ಬೆಂಗಳೂರು: ದೇಶದಲ್ಲಿ ಎಲ್ಲಾ ಧರ್ಮದವರೂ ಇರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ ಎಂದು ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಂದೇ ಮಾತರಂ ಹೇಳಿ ರಾಷ್ಟ್ರಗೀತೆಯನ್ನು ಡೀ ಪ್ರಮೋಟ್ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆರ್ಎಸ್ಎಸ್ನ ಗೋಳವಲ್ಕರ್ ರಾಷ್ಟ್ರಗೀತೆಯ ಬಗ್ಗೆಯೇ ಅಪಸ್ವರ ಎತ್ತಿದ್ದರು. ಒಂದೇ ಒಂದು ದಿನವೂ ರಾಷ್ಟ್ರ ಗೀತೆಯನ್ನು ಅವರ ಸಂಘದಲ್ಲಿ ಹಾಡಿದವರಲ್ಲ. ಅದೇ ಕಾರಣಕ್ಕೆ ವಂದೇ ಮಾತರಂನ್ನು ಎಲ್ಲಾ ಕಡೆ ಕಡ್ಡಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊದಲು ವಂದೇ ಮಾತರಂ, ಬಳಿಕ ರಾಷ್ಟ್ರಗೀತೆ ಹಾಡುವುದು ರಾಷ್ಟ್ರಗೀತೆಗೆ ಅಪಮಾನ ಮಾಡಿದ ಹಾಗೆ. ಬಿಜೆಪಿ ಸರ್ಕಾರ ನಮ್ಮ ಶಿಷ್ಟಾಚಾರಕ್ಕೆ ಅಪಮಾನ ಮಾಡುತ್ತಿದೆ. ಬಿಜೆಪಿಯವರು ರಾಷ್ಟ್ರಗೀತೆಯ ವಿರುದ್ಧವೇ ಹೋಗ್ತಿದ್ದಾರೆ. ವಂದೇ ಮಾತರಂ ಬೆಂಗಾಲ್ ಪ್ರಾಂತ್ಯದ ರಾಷ್ಟ್ರಗೀತೆ ಆಗಿತ್ತೇ ವಿನಃ ಇಡೀ ದೇಶದ ರಾಷ್ಟ್ರಗೀತೆ ಆಗಿರಲಿಲ್ಲ. ಬೆಂಗಾಲ್ ಚುನಾವಣೆ ಸಲುವಾಗಿ ವಂದೇ ಮಾತರಂ ಕಡ್ಡಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ದೇವರ ಹೆಸರು ಕೂಡ ವಂದೇ ಮಾತರಂನಲ್ಲಿದೆ. ಎಲ್ಲ ಧರ್ಮದವರೂ ಈ ದೇಶದಲ್ಲಿ ಇರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ. ಕೆಟ್ಟ ಭಾವನೆಗಳನ್ನು ಕೆರಳಿಸಲು, ಕೋಮು ಭಾವನೆ ಕೆರಳಿಸಲು ಇದನ್ನು ತಂದಿದ್ದಾರೆ. ಇದೂ ಕೂಡ ಚುನಾವಣಾ ಗಿಮಿಕ್ ಎಂದು ಆರೋಪಿಸಿದ್ದಾರೆ.


