“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ವಸು ಮಳಲಿ ಅವರ ಸಾವು ಅನ್ಯಾಯದ್ದು. ನಾಡಿನ ಜನಪರ ಚಳವಳಿಗೆ, ಸ್ತ್ರೀವಾದಿ ಚಿಂತನೆಗೆ, ಯುವಜನತೆಯನ್ನು ಬಡಿದೆಚ್ಚರಿಸಲು ಹಾಗೂ ಇತಿಹಾಸವನ್ನು ಅರಿಯಲು ಸರಿಯಾದ ಮಾರ್ಗವನ್ನು ತೋರಿಸುವ ದಿಕ್ಸೂಚಿಯೊಂದನ್ನು ಕಳೆದುಕೊಂಡಂತಾಗಿದೆ. ಇಂದಿನ ಪ್ರಕ್ಷುಬ್ಧ ಸ್ಥಿತಿಯೊಳಗೆ ಹೋರಾಡುವ ಕೈಗಳು, ಮಿಡಿಯುವ ಹೃದಯಗಳು, ನೊಂದವರ ಸೊಲ್ಲು ಕೇಳುವ ಕಿವಿಗಳು ಎಷ್ಟಿದ್ದರೂ ಸಾಲದು. ಹಾಗಾಗಿ ವಸು ಮಳಲಿಯಂತವರು ಇರಬೇಕಿತ್ತು ಎಂಬ ಕನವರಿಕೆ ನನ್ನಂತೆ ಹಲವರೊಳಗಿದೆ – ಧನಲಕ್ಷ್ಮಿ ದೇವರಾಜ್
ಇತಿಹಾಸವೆಂದರೆ ಕೇವಲ ರಾಜಮಹಾರಾಜರ ವಂಶಾವಳಿ ಅಥವಾ ಯುದ್ಧಗಳ ಪಟ್ಟಿಯಲ್ಲ; ಅದು ಜನಸಾಮಾನ್ಯರ, ಅಲಕ್ಷಿತ ಸಮುದಾಯಗಳ ಮತ್ತು ಮೌಖಿಕ ಪರಂಪರೆಯ ಜೀವಂತ ದಾಖಲೆ ಎಂದು ನಂಬಿದವರು ಡಾ.ವಸು ಮಳಲಿ. ಇವರು ಹಾಸನ ಜಿಲ್ಲೆಯ ಮಳಲಿ ಗ್ರಾಮದವರಾದ ಹಿರಿಯ ಸಾಹಿತಿ ಮಳಲಿ ವಸಂತಕುಮಾರ್ ಹಾಗೂ ಶಾಂತಾ ಅವರ ಪುತ್ರಿಯಾಗಿ 1967ರಲ್ಲಿ ಜನಿಸಿದರು. ಅವನಿ ಇವರ ಮಗಳು. ವಸು ಸಹೋದರ ಖ್ಯಾತ ಫೋಟೋಗ್ರಾಫರ್. ತಂಗಿ ರೂಪಾ.ಎಂ.ವಿ ಬಾಹ್ಯಾಕಾಶ ವಿಜ್ಞಾನಿ. ವಸು ಕೇವಲ ಒಬ್ಬ ಅಕಾಡೆಮಿಕ್ ವಿದ್ವಾಂಸೆಯಾಗಿ ಉಳಿಯದೆ ಇತಿಹಾಸ ತಜ್ಞೆ, ಕವಯಿತ್ರಿ, ಅಂಕಣಗಾರ್ತಿ, ಹೋರಾಟಗಾರ್ತಿ ಹಾಗೂ ಸಿನಿಮಾ ನಿರ್ದೇಶಕರಾಗಿಯೂ ಚಿರಪರಿಚಿತರು.
ವಸು ಅವರ ವಿದ್ಯಾಭ್ಯಾಸದ ಹಾದಿಯೇ ಪ್ರೇರಣಾದಾಯಕ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಅದೇ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದರು. ಮೈಸೂರು ರಾಜ್ಯವನ್ನಾಳಿದ ಜಯಚಾಮರಾಜೇಂದ್ರ ಒಡೆಯರ್ ಅವರ ಕುರಿತಾದ ಅವರ ಸಂಶೋಧನೆ ಅಕಾಡೆಮಿಕ್ ವಲಯದಲ್ಲಿ ಇಂದಿಗೂ ಮನ್ನಣೆ ಪಡೆದಿದೆ. ತನ್ನ ತವರಿನ ಮಳಲಿ ಗಿಡ್ಡಮ್ಮನ ಕುರಿತೂ ಆಳ ಸಂಶೋಧನೆ ನಡೆಸಿದ್ದರು. ಕೇವಲ ಓದಿನಲ್ಲಿ ಮಾತ್ರವಲ್ಲದೆ, ವಿಶ್ವವಿದ್ಯಾನಿಲಯದ ಖೋ-ಖೋ ತಂಡದ ನಾಯಕಿಯಾಗಿಯೂ ಮಿಂಚಿದ್ದ ಅವರಿಗೆ ಬದುಕಿನ ಹೋರಾಟದಲ್ಲಿ ಸೋಲೊಪ್ಪದ ಗುಣ ಕ್ರೀಡೆಯಿಂದಲೇ ಬಂದಿತ್ತು ಎನ್ನಬಹುದು.

ಪ್ರಾಧ್ಯಾಪಕಿಯಾಗಿ ತುಮಕೂರಿನಲ್ಲಿ ವೃತ್ತಿ ಜೀವನ ಆರಂಭಿಸಿದರೂ ಕೆಲ ವರ್ಷಗಳ ನಂತರ, 1998ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗಕ್ಕೆ ಸೇರ್ಪಡೆಯಾದರು. ವಿದ್ಯಾರ್ಥಿಗಳಿಗೆ ಪಠ್ಯವನ್ನಷ್ಟೇ ಬೋಧಿಸದೆ ಸಂಶೋಧನೆಯ ಹೊಸ ವಿಧಾನಗಳನ್ನು ಇವರು ಕಲಿಸುತ್ತಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿಯೂ ಕೆಲಸ ಮಾಡಿದ್ದ ವಸು ಮಳಲಿ ಒಳ್ಳೆಯ ವಾಗ್ಮಿಯಾಗಿದ್ದರು. ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಅವರು ಕೊನೆಯದಾಗಿ ನೀಡಿದ್ದ ವಿಶೇಷ ಉಪನ್ಯಾಸವು ಆ ವಿಶ್ವವಿದ್ಯಾನಿಲಯ ಕಂಡ ಅತ್ಯಂತ ಶ್ರೇಷ್ಠ ಹತ್ತು ಉಪನ್ಯಾಸಗಳಲ್ಲಿ ಒಂದೆಂದು ಇಂದಿಗೂ ಪರಿಗಣಿಸಲ್ಪಟ್ಟಿದೆ.
ದಕ್ಷಿಣ ಕರ್ನಾಟಕದ ಅರಸು ಮನೆತನಗಳು ಎಂಬ ಸಂಶೋಧನಾ ಕೃತಿಯ ಜೊತೆಗೆ ‘ಮೊಳಕೆಯೊಡೆದ ಬೀಜ’(ಕವಿತೆಗಳ ಸಂಗ್ರಹ), ‘ಕಳ್ಳು-ಬಳ್ಳಿ’ ಪ್ರಜಾವಾಣಿಯಲ್ಲಿ ಪ್ರಕಟವಾದ ಅವರ ಜನಪ್ರಿಯ ಅಂಕಣ ಬರಹಗಳ ಸಂಕಲನ, ಇತಿಹಾಸವನ್ನು ಜನರ ಚರಿತ್ರೆಯಾಗಿ ಕಟ್ಟುವ ಸಂಕೇತವಾಗಿ ‘ಕನ್ನಡದೊಳ್ ಭಾವಿಸಿದ ಜನಪದಂ’(ಸಂಪಾದನೆ), ‘ಭಾರತ ಚರಿತ್ರೆ’ಯ ಆಯ್ದ ವಿಷಯಗಳು, ‘ಕರ್ನಾಟಕ ಚರಿತ್ರೆಯ ಆಯ್ದ ವಿಷಯಗಳು’ ಹಾಗೂ ‘ಕನ್ನಡ ಮೌಖಿಕ ಇತಿಹಾಸ’ –ಇವು ಡಾ.ವಸು ಮಳಲಿ ಅವರ ಪ್ರಮುಖ ಕೃತಿಗಳು.
ಸಾಂಪ್ರದಾಯಿಕ ಇತಿಹಾಸಕಾರರು ದೂಳು ಹಿಡಿದ ಹಳೆಯ ದಾಖಲೆಗಳಲ್ಲಿ ಉತ್ತರ ಹುಡುಕುವಾಗ, ವಸು ಮಳಲಿ ಅವರು ಜನರ ಹಾಡುಗಳಲ್ಲಿ, ಮೌಖಿಕ ಕಥನಗಳಲ್ಲಿ ಇತಿಹಾಸವನ್ನು ಹುಡುಕುತ್ತಿದ್ದರು. ಒಡೆಯರ್ ಮನೆತನದ ಮೇಲೆ ಸಂಶೋಧನಾ ಕೃತಿ ಸಂಪಾದಿಸಿದರೂ, ಅವರ ಆಸಕ್ತಿ ಇದ್ದದ್ದು ಮಾತ್ರ ಅಲಕ್ಷಿತ ಸಮುದಾಯಗಳ ಮೇಲೆಯೇ. ಮಂಟೇಸ್ವಾಮಿ, ಮಲೆ ಮಾದೇಶ್ವರ ಹಾಗೂ ಮಳಲಿ ಗಿಡ್ಡಮ್ಮ ಕುರಿತ ಜಾನಪದ ರೂಪದ ಮೌಖಿಕ ಆಕರಗಳನ್ನು ಇಟ್ಟುಕೊಂಡು ಇತಿಹಾಸವನ್ನು ಜನಸಾಮಾನ್ಯರ ಕಣ್ಣೋಟದಿಂದ ನೋಡುವ ಪ್ರಯತ್ನ ಅವರದ್ದಾಗಿತ್ತು. ಅಂದರೆ, ಲಿಖಿತ ದಾಖಲೆಗಳಿಗಿಂತ ಹೆಚ್ಚಾಗಿ ಜನರ ನೆನಪುಗಳಿಗೆ, ಭಾವನೆಗಳಿಗೆ, ಅನುಭವಗಳಿಗೆ- ಕಿವಿಯಾಗುತ್ತಿದ್ದರು, ಕಣ್ಣಾಗುತ್ತಿದ್ದರು. ಹಾಗಾಗಿ ಇವರು ಸಂಪಾದಿಸಿದ ಕೃತಿ ಶೈಕ್ಷಣಿಕ ಸಂಶೋಧನೆಯಾಗಿರದೆ, ಅಧಿಕಾರಸ್ಥ ಚರಿತ್ರೆಯ ವಿರುದ್ಧದ ಒಂದು ಜನಪ್ರತಿರೋಧವಾಗಿ ಕಾಣಿಸುತ್ತದೆ.
ಹಿರಿಯ ಸಾಹಿತಿ, ಪ್ರಾಧ್ಯಾಪಕ ಹಾಗೂ ಕರುನಾಡಿನ ಸೌಹಾರ್ದ ಪರಂಪರೆಯ ಗಟ್ಟಿ ಕೊಂಡಿಯೆಂದೇ ಭಾವಿಸಲಾಗುವ ರಹಮತ್ ತರಿಕೆರೆ ಅವರು ಹೇಳುವಂತೆ, ‘ವಸು ಅವರು ಬುದ್ಧನನ್ನು ಕೇವಲ ಧರ್ಮಗುರುವನ್ನಾಗಿ ನೋಡದೆ, ಭಾರತದ ಮೊದಲ ‘ರಾಜಕೀಯ ದಾರ್ಶನಿಕ’ನನ್ನಾಗಿ ಗುರುತಿಸಿದ್ದರು. ಅಲ್ಲಮಪ್ರಭು, ಅಂಬೇಡ್ಕರ್ ಮತ್ತು ಮಂಟೇಸ್ವಾಮಿಯವರಲ್ಲಿ ಅಡಗಿರುವ ಬೌದ್ಧ ಚಿಂತನೆಯ ಎಳೆಗಳನ್ನು ಗುರುತಿಸಿದ್ದರವರು.’

ಕೇವಲ ಅಕ್ಷರಗಳಿಗಷ್ಟೇ ಸೀಮಿತವಾಗದ ವಸು ಮಳಲಿ, ಸಿನಿಮಾ ಮತ್ತು ಛಾಯಾಗ್ರಹಣದ ಮೂಲಕವೂ ತಮ್ಮ ಚಿಂತನೆಗಳನ್ನು ವಿಸ್ತರಿಸಿಕೊಂಡಿದ್ದರು. ಹಾಲಿವುಡ್ನಲ್ಲಿ ನಿರ್ದೇಶನದ ತರಬೇತಿ ಹಾಗೂ ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಸಿನಿಮಾ ನಿರ್ಮಾಣದ ತರಬೇತಿ ಪಡೆದಿದ್ದ ಅವರು, ‘ನೆತ್ತರು ಮತ್ತು ಗುಲಾಬಿ’ಯಂತಹ ಕಿರುಚಿತ್ರಗಳನ್ನು ನಿರ್ದೇಶಿಸಿದರು. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶಗಳಿದ್ದರೂ ಹಾಲಿವುಡ್ ಸೆಳೆತಕ್ಕೆ ಸಿಲುಕದೆ ನೆಲದ ಜನರ ಕತೆ ಹೆಣೆಯಲು, ತೆರೆ ಮೇಲೆ ತರಲು ಅವರು ಮುಂದಾಗಿದ್ದರು. ನಿರ್ದೇಶಕಿಯಾಗಿ ನಕ್ಸಲ್ ಹೋರಾಟಗಾರ ಸಾಕೇತ್ ರಾಜನ್ ಅವರ ಬದುಕನ್ನು ಆಧರಿಸಿದ ‘ಶಸ್ತ್ರ’ ಸಿನಿಮಾ ಮೊಟ್ಟಮೊದಲಿಗೆ ದೊಡ್ಡಪರದೆಯ ಮೇಲೆ ಕಾಣಬೇಕೆಂಬುದು ಅವರ ಕನಸಾಗಿತ್ತು. ಅವರ ದೃಷ್ಟಿಯಲ್ಲಿ ‘ಶಸ್ತ್ರ’ ಎಂದರೆ ಕೇವಲ ಆಯುಧವಲ್ಲ; ದಮನಿತರ ಮೌನ, ಸಿಟ್ಟು ಮತ್ತು ಯೋಚನೆಗಳು ಕೂಡ ಒಂದು ಬಲವಾದ ಶಸ್ತ್ರಗಳೇ ಆಗಿದ್ದವು. ಈ ಸಿನಿಮಾದಲ್ಲಿ ನಟ ಕಿಶೋರ್ ಮುಖ್ಯ ಪಾತ್ರಲ್ಲಿದ್ದರು. ಆದರೆ ವಸು ಅವರ ಅಕಾಲಿಕ ಸಾವಿನಿಂದಾಗಿ ಚಿತ್ರ ಅರ್ಧಕ್ಕೇ ಸ್ಥಗಿತಗೊಂಡಿತು.
ವಸು ಮಳಲಿ ಅವರು ದೊಡ್ಡ ಮೊತ್ತದ ಸಂಬಳ ಪಡೆದು ಐಷಾರಾಮಿಯಾಗಿ ಬದುಕುವ ವಿಶ್ವವಿದ್ಯಾಲಯದ ಹವಾನಿಯಂತ್ರಿತ ಕೊಠಡಿಯ ಒಬ್ಬ ಅಧ್ಯಾಪಕಿಯಾಗಿರಲಿಲ್ಲ. ಬದಲಾಗಿ ನಿರ್ದೇಶಕರು, ಸಂಶೋಧಕರು, ಸ್ತ್ರೀವಾದಿ, ಎಡಪಂಥೀಯ ಚಿಂತಕರು ಹಾಗೂ ದಮನಿತರ ದನಿಯಾಗಿ ಚಳವಳಿಗಳ ಮೂಲಕ ಸದಾ ಬೀದಿಯ ಹೋರಾಟಗಳಲ್ಲಿ ಇದ್ದರು. ಲೈಂಗಿಕ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ತುಳಿತಕ್ಕೊಳಗಾದವರ ಪರವಾದ ಅವರ ನಿಲುವುಗಳು ರಾಜಿಯಾಗದಂತಹವು. ಹೀಗೆ ದಣಿವರಿಯದಂತೆ ವೃತ್ತಿ, ಕುಟುಂಬ, ಬರವಣಿಗೆ, ಸಂಶೋಧನೆ, ಉಪನ್ಯಾಸಗಳು, ಚಳವಳಿ ಅಂತೆಲ್ಲ ಸದಾ ಸಮಾಜಮುಖಿಯಾಗಿ ದುಡಿಯುತ್ತಿದ್ದ ಅದಮ್ಯ ಚೈತನ್ಯವನ್ನು ಕಾಡಿದ್ದು ಸ್ತನ ಕ್ಯಾನ್ಸರ್!
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.
ವಸು ಸಾವಿಗೆ ಹೆದರಿ ಕುಗ್ಗದೆ ಬದಲಿಗೆ ಅದನ್ನೂ ಸ್ವಾಗತಿಸಿ ‘ಯಾವ ಕೊಂಕು ಇಲ್ಲದ ಗೆಳೆಯ’ ಎಂದು ಬರೆದದ್ದು ಕಂಡಾಗ, ಅವರು ಕೊನೆಯ ಕ್ಷಣದವರೆಗೂ ಜೀವನವನ್ನು ಉತ್ಕಟವಾಗಿ ಪ್ರೀತಿಸುವವರಾಗಿದ್ದರು, ವಾಸ್ತವದ ಕುರಿತು ಸ್ಥಿತಪ್ರಜ್ಞರಾಗಿದ್ದರೆನ್ನುವುದು ಅರಿವಾಗುತ್ತದೆ. ಅವರ ಈ ಬತ್ತದ ಉತ್ಸಾಹ, ಛಲದಿಂದಲೇ ಕ್ಯಾನ್ಸರ್ ಗೆದ್ದಿದ್ದರೂ ಹಠಾತ್ತನೇ ಕುಸಿದು ಬೀಳಿಸಿದ್ದ ರಕ್ತದೊತ್ತಡ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಬಾಗಿಲು ತಟ್ಟಿಸಿದರೆ, ಹೃದಯಾಘಾತ ಅವರ ಹೋರಾಟಕ್ಕೆ ಶಾಶ್ವತ ವಿಶ್ರಾಂತಿ ಕೊಟ್ಟುಬಿಟ್ಟಿತು.
2015ರ ಫೆಬ್ರವರಿ 3 ರಂದು ಅವರು ಅಗಲಿದಾಗ, ಈ ನಾಡು ಒಬ್ಬ ನಿಸ್ವಾರ್ಥ ಚಿಂತಕಿಯನ್ನು ಕಳೆದುಕೊಂಡಿತು. ಹಾಸನದ ಕಲಾ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿದ್ದ ನನ್ನೊಳಗೆ ಅತೀವ ಸಂಕಟ. ಎಸ್ಎಫ್ಐ ಮೂಲಕ ವಿದ್ಯಾರ್ಥಿ ಚಳವಳಿಯಿಂದ ಎಡಚಿಂತನೆಯ ಸಂಪರ್ಕವಿದ್ದ ನನಗೆ, ಆ ವಲಯದ ಆಪ್ತರಾಗಿದ್ದ ವಸು ಮಳಲಿ ಅವರ ಸಾವು ಹತ್ತಿರದವರನ್ನೇ ಕಳೆದುಕೊಂಡಷ್ಟು ನೋವು ತಂದಿತ್ತು. ಅವರ ಫೋಟೋ ನೋಡಿದಾಗೆಲ್ಲ, ಸದಾ ಲವಲವಿಕೆಯಿಂದ ಎಲ್ಲರೆಡೆಗೆ ನಗು ಮೊಗದಿಂದಲೆ ಕಣ್ಣು ಹಾಯಿಸುತ್ತಿದ್ದಾರೇನೋ ಎಂಬ ಜೀವಂತಿಕೆಯ ಭಾವ ಮೂಡಿಸುತ್ತಾರೆ. ವಸು ಮಳಲಿ ಅವರನ್ನು ನಾನು ಒಮ್ಮೆಯೂ ಭೇಟಿಯಾಗಿರದಿದ್ದರೂ, ನನ್ನೊಳಗೆ ಅವರೊಂದು ಸದಾ ಸ್ಫೂರ್ತಿಯ ಚಿಲುಮೆ. ದೇಹ ಬಳಲಿದರೂ ಅಂತಃಶಕ್ತಿಯನ್ನು ಗಟ್ಟಿಗೊಳಿಸಿಕೊಂಡಿದ್ದವರನ್ನು ಆ ಕ್ಯಾನ್ಸರ್ ಹೇಗೆ ಸೋಲಿಸಿತು, ಸಾವು ಅದು ಹೇಗೆ ಆವರಿಸಿತು ಎಂಬ ವೇದನೆಯ ಜಿಜ್ಞಾಸೆ ಇಂದಿಗೂ ಮೂಡುತ್ತದೆ.

ಚಿತ್ರರಂಗದಲ್ಲಿ ಅಪಾರವಾದದ್ದನ್ನು ಸಾಧಿಸುವ ದೂರದ ಯೋಜನೆಗಳನ್ನು ಹಾಕಿಕೊಂಡಿದ್ದ ನಟ, ನಿರ್ದೇಶಕ, ನಿರ್ಮಾಪಕ ಶಂಕರ್ ನಾಗ್ ಅವರ ಹಠಾತ್ ಸಾವು ಇಂದಿಗೂ ತುಂಬಲಾರದ ನಷ್ಟವನ್ನು ಉಂಟು ಮಾಡಿದಂತೆ ಹೇಗೆ ಭಾಸವಾಗುತ್ತದೆಯೇ ಹಾಗೆಯೇ ವಸು ಮಳಲಿ ಅವರ ಸಾವು ಕೂಡ ಅನ್ಯಾಯದ್ದು. ನಾಡಿನ ಜನಪರ ಚಳವಳಿಗೆ, ಸ್ತ್ರೀವಾದಿ ಚಿಂತನೆಗೆ, ಯುವಜನತೆಯನ್ನು ಬಡಿದೆಚ್ಚರಿಸಲು ಹಾಗೂ ಇತಿಹಾಸವನ್ನು ಅರಿಯಲು ಸರಿಯಾದ ಮಾರ್ಗವನ್ನು ತೋರಿಸುವ ದಿಕ್ಸೂಚಿಯೊಂದನ್ನು ಕಳೆದುಕೊಂಡಂತಾಗಿದೆ. ಇಂದಿನ ಪ್ರಕ್ಷುಬ್ಧ ಸ್ಥಿತಿಯೊಳಗೆ ಹೋರಾಡುವ ಕೈಗಳು, ಮಿಡಿಯುವ ಹೃದಯಗಳು, ನೊಂದವರ ಸೊಲ್ಲು ಕೇಳುವ ಕಿವಿಗಳು ಎಷ್ಟಿದ್ದರೂ ಸಾಲದು. ಹಾಗಾಗಿ ವಸು ಮಳಲಿಯಂತವರು ಇರಬೇಕಿತ್ತು ಎಂಬ ಕನವರಿಕೆ ನನ್ನಂತೆ ಹಲವರೊಳಗಿದೆ.
ನನ್ನ ಮಾನಸ ಗುರುಗಳಾದ ಪುರುಷೋತ್ತಮ ಬಿಳಿಮಲೆಯವರು ಹೇಳಿರುವಂತೆ- ‘ಚರಿತ್ರೆಯನ್ನು ಹೊಸದಾಗಿ ಬರೆಯುತ್ತಿದ್ದ ವಸು ಮಳಲಿ ಇಷ್ಟು ಬೇಗ ಚರಿತ್ರೆಯ ಪುಟಗಳನ್ನು ಸೇರಬಾರದಿತ್ತು.’ ತೆರೆದ ಪುಸ್ತಕದಂತಿರುವ ಅವರ ಬದುಕು-ಬರಹ ಹಳೆಯದನ್ನು ಪ್ರಶ್ನಿಸಿ, ಹೊಸ ಪರ್ಯಾಯಗಳನ್ನು ಹುಡುಕುವ ಧೈರ್ಯವನ್ನು, ಚಿಂತನೆಯನ್ನು ನಮಗೆ ಕಲಿಸುತ್ತದೆ. ‘ಇತಿಹಾಸದ ಬಗ್ಗೆ ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು’ ಎನ್ನುವ ಮಾತಿನಂತೆ, ವಸು ಮಳಲಿ ಅವರ ಬದುಕು-ಬರಹ ಹಾಗೂ ಅವರ ವಿಚಾರಗಳನ್ನು ಅರಿಯದೆ ಇತಿಹಾಸದ ವಿದ್ಯಾರ್ಥಿಗಳ ಕಲಿಕೆ ಪರಿಪೂರ್ಣವಾಗದು ಎಂಬುದು ನನ್ನ ಅಚಲವಾದ ಅಭಿಮತ. ವಸು ಮಳಲಿಯವರ ಕಲಿಕಾ ವಿಧಾನ, ಉಪನ್ಯಾಸ, ಚಿಂತನೆಗಳು ಹಾಗೂ ಭವಿಷ್ಯದ ಕೆಲಸಗಳ, ಕನಸುಗಳ ಬಗ್ಗೆ ಅರಿತಿದ್ದವರಿಗೆ ‘ಪೂರ್ಣ ಅರಳುವ ಮುನ್ನವೇ ಉದುರಿಬಿದ್ದ ಮೊಗ್ಗು ವಸು’ ಎಂಬ ಭಾವ ಎಂದಿಗೂ ಕಾಡುತ್ತದೆ. ವಸು ಅವರ ಅಕಾಲಿಕ ನಿರ್ಗಮನದ ನಂತರ ನಾಡಿನ ಹಲವು ಚಿಂತಕರು, ಅವರ ಆಪ್ತರು ಬರೆದಿದ್ದ ಬರಹಗಳ ಸಂಕಲನವು ಇದನ್ನು ದೃಢಗೊಳಿಸುತ್ತದೆ.
ಕೇವಲ 48 ವರ್ಷ ಜೀವಿಸಿ ಚರಿತ್ರೆಯ ಪುಟಗಳನ್ನು ಸೇರಿದ್ದರೂ, ಸಮಾಜವನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ವಸು ಅವರ ವಿಭಿನ್ನ ದೃಷ್ಟಿಕೋನ ನಮ್ಮಂತವರ ಆಲೋಚನೆಗಳಿಗೆ ಪ್ರೇರಣೆಯಾಗಿ ಉಳಿಯುತ್ತದೆ. ಹಲವು ತಲೆಮಾರುಗಳಿಗೆ, ಅದರಲ್ಲೂ ಸಂವೇದನೆ ತುಂಬಿಕೊಂಡ ಹೃದಯಗಳಿಗೆ ಸ್ಪೂರ್ತಿಯ ಸೆಲೆಯಾಗಿ, ಸಮಾಜದ ಮೌನವನ್ನು ಮುರಿಯುವ ಶಕ್ತಿಯಾಗಿ ಉಳಿದಿರುವ ಡಾ.ವಸು ಮಳಲಿ ಅವರಿಗೆ ಇದೋ ನನ್ನ ಅಕ್ಷರ ನಮನಗಳು.
ಧನಲಕ್ಷ್ಮಿ ದೇವರಾಜ್
ಇದನ್ನೂ ಓದಿ- ಸ್ತ್ರೀ ಆರೋಗ್ಯ ಸೇವೆಯ ಅನನ್ಯ ಮಾದರಿ- ಡಾ.ಪುಟ್ಟಮ್ಮ


