ಮೈಸೂರು: ಪಕ್ಷ ಬಿಟ್ಟುಹೋಗುವವರು ಹೋಗಲು, ಝೆನ್ಜಿ ಗಳನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಪಕ್ಷ ಕಟ್ಟುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳೀದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಅಡ್ಡ ಮತದಾನ ನನಗೆ ಅಚ್ಚರಿ ತಂದಿಲ್ಲ. ಮೊದಲೇ ಗೊತ್ತಿತ್ತು. ಪಕ್ಷದ ನಾಲ್ವರು ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಅಂತಲೂ ಗೊತ್ತಿದೆ. ಈಗಾಗಲೇ ಅವರು ಪಕ್ಷ ಬಿಡುವ ಚರ್ಚೆಯನ್ನೂ ಮಾಡಿದ್ದಾರೆ ಎಂದರು.
ಅಡ್ಡ ಮತದಾನ ಮಾಡಿದವರು ಪಕ್ಷ ಬಿಡುವ ಹಂತದವರೆಗೂ ಅವರೆಲ್ಲ ಚರ್ಚೆ ಮಾಡಿದ್ದಾರೆ ಎಂದರಲ್ಲದೇ, ಹೋಗುವವರೆಲ್ಲಾ ಹೋಗಲಿ, ನನಗೆ ಪಕ್ಷ ಕಟ್ಟುವುದು ಗೊತ್ತಿದೆ. ಝೆನ್ ಜಿಗಳನ್ನು ಕರೆ ತಂದು ಪಕ್ಷ ಕಟ್ಟುತ್ತೇನೆ. ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆಂದು ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಯಾರು ಅಡ್ಡ ಮತದಾನ ಮಾಡಿದ್ದಾರೆ, ಯಾವ್ಯಾವ ಕಾರಣಕ್ಕೆ ಮಾಡಿದ್ದಾರೆ ಅನ್ನೋದ್ರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಅವರು ಅಡ್ಡ ಮತದಾನ ಮಾಡ್ತಾರೆ ಅನ್ನೋದರ ಬಗ್ಗೆ ಮೊದಲೇ ನಿರೀಕ್ಷೆಯಿತ್ತು. ಆದ್ದರಿಂದ ನನಗಿದು ಯಾವುದೇ ಅಚ್ಚರಿ, ಆಘಾತ ಉಂಟುಮಾಡಿಲ್ಲ. ಈಗಲೂ ಅಂಥವರು ಯಾವ ರೀತಿ ನಡೆದುಕೊಳ್ಳಬಹುದು ಅನ್ನೋದನ್ನ ತಿಳಿಯೋಕೆ ಅಭ್ಯರ್ಥಿಯನ್ನ ನಿಲ್ಲಿಸಿದ್ವಿ ಎಂದು ತಿಳಿಸಿದ್ದಾರೆ.
ಜಿಟಿ ದೇವೇಗೌಡ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ನಾನು ಅವರ ಹೆಸರು ಎತ್ತುವುದಿಲ್ಲ. ನನಗೆ ಮೂರು ಬಾರಿ ಈ ಅನುಭವ ಅಗಿದೆ. 2006 ರಲ್ಲಿ ಏನಾಯ್ತು, 2013 ರಲ್ಲಿ ಏನಾಯ್ತು? 2023 ಏನಾಯ್ತು ಎಂಬುವುದು ಗೊತ್ತು. ನನ್ನ ನಿಲುವು ಈ ವಿಚಾರವಾಗಿ ಸ್ಪಷ್ಟವಾಗಿದೆ. ಯಾರ ಒತ್ತಡಗಳು ಇದ್ದರೂ ನಾನು ಸ್ಪಷ್ಟವಾಗಿದ್ದೇನೆ.
ಎಚ್ ಡಿ ದೇವೇಗೌಡರು ಕೆಲವರ ಬಗ್ಗೆ ಅತೀವ ನಂಬಿಕೆ ಇಟ್ಟುಕೊಂಡಿದ್ದಾರೆ. ಅವರಿಗೆ ವ್ಯಾಮೋಹ, ಎಲ್ಲರನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳದೆ ಇದ್ದರೆ ಏನು ಮಾಡುವುದು? ಎಂದು ಪ್ರಶ್ನಿಸಿದರು.

