ಕೊಚ್ಚಿ:ಕೇರಳದ ಜಿಲ್ಲಾ ನ್ಯಾಯಾದೀಶರು ಸೇರಿದಂತೆ 972 ಮಂದಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ ಎಫ್ ಐ) ಹಿಟ್ ಲಿಸ್ಟ್ ನಲ್ಲಿದ್ದರು ಎಂಬ ಸ್ಪೋಟಕ ಮಾಹಿತಿ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಗಳಿಂದ ತಿಳಿದು ಬಂದಿದೆ. ಪಿ ಎಫ್ ಐ ಸಂಘಟನೆಯನ್ನು ಕೇಂದ್ರ ಸರ್ಕಾರವು 2022ರ ಸೆಪ್ಟೆಂಬರ್ನಲ್ಲಿ ನಿಷೇಧಿಸಿತ್ತು.
ಪಿ ಎಫ್ ಐ ಸಂಘಟನೆಯು ವರದಿಗಾರರ ವಿಭಾಗ’, ‘ಮಾನಸಿಕ ಮತ್ತು ಶಸ್ತ್ರಾಸ್ತ್ರ ತರಬೇತಿ ವಿಭಾಗ’ ಹಾಗೂ ‘ಸೇವಾ ವಿಭಾಗ/ದಾಳಿ ತಂಡಗಳು’ ಎಂಬ ಮೂರು ವಿಭಾಗಗಗಳನ್ನು ಹೊಂದಿದೆ. ಹಿಟ್ ಲಿಸ್ಟ್ ನಲ್ಲಿರುವವರಿಗೆ ಸಂಬಂಧಿಸಿದ ಮಾಹಿತಿಯನ್ನು ವರದಿಗಾರರ ವಿಭಾಗದ ಮೂಲಕ ಕಲೆಹಾಕಿತ್ತು ಎಂದು ಎನ್ ಐಎ ತಿಳಿಸಿದೆ.
ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಪ್ರಮುಖ ವ್ಯಕ್ತಿಗಳ ದಿನಚರಿ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಗುಪ್ತಚರ ಪಡೆಯಂತೆ ಕಾರ್ಯನಿರ್ವಹಿಸುತ್ತಿದ್ದ ‘ವರದಿಗಾರರ ವಿಭಾಗ’ದ ಮೂಲಕ ಪಿ ಎಫ್ ಐ ಕಲೆಹಾಕಿತ್ತು ಎಂದು ಹೇಳಿದೆ.
2022ರಲ್ಲಿ ನಡೆದ ಕೆ.ಶ್ರೀನಿವಾಸನ್ ಅವರ ಕೊಲೆ ಪ್ರಕರಣದ ಆರೋಪಿಗಳು ಜಾಮೀನು ಅರ್ಜಿ ವಜಾ ಗೊಳಿಸಿರುವ ಎನ್ ಐ ಎ ವಿಶೇಷ ನ್ಯಾಯಾಲಯದ ಆದೇಶದಲ್ಲಿಯೂ, ಈ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಿದೆ. ಆರ್ ಎಸ್ ಎಸ್ ನಾಯಕ ಶ್ರೀನಿವಾಸನ್ ಅವರನ್ನು ಅವರ ಮಳಿಗೆಯಲ್ಲೇ 2022ರ ಏಪ್ರಿಲ್ 16ರಂದು ಕೊಲೆ ಮಾಡಲಾಗಿತ್ತು. ಇದರ ಹಿಂದೆ ಪಿ ಎಫ್ ಐ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.
ಶ್ರೀನಿವಾಸನ್ ಹತ್ಯೆ ಆರೋಪಿಗಳಿಗೆ ಜಾಮೀನು ನೀಡದಂತೆ ಕೋರಿರುವ ಎನ್ ಐ ಎ, ವಿವಿಧ ಆರೋಪಿಗಳಿಂದ ವಶಕ್ಕೆ ಪಡೆದಿರುವ ದಾಖಲೆಗಳಿಗೂ ಪಿ ಎಫ್ ಐ ಹಿಟ್ ಲಿಸ್ಟ್ ನಲ್ಲಿರುವ 972 ವ್ಯಕ್ತಿಗಳ ಕುರಿತ ಮಾಹಿತಿಗೂ ಹೋಲಿಕೆ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.