭಾರತೀಯರು ಮತ್ತು 37 ಅನಿವಾಸಿ ಭಾರತೀಯರು ಸೇರಿದ್ದಾರೆ.
ಸಾವು-ನೋವುಗಳನ್ನು ಕಡಿಮೆ ಮಾಡಲು, ಅಪಾಯದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಗಾಯಗೊಂಡವರಿಗೆ ಸಮಯೋಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಕ್ಸಿ ಕರೆ ನೀಡಿದರು.
ನೇಪಾಳಕ್ಕೆ ಸಹಾಯ ಹಸ್ತ ಚಾಚಿದ ಭಾರತ
ನೇಪಾಳದಲ್ಲಿ ಉಂಟಾಗಿರುವ ಹಠಾತ್ ಭೀಕರ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಮಾನವೀಯ ಮತ್ತು ಪರಿಹಾರ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ನೇಪಾಳ ಪ್ರಧಾನಿ ಬಾಲೇಂದ್ರ ಶಾ ಜೊತೆಗೆ ದೂರವಾಣಿ ಮೂಲಕ ಮಾತನಾಡಿರುವ ಅವರು, ಇಂತಹ ಕಠಿಣ ಸಮಯದಲ್ಲಿ ನೇಪಾಳದ ಸಹೋದರ-ಸಹೋದರಿಯರ ಜೊತೆಗೆ ನಿಲ್ಲುವುದಾಗಿ ತಿಳಿಸಿದ್ದಾರೆ.
ನೇಪಾಳಕ್ಕೆ ಭಾರತೀಯ ವಾಯು ಸೇನಾ ವಿಮಾನದ ಮೂಲಕ ಪರಿಹಾರ ಸಾಮಗ್ರಿ ಕಳುಹಿಸಲಾಗಿದೆ. ಮಾನವೀಯ ನೆರವಿನಡಿಯಲ್ಲಿ ಔಷಧಿಗಳು ಮತ್ತು ಪಡಿತರ ಸೇರಿದಂತೆ ತುರ್ತು ನೆರವಿನ ಸರಕನ್ನು ನೆರೆಯ ದೇಶಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಎಸ್ಎಸ್ಬಿ 18 ತಂಡಗಳನ್ನು ನಿಯೋಜಿಸಿದೆ. ಪ್ರವಾಹಪೀಡಿತ ಪ್ರದೇಶದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಉಪಕ್ರಮಕ್ಕೆ ಎನ್ಡಿಆರ್ಎಫ್ ಸಿಬ್ಬಂದಿಯನ್ನು ಕಳುಹಿಸುವ ಯೋಜನೆ ಮಾಡುತ್ತಿದೆ ಎಂದು ಕೂಡ ತಿಳಿಸಿದ್ದಾರೆ.

