ಬೆಂಗಳೂರು ಏ,11: 2026ರ ಪಾಕಿಸ್ತಾನ್ ಸೂಪರ್ ಲೀಗ್ (PSL) ಪಂದ್ಯದಲ್ಲಿ ರಾವಲ್ಪಿಂಡಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮುಖಾಮುಖಿಯಾಗಿದ್ದಾಗ, ಉಸ್ಮಾನ್ ತಾರಿಕ್ ಅವರ ವಿವಾದಾತ್ಮಕ ಬೌಲಿಂಗ್ ಶೈಲಿಯ ವಿರುದ್ಧ ಡೆರಿಲ್ ಮಿಚೆಲ್ ವಿನೂತನವಾಗಿ ಪ್ರತಿಭಟಿಸಿದರು. ಈ ನಡೆ 2026ರ ಟಿ20 ವಿಶ್ವಕಪ್ ವೇಳೆ ಭಾರತೀಯ ಬ್ಯಾಟರ್ಗಳಿಗೆ ಆರ್. ಅಶ್ವಿನ್ ನೀಡಿದ್ದ ಸಲಹೆಯನ್ನು ನೆನಪಿಸುವಂತಿತ್ತು.
ನಿನ್ನೆ( ಏ.10) ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ತಾರಿಕ್ ಅವರ ಬೌಲಿಂಗ್ ಆಕ್ಷನ್ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಯಿತು. ರಾವಲ್ಪಿಂಡಿ ಪರ ಆಡುತ್ತಿದ್ದ ಮಿಚೆಲ್, ತಾರಿಕ್ ಅವರ ಬೌಲಿಂಗ್ ಶೈಲಿಯಿಂದ ಅಸಮಾಧಾನಗೊಂಡಿದ್ದರು.
ರಾವಲ್ಪಿಂಡಿ ಇನಿಂಗ್ಸ್ನ 9ನೇ ಓವರ್ನಲ್ಲಿ ಉಸ್ಮಾನ್ ತಾರಿಕ್ ಬೌಲಿಂಗ್ ಮಾಡಲು ಬಂದಾಗ, ಚೆಂಡನ್ನು ಎಸೆಯುವ ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿದ ಮಿಚೆಲ್, ತಾರಿಕ್ ಚೆಂಡು ಎಸೆಯುವ ಮೊದಲೇ ಎರಡು ಬಾರಿ ಕ್ರೀಸ್ನಿಂದ ಹೊರನಡೆದರು. ಇದರಿಂದ ಅಂಪೈರ್ ಮಧ್ಯಪ್ರವೇಶಿಸಿ ಮಿಚೆಲ್ ಜೊತೆ ಚರ್ಚೆ ನಡೆಸಬೇಕಾಯಿತು. ಈ ಪಂದ್ಯದಲ್ಲಿ ಮಿಚೆಲ್ 32 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು.
2026ರ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮೊದಲು ಆರ್. ಅಶ್ವಿನ್ ಅವರು ಭಾರತೀಯ ಬ್ಯಾಟರ್ಗಳಿಗೆ ಇಂತಹುದೇ ಸಲಹೆ ನೀಡಿದ್ದರು. ತಾರಿಕ್ ಅಂತಹ ವಿಶಿಷ್ಟ ಶೈಲಿಯ ಬೌಲರ್ಗಳನ್ನು ಎದುರಿಸುವಾಗ ಬ್ಯಾಟರ್ಗಳು ತಮ್ಮ ಏಕಾಗ್ರತೆ ಕಾಪಾಡಿಕೊಳ್ಳಲು ಹಾಗೂ ಬೌಲರ್ನ ಲಯ ತಪ್ಪಿಸಲು ಕ್ರೀಸ್ನಿಂದ ಹೊರಬರುವುದು ಒಂದು ತಂತ್ರವಾಗಿದೆ. ಅಂದು ಅಶ್ವಿನ್ ಹೇಳಿದ ಮಾತುಗಳನ್ನೇ ಇಂದು ಮಿಚೆಲ್ ಪಿಎಸ್ಎಲ್ ಕಣದಲ್ಲಿ ಅಳವಡಿಸಿಕೊಂಡಂತೆ ಕಂಡಿತು.
ತಾರಿಕ್ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ಚರ್ಚೆ ನಡೆಯುತ್ತಿದ್ದು, ಮಿಚೆಲ್ ಅವರ ಈ “ಬೋಲ್ಡ್” ನಡೆ ಎಲ್ಲರ ಗಮನ ಸೆಳೆದಿದೆ.

