ಐಶ್ವರ್ಯ ಗೌಡ ವಂಚನೆ ಪ್ರಕರಣ: ಇಡಿ ತನಿಖೆಗೆ ಹಾಜರಾದ ಮಾಜಿ ಸಂಸದ ಡಿ.ಕೆ. ಸುರೇಶ್

Most read

ಬೆಂಗಳೂರು:  ಐಶ್ವರ್ಯ ಗೌಡ ವಂಚನೆ ಪ್ರಕಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೆ ಬಮೂಲ್ ಅಧ್ಯಕ್ಷರೂ ಆಗಿರುವ ಮಾಜಿ ಸಂಸದ ಡಿ‌. ಕೆ. ಸುರೇಶ್ ಹಾಜರಾಗಿದ್ದಾರೆ.

ಇಡಿ ಕಚೇರಿಗೆ ಹಾಜರಾಗುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ ಅವರು, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವ ಆಧಾರದಲ್ಲಿ ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇಡಿ ನೋಟಿಸ್ ರಾಜಕೀಯ ಷಡ್ಯಂತ್ರ ಎಂಬ ಬಗ್ಗೆ ಮಾಹಿತಿ ಇಲ್ಲ. ವಿಚಾರಣೆ ಎದುರಿಸಿದಾಗ ಸತ್ಯ ತಿಳಿಯುತ್ತದೆ. ನನ್ನ ಜತೆಯಲ್ಲಿ ವಕೀಲರು ಇರುತ್ತಾರೆ ಎಂದರು.

ಇಡಿ ತನ್ನ ವ್ಯಾಪ್ತಿ ಮೀರಿ ವರ್ತಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಅನೇಕ‌ ಬಾರಿ ಹೇಳಿವೆ. ಆದರೂ ಈ ಇಲಖೆಗಳು ಎಚ್ಚೆತ್ತುಕೊಂಡಿಲ್ಲ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದೇ ಅರ್ಥವಾಗುತ್ತದೆ. ತಮ್ಮ ವ್ಯಾಪ್ತಿಗಳನ್ನು ಮೀರಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವುದನ್ನು ನೋಡಿದರೆ ಸರ್ಕಾರವೊಂದರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎನ್ನುವುದು ಸ್ಪಷ್ಟವಗುತ್ತದೆ ಎಂದು ತಿಳಿಸಿದರು.

ಐಶ್ವರ್ಯ ಗೌಡ ಹಾಗೂ ನಮ್ಮ ನಡುವೆ ಯಾವುದೇ ವಹಿವಾಟು ನಡೆದಿಲ್ಲ, ಹಣಕಾಸು ಸಂಬಂಧವೂ ಇಲ್ಲ. ಆಕೆ ನನ್ನನ್ನು ಕೆಲವು ಬಾರಿ ಕಚೇರಿಯಲ್ಲಿ ಭೇಟಿ ಮಾಡಿ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನನ್ನ ಕ್ಷೇತ್ರದ ನಿವಾಸಿ ಎಂಬ ಕಾರಣಕ್ಕೆ ಅವರು ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಇಷ್ಟು ಬಿಟ್ಟರೆ ಬೇರೆ ಯಾವ ಸಂಬಂಧವೂ ಇಲ್ಲ. ಈ ಎಲ್ಲ ವಿಷಯಗಳನ್ನು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು.

More articles

Latest article