ವಿಜಯಪುರ: ವಿಜಯಪುರ ನಗರದ ವೈದ್ಯ ದಂಪತಿ ಪುತ್ರ ಮಂಗಳೂರು ವಳಚಿಲ್ ನ ಎಕ್ಸ್ಫರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ ಅವರು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರವೇಶ ಪರೀಕ್ಷೆ ‘ನೀಟ್’ನಲ್ಲಿ ರಾಷ್ಟ್ರಕ್ಕೆ 17ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ‘ಸಂಜೀವಿನಿ’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿ ಡಾ. ಸಿದ್ದಪ್ಪ ಸೊನ್ನದ ಮತ್ತು ಡಾ. ಮೀನಾಕ್ಷಿ ಸೊನ್ನದ ಅವರ ಪುತ್ರ ನಿಖಿಲ್. ಇವರು 720 ಅಂಕಗಳಿಗೆ 670 ಅಂಕ ಗಳಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಶೇ 98.3 ಅಂಕ ಗಳಿಸಿದ್ದಾರೆ.
ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ನಿಖಿಲ್ ನೀಟ್ನಲ್ಲಿ ಉತ್ತಮ ಅಂಕದ ನಿರೀಕ್ಷೆ ಇತ್ತು. ಆದರೆ, ರಾಷ್ಟ್ರಮಟ್ಟದಲ್ಲಿ 17ನೇ ಸ್ಥಾನ ಬರುತ್ತದೆ ಎಂದು ಊಹಿಸಿರಲಿಲ್ಲ. ತುಂಬಾ ಸೋತೋಷವಾಗಿದೆ. ಏಮ್ಸ್ನಲ್ಲಿ ವೈದ್ಯಕೀಯ ಪದವಿ ಓದುವ ಬಯಕೆ ಇದೆ. ನರರೋಗ ಶಸ್ತ್ರಚಿಕಿತ್ಸಕ ಆಗಬೇಕು ಎಂಬ ಆಶಯವೂ ಇದೆ ಎಂದು ತಿಳಿಸಿದ್ದಾರೆ.
‘‘ಶ್ರಮಯೇವ ಜಯತೇ’ ಎಂಬುದು ಏಕ್ಸ್ಫರ್ಟ್ ಕಾಲೇಜಿನ ಧ್ಯೇಯ ವಾಕ್ಯವಾಗಿದ್ದು ಈ ವಾಕ್ಯವೇ ನನಗೆ ಪ್ರೇರೇಪಣೆ ನೀಡಿತು. ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ತರಗತಿ ಮತ್ತು ನೀಟ್ ತರಬೇತಿ ನೀಡಲಾಗುತ್ತಿತ್ತು. ಕಾಲೇಜಿನ ಪ್ರಾಧ್ಯಾಪಕರು ನಮ್ಮ ಸಂಶಯಗಳನ್ನು ಬಗೆಹರಿಸುತ್ತಿದ್ದರು ಎಂದರು.
ಕಾಲೇಜಿನಲ್ಲಿ ವಾರಕ್ಕೊಮ್ಮೆ ನೀಟ್ ಪರೀಕ್ಷೆ ನಡೆಸಲಾಗುತ್ತಿತ್ತು. ಒಮ್ಮೊಮ್ಮೆ ಕಡಿಮೆ ಅಂಕ ಬಂದಾಗ ನೋವಾಗುತ್ತಿತ್ತು. ಆಗ ಉಪನ್ಯಾಸಕರು ಮತ್ತು ಸ್ನೇಹಿತರು ಮುಂದಿನ ಪರೀಕ್ಷೆಗೆ ಉತ್ತೇಜಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ನನ್ನ ತಂದೆ, ತಾಯಿ ವೈದ್ಯರಾಗಿರುವುದರಿಂದ ನನಗೂ ವೈದ್ಯನಾಗಬೇಕು ಎಂಬ ಆಶಯ ಇದೆ. ಇದಕ್ಕೆ ತಂದೆ, ತಾಯಿ ಅವರ ಪ್ರೋತ್ಸಾಹ ಕೂಡ ಇದೆ. ಭವಿಷ್ಯದಲ್ಲಿ ನಮ್ಮ ಆಸ್ಪತ್ರೆಯಲ್ಲೇ ವೈದ್ಯನಾಗಿ ಕಾರ್ಯನಿರ್ವಹಿಸುವ ಉದ್ದೇಶವಿದೆ ಎಂದರು.
ಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ 8 ನೇ ರ್ಯಾಂಕ್ ಬಂದಿದೆ. ಜೆಇಇ ಮೇನ್ಸ್ನಲ್ಲಿ 8000ನೇ ರ್ಯಾಂಕ್ ಬಂದಿದೆ. ಆದರೆ, ಜೆಇಇ ಅಡ್ವಾನ್ಸ್ ಬರೆದಿಲ್ಲ. ವಿಜಯಪುರ ಸೈನಿಕ್ ಶಾಲೆಯಲ್ಲಿ ಓದಿದ್ದು, ಎಸ್ಎಸ್ಎಲ್ಸಿಯಲ್ಲಿ ಶೇ 93 ಅಂಕ ಬಂದಿತ್ತು ಎಂದು ತಿಳಿಸಿದರು.