ಬೆಂಗಳೂರು: ಮತ ಕಳ್ಳತನ ವಿರೋಧಿ ಹೋರಾಟ ಕೇವಲ ರಾಜಕೀಯ ಉದ್ದೇಶದ ಹೋರಾಟವಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟ. ಜನರ ಮತಾಧಿಕಾರದ ರಕ್ಷಣೆಯ ಹೋರಾಟ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಅವರು ಇಂದು ಮತಗಳ್ಳತನ ವಿರುದ್ದ ಬೆಂಗಳೂರಿನ ಪುಲಕೇಶಿ ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಚಾಲನೆ ನೀಡಿ ಮಾತನಾಡಿದರು.
ಸಂವಿಧಾನದಲ್ಲಿ ಒಬ್ಬ ವ್ಯಕ್ತಿ ಒಂದು ಮತ ಎಂದು ಹೇಳಲಾಗಿದೆ. ಇಂದು ಸಂವಿಧಾನ ಹೇಳಿದ್ದನ್ನು ಮೀರಿ ಮತಕಳ್ಳತನ ಮಾಡಲಾಗುತ್ತಿದೆ. ನಮ್ಮ ಪವಿತ್ರ ಸಂವಿದಾನವನ್ನು ಎಲ್ಲರೂ ಒಟ್ಟಿಗೆ ಸೇರಿ ರಕ್ಷಿಸಿಕೊಳ್ಳಬೇಕಿದೆ. ಈ ದೇಶದಲ್ಲಿ ಹೊಸಕ್ರಾಂತಿಯ ಅಲೆಯನ್ನು, ಬದಲಾವಣೆಯನ್ನು ನಾವು ನೀವೆಲ್ಲರೂ ಸೇರಿ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಗಲ್ಲಿ, ಗಲ್ಲಿಯಲ್ಲಿ ಎಷ್ಟು ಜನ ಸಾಧ್ಯವೋ ಅಷ್ಟು ಜನರನ್ನು ಒಗ್ಗೂಡಿಸಿ ಮತಕಳ್ಳತನದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಜನರ ಹಕ್ಕನ್ನು ಕಾಪಾಡುವಂತೆ ಪ್ರೇರೆಪಿಸಬೇಕು. ಬೆಂಗಳೂರಿನ ಪುಲಕೇಶಿ ನಗರದಲ್ಲಿ ಎದ್ದಿರುವ ದನಿ ಇಡೀ ದೇಶಕ್ಕೆ ಕೇಳಿಸಬೇಕು ಎಂದರು.
ಅಶ್ಪಾಕ್ ಉಲ್ಲಾ ಖಾನ್, ಭಗತ್ ಸಿಂಗ್, ಸುಖದೇವ, ರಾಜಗುರು, ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕರು ಹೀಗೆ ನೂರಾರು ಮಂದಿ ಈ ದೇಶದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ್ದಾರೆ. ಆದ ಕಾರಣಕ್ಕೆ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇದನ್ನ ಮತಕಳ್ಳತನದ ಮೂಲಕ ವ್ಯವಸ್ಥಿತವಾಗಿ ಕದಿಯಲಾಗುತ್ತಿದೆ. ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯಾದ ಸಂವಿಧಾನವನ್ನ ರಕ್ಷಣೆ ಮಾಡಲು ಸೇರಿದ್ದೇವೆ. ಇಂದು ಸಂವಿಧಾನದ ಜೊತೆ ಜೊತೆಗೆ ಪ್ರಜಾಪ್ರಭುತ್ವವನ್ನು ನಾಶ ಮಾಡಲಾಗುತ್ತಿದೆ. ಇದು ಕೇವಲ ಕಾಂಗ್ರೆಸ್ ಮತ್ತು ಬಿಜಪಿ ನಡುವಿನ ಸಂಘರ್ಷವಲ್ಲ. ಈ ದೇಶದ ಜನ ಸಾಮಾನ್ಯರ ಸಂಘರ್ಷ ಎಂದು ಹೇಳಿದರು.
ಮತ ಕಳ್ಳತನ ವಿರೋಧಿ ಹೋರಾಟ ಕೇವಲ ರಾಜಕೀಯ ಉದ್ದೇಶದ ಹೋರಾಟವಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟ. ಜನರ ಮತಾಧಿಕಾರದ ರಕ್ಷಣೆಯ ಹೋರಾಟವಾಗಿದೆ. ದೇಶದ ಜನರು ತಮ್ಮ ಆಯ್ಕೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬರ ಮತಗಳನ್ನೂ ವ್ಯವಸ್ಥಿತವಾಗಿ ಕದಿಯಲಾಗುತ್ತಿದೆ. ಈ ಅಕ್ರಮದ ಹಿಂದೆ ಬಿಜೆಪಿ ಇದೆ. ಈ ಅಕ್ರಮವನ್ನು ಬಯಲಿಗೆ ಎಳೆಯಬೇಕು. ಅದಕ್ಕಾಗಿ ಬೃಹತ್ ಹೋರಾಟದ ಜೊತೆ ಜೊತೆಯಲ್ಲಿ ಸಣ್ಣ ಸಣ್ಣ ಪ್ರಮಾಣದ ಜನಜಾಗೃತಿ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದೆ ಎಂದು ಹೇಳಿದರು.
ಮತ ಕಳ್ಳತನದಿಂದ ಈ ದೇಶದ ಮಹಿಳೆಯರು, ಕೂಲಿ ಕಾರ್ಮಿಕರು, ಬಡವರು, ಹಿಂದುಳಿದವರು, ಅಲ್ಪ ಸಂಖ್ಯಾತರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ಸಣ್ಣ ಉದ್ದಿಮೆದಾರರು, ದಿನಸಿ ಅಂಗಡಿ ಮಾಲೀಕರು, ಸಣ್ಣಪುಟ್ಟ ಬೀದಿಬದಿ ವ್ಯಾಪಾರಿಗಳು ಹೀಗೆ ಸಮಾಜದ ಸೂಕ್ಷ್ಮ ವರ್ಗದವರ ಮೇಲಿನ ದಾಳಿ ಹಾಗೂ ಈ ಎಲ್ಲಾ ಸಮಾಜಗಳಿಗೆ ತೀವ್ರ ಹಿನ್ನಡೆ ಎಂದೇ ಹೇಳಬಹುದು. ಇದು ಕೇವಲ ಮತಕಳ್ಳತನ ಮಾತ್ರವಲ್ಲ. ಜನಸಾಮಾನ್ಯರ ಹಕ್ಕಿನ ಕಳ್ಳತನ ಎಂದು ಗುಡುಗಿದರು.
ಪ್ರಜಾಪ್ರಭುತ್ವದ ಕಳ್ಳತನ ಮಾಡಲು ನಾವು ಬಿಡುವುದಿಲ್ಲ ಎಂದು ಸುಮಾರು ಐದು ಕೋಟಿಗೂ ಹೆಚ್ಚು ಸಹಿಗಳನ್ನು ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಕಳುಹಿಸಬೇಕಿದೆ. ಮಹದೇವಪುರ ಹಾಗೂ ಆಳಂದ ಕ್ಷೇತ್ರದಲ್ಲಿ ಮತಕಳ್ಳತನ ನಡೆದಂತೆ ದೇಶದ ಪ್ರತಿಯೊಂದು ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ನಡೆಯುತ್ತಿದೆ.
ಮಾಧ್ಯಮ, ಸರ್ಕಾರಿ ನೌಕರ, ಜನಪ್ರತಿನಿಧಿ ಸೇರಿದಂತೆ ಎಲ್ಲರನ್ನೂ ರಕ್ಷಿಸುತ್ತಿರುವುದು ಈ ದೇಶದ ಸಂವಿಧಾನ. ನೆಹರು, ವಲ್ಲಭಭಾಯಿ ಪಟೇಲ್, ಬಾಬು ರಾಜೇಂದ್ರ ಪ್ರಸಾದ್, ಮೌಲಾನಾ ಅಬ್ದುಲ್ ಕಲಾಂ ಸೇರಿದಂತೆ ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನದಿಂದ ಈ ದೇಶ ನಿರ್ಮಾಣವಾಗಿದೆ. ಇಂತಹ ಪವಿತ್ರ ದೇಶವನ್ನ ಲೂಟಿಕೋರರಿಂದ ರಕ್ಷಿಸಲು ಪಣ ತೊಡಬೇಕು. ಪಕ್ಷದ ಎಲ್ಲಾ ಘಟಕಗಳು ಕ್ರಿಯಾಶೀಲವಾಗಿದ್ದು ಮತಕಳ್ಳತನದ ವಿರುದ್ದ ಜನಾಭಿಪ್ರಾಯ ರೂಪಿಸಬೇಕು. ಕಾಂಗ್ರೆಸ್ ಪಕ್ಷದ ದನಿಯಾಗದೇ ದೇಶದ ದೇಶದ ಜನಸಾಮಾನ್ಯರ ದನಿಯಾಗಿ ಇದು ರೂಪುಗೊಳ್ಳಬೇಕು ಎಂದು ಕರೆ ನೀಡಿದರು.