ಬೆಂಗಳೂರು: ನಗರದ ಕೆ.ಆರ್.ಪುರಂ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಪ್ರಕರಣದ ಆರೋಪಿ ಶ್ವೇತಾ ಇದೀಗ ತನ್ನ ಗೆಳೆಯ ಹಾಗೂ ಸಹ ಆರೋಪಿ ಜೆ. ಕೆನತ್ ವಿರುದ್ಧವೇ ಸಾಕ್ಷಿಯಾಗಲು ಮುಂದಾಗಿದ್ದಾರೆ. ತಾನು ಪ್ರಕರಣದಲ್ಲಿ ಭಾಗಿಯಾಗಿದ್ದರೂ, ಮೂವರನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡಿದ್ದು ಹಾಗೂ ಕೊಲೆಗಳನ್ನು ನಡೆಸಿದ್ದು ಕೆನತ್ ಎಂದು ಶ್ವೇತಾ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ.
ಮಾಫಿ ಸಾಕ್ಷಿಯಾಗಲು ಅವಕಾಶ ನೀಡುವಂತೆ ಕೋರಿ ಶ್ವೇತಾ 29ನೇ ಎಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ತಾನು ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದೆ. ಆದರೆ, ಮೂವರಿಗೂ ಚಾಕುವಿನಿಂದ ಇರಿದಿಲ್ಲ ಮತ್ತು ತಾನು ನೇರವಾಗಿ ಕೊಲೆ ಮಾಡಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಳ್ಳಲು ಸಿದ್ಧವಿದ್ದು, ಕೆನತ್ ವಿರುದ್ಧ ಸಾಕ್ಷ್ಯ ನೀಡುವುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಜೂನ್ 22ರಂದು ಸೀಗೆಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ಶ್ವೇತಾ ಅವರ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮಿ ಹಾಗೂ ಕಿರಿಯ ಸಹೋದರಿ ಸುಪ್ರಿಯಾ ಕೊಲೆಯಾಗಿದ್ದರು. ಆರಂಭದಲ್ಲಿ ಶ್ವೇತಾ ಮತ್ತು ಕೆನತ್ ಇಬ್ಬರ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇಬ್ಬರೂ ಘಟನೆ ಬಳಿಕ ಬೆಂಗಳೂರಿನಿಂದ ಪರಾರಿಯಾಗಿದ್ದರು. ಶ್ವೇತಾಳನ್ನು ಜೂನ್ 24ರಂದು ಪುದುಚೇರಿಯ ಹೋಟೆಲ್ನಲ್ಲಿ ಬಂಧಿಸಲಾಗಿತ್ತು. ಕೆನತ್ನನ್ನು ಜೂನ್ 26ರಂದು ಬಂಧಿಸಲಾಗಿತ್ತು.
ತನಿಖೆಯ ಆರಂಭಿಕ ಹಂತದಲ್ಲಿ ಪೊಲೀಸರು ಇಬ್ಬರೂ ಸೇರಿ ಕೊಲೆಗಳನ್ನು ನಡೆಸಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ವಿಚಾರಣೆ ವೇಳೆ ಕೆನತ್ನ ಪಾತ್ರದ ಬಗ್ಗೆ ಹಲವು ಆರೋಪಗಳು ಕೇಳಿಬಂದವು. ಜುಲೈನಲ್ಲಿ ಪೊಲೀಸರು ಕೆನತ್ನಿಂದ ಹೆಚ್ಚುವರಿ ವಿಚಾರಣೆ ನಡೆಸಿ, ಪಾಲಿಗ್ರಾಫ್ ಪರೀಕ್ಷೆಯ ಬಳಿಕ ಬ್ರೈನ್ ಮ್ಯಾಪಿಂಗ್ ಮತ್ತು ನಾರ್ಕೊ ಅನಾಲಿಸಿಸ್ ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದಿದ್ದರು. ತನಿಖಾಧಿಕಾರಿಗಳ ಪ್ರಕಾರ, ಕೊಲೆ ಪೂರ್ವಯೋಜಿತವಾಗಿತ್ತೇ ಮತ್ತು ಅದರ ಹಿಂದಿನ ನಿಖರ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಉದ್ದೇಶವಾಗಿತ್ತು.
ಈ ಪ್ರಕರಣದಲ್ಲಿ ಹಣಕಾಸಿನ ವ್ಯವಹಾರವೂ ಪ್ರಮುಖ ಆಯಾಮವಾಗಿ ಹೊರಹೊಮ್ಮಿತ್ತು. ಶ್ವೇತಾ ಅವರು ಕೆನತ್ನ ಜೀವನಶೈಲಿಗೆ ಹಣಕಾಸು ಒದಗಿಸಲು ದೊಡ್ಡ ಮೊತ್ತದ ಸಾಲ ಪಡೆದಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಸಾಲದ ಕಂತುಗಳ ಪಾವತಿ ವಿಚಾರದಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಪೊಲೀಸರು ಹೇಳಿದ್ದರು. ಕುಟುಂಬದೊಂದಿಗೆ ಸಂಬಂಧ ಮತ್ತು ಹಣಕಾಸಿನ ಒತ್ತಡ ಪ್ರಕರಣದ ಹಿನ್ನೆಲೆಯಲ್ಲಿದ್ದ ಪ್ರಮುಖ ಅಂಶಗಳೆಂದು ತನಿಖಾಧಿಕಾರಿಗಳು ಪರಿಶೀಲಿಸಿದ್ದರು.
ತನಿಖೆಯ ಮತ್ತೊಂದು ಪ್ರಮುಖ ಅಂಶವೆಂದರೆ ಡಿಜಿಟಲ್ ಸಾಕ್ಷ್ಯ. ಕೆನತ್ ಕೊಲೆ ಕೃತ್ಯಕ್ಕೆ ಮುನ್ನ ಹಲವು ತಿಂಗಳುಗಳ ಕಾಲ ಆನ್ಲೈನ್ನಲ್ಲಿ ಮಾಹಿತಿಯನ್ನು ಹುಡುಕಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದರು. ಕೊಲೆ ಹಾಗೂ ಮೃತದೇಹಗಳ ವಿಲೇವಾರಿ ಕುರಿತ ಮಾಹಿತಿಗಾಗಿ ಎಐ ಚಾಟ್ಬಾಟ್ ಬಳಸಿದ್ದಾನೆ ಎಂಬ ಆರೋಪವೂ ತನಿಖೆಯಲ್ಲಿ ಕೇಳಿಬಂದಿತ್ತು. ಈ ಸಂಬಂಧ ಡಿಜಿಟಲ್ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದರು.
ಇದೀಗ ಶ್ವೇತಾ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದ ತನಿಖೆ ಹಾಗೂ ಮುಂದಿನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಆದರೆ, ಆಕೆಯ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿ ಅಧಿಕೃತವಾಗಿ ‘ಮಾಫಿ ಸಾಕ್ಷಿ’ಯಾಗಿ ಪರಿಗಣಿಸುವವರೆಗೆ ಆಕೆ ಆರೋಪಿಯಾಗಿಯೇ ಮುಂದುವರಿಯುತ್ತಾರೆ. ನ್ಯಾಯಾಲಯ ಆಕೆಯ ಹೇಳಿಕೆ, ಪ್ರಕರಣದಲ್ಲಿನ ಪಾತ್ರ ಹಾಗೂ ನೀಡಬಹುದಾದ ಸಾಕ್ಷ್ಯದ ಮಹತ್ವವನ್ನು ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಶ್ವೇತಾ ಅವರ ಅರ್ಜಿ ಅಂಗೀಕಾರವಾದರೆ, ಕೆನತ್ ವಿರುದ್ಧದ ಪ್ರಕರಣದಲ್ಲಿ ಆಕೆಯ ಹೇಳಿಕೆ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ. ಅದೇ ವೇಳೆ, ತಾನು ನೇರವಾಗಿ ಕೊಲೆ ಮಾಡಿಲ್ಲ ಎಂಬ ಶ್ವೇತಾ ಅವರ ಹೇಳಿಕೆಯನ್ನು ತನಿಖಾಧಿಕಾರಿಗಳು ಈಗಾಗಲೇ ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಗಳು, ಫೊರೆನ್ಸಿಕ್ ಸಾಕ್ಷ್ಯ, ಡಿಜಿಟಲ್ ದಾಖಲೆಗಳು ಹಾಗೂ ಇತರ ಸಾಕ್ಷ್ಯಗಳೊಂದಿಗೆ ಹೋಲಿಕೆ ಮಾಡಬೇಕಾಗುತ್ತದೆ.
ಹೀಗಾಗಿ, ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಕುರಿತು ಇದುವರೆಗೆ ಇದ್ದ ಹಲವು ಪ್ರಶ್ನೆಗಳಿಗೆ ಶ್ವೇತಾ ಅವರ ‘ಮಾಫಿ ಸಾಕ್ಷಿ’ ಅರ್ಜಿ ಹೊಸ ತಿರುವು ನೀಡಿದೆ. ನ್ಯಾಯಾಲಯದ ಮುಂದಿನ ವಿಚಾರಣೆಯಲ್ಲಿ ಆಕೆ ನೀಡಲಿರುವ ಹೇಳಿಕೆ ಮತ್ತು ಆ ಹೇಳಿಕೆಗೆ ಸಿಗುವ ಕಾನೂನು ಮಾನ್ಯತೆ ಪ್ರಕರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ.

