ಬೆಂಗಳೂರು ಏ.16: ಐಪಿಎಲ್ ಇತಿಹಾಸದ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಈಗ ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಗುರುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ವಿಶ್ವದ ಶ್ರೇಷ್ಠ ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಕಳೆದ 122 ಎಸೆತಗಳಿಂದ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಕಳೆದ ವರ್ಷ ಪಂಜಾಬ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಿಂದಲೇ ಆರಂಭವಾದ ಈ ಜೀರೋ ವಿಕೆಟ್ ಅವಧಿಯು ಈಗ ಅದೇ ಎದುರಾಳಿಗಳ ವಿರುದ್ಧ ಅಂತ್ಯಗೊಳ್ಳುತ್ತದೆಯೇ ಎಂಬ ಕುತೂಹಲ ಮೂಡಿಸಿದೆ. ಬುಮ್ರಾ ಅವರ ಎಕಾನಮಿ ನಿಯಂತ್ರಣದಲ್ಲಿದ್ದರೂ, ತಂಡಕ್ಕೆ ಬೇಕಾದ ‘ಬ್ರೇಕ್ಥ್ರೂ’ ನೀಡುವಲ್ಲಿ ಅವರು ವಿಫಲರಾಗುತ್ತಿರುವುದು ಮುಂಬೈಗೆ ಹಿನ್ನಡೆಯಾಗಿದೆ.
ಮುಂಬೈ ತಂಡದ ಸಮಸ್ಯೆ ಕೇವಲ ಬೌಲಿಂಗ್ಗೆ ಸೀಮಿತವಾಗಿಲ್ಲ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅವರನ್ನೊಳಗೊಂಡ ಮಧ್ಯಮ ಕ್ರಮಾಂಕ ಈ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ವಿದೇಶಿ ವೇಗಿಗಳು ರನ್ ಬಿಟ್ಟುಕೊಡುತ್ತಿರುವುದು ಮತ್ತು ಸ್ಪಿನ್ನರ್ಗಳ ವೈಫಲ್ಯ ತಂಡವನ್ನು ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಕ್ಕೆ ತಳ್ಳುತ್ತಿದೆ. ತಂಡದಲ್ಲಿ ಹೋರಾಟದ ಕಿಚ್ಚಿದ್ದರೂ, ಗೆಲುವಿನ ದಡ ತಲುಪಲು ಬೇಕಾದ ಸಂಘಟಿತ ಪ್ರದರ್ಶನ ಮೂಡಿಬರುತ್ತಿಲ್ಲ.
ಅಜೇಯ ಪಂಜಾಬ್ ಕಿಂಗ್ಸ್ ಅಬ್ಬರ
ಮತ್ತೊಂದೆಡೆ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಈ ಸೀಸನ್ನಲ್ಲಿ ಅಜೇಯ ಓಟ ಮುಂದುವರಿಸಿದೆ. ಕೋಚ್ ರಿಕ್ಕಿ ಪಾಂಟಿಂಗ್ ಅವರ ಮಾರ್ಗದರ್ಶನ ಮತ್ತು ಅಯ್ಯರ್ ಅವರ ಚಾಣಾಕ್ಷ ನಾಯಕತ್ವ ತಂಡಕ್ಕೆ ಆನೆಬಲ ನೀಡಿದೆ. ಮುಂಬೈ ವಿರುದ್ಧದ ಮುಖಾಮುಖಿ ದಾಖಲೆಯಲ್ಲಿ ಸಮಬಲ (17-17) ಹೊಂದಿರುವ ಪಂಜಾಬ್, ಕಳೆದ ಐದು ಪಂದ್ಯಗಳಲ್ಲಿ 3-2 ಅಂತರದ ಮೇಲುಗೈ ಸಾಧಿಸಿದೆ. ಶಶಾಂಕ್ ಸಿಂಗ್ ಅಂತಹ ಆಟಗಾರರ ಮಿಂಚಿನ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಐದು ಬಾರಿ ಚಾಂಪಿಯನ್ ಮುಂಬೈ ತನ್ನ ತವರಿನಲ್ಲಿ ಲಯಕ್ಕೆ ಮರಳುತ್ತದೆಯೇ ಅಥವಾ ಪಂಜಾಬ್ ಕಿಂಗ್ಸ್ ತನ್ನ ಗೆಲುವಿನ ಓಟ ಮುಂದುವರಿಸುತ್ತದೆಯೇ ಎಂಬುದು ಇಂದಿನ ಪದ್ಯದ ಕಾದಾಟದಲ್ಲಿ ನಿರ್ಧಾರವಾಗಲಿದೆ.

