ನವದೆಹಲಿ: ದ್ವಿಚಕ್ರ ವಾಹನಗಳು, ಕಾರುಗಳ ಮಾರಾಟದಲ್ಲಿ ಕುಸಿತ ಹಾಗೂ ಮೊಬೈಲ್ ಮಾರುಕಟ್ಟೆಯಲ್ಲಿನ ಕುಸಿತವನ್ನು ಉಲ್ಲೇಖಿಸಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಘಟನೆಗಳನ್ನು ವೈಭವೀಕರಿಸುವ ರಾಜಕೀಯದ ಬದಲು, ಜನರ ವಾಸ್ತವ ಜೀವನಕ್ಕೆ ಹತ್ತಿರವಿರುವ ರಾಜಕಾರಣ ದೇಶಕ್ಕೆ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿ ಆಯ್ದ ಕೆಲವು ಬಂಡವಾಳಶಾಹಿಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯರಿಗೂ ಕೆಲಸ ಮಾಡುವ ಆರ್ಥಿಕತೆ ಬೇಕು ಎಂದು ಹೇಳಿದರು.
ಅಂಕಿ ಅಂಶಗಳು ಸತ್ಯವನ್ನು ಹೇಳುತ್ತಿವೆ. ಕಳೆದ ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ. 17ರಷ್ಟು, ಕಾರುಗಳ ಮಾರಾಟದಲ್ಲಿ ಶೇ 8.6ರಷ್ಟು ಕುಸಿತವಾಗಿದೆ. ಮೊಬೈಲ್ ಮಾರುಕಟ್ಟೆ ಶೇ. 7ರಷ್ಟು ಕುಸಿದಿದೆ. ಮತ್ತೊಂದೆಡೆ, ವೆಚ್ಚ ಮತ್ತು ಸಾಲ ಎರಡೂ ನಿರಂತರವಾಗಿ ಹೆಚ್ಚುತ್ತಿವೆ. ಮನೆ ಬಾಡಿಗೆ, ಶೈಕ್ಷಣಿಕ ವೆಚ್ಚ ಬಹುತೇಕ ಎಲ್ಲವೂ ದುಬಾರಿಯಾಗಿವೆ ಎಂದು ಅಂಕಿಅಂಶಗಳನ್ನು ತೆರೆದಿಟ್ಟಿದ್ದಾರೆ. ಇವು ಕೇವಲ ಅಂಕಿಅಂಶಗಳಲ್ಲ, ಪ್ರತಿಯೊಬ್ಬ ಭಾರತೀಯನು ಅನುಭವಿಸುತ್ತಿರುವ ಆರ್ಥಿಕ ಒತ್ತಡದ ವಾಸ್ತವಿಕತೆ ಎಂದು ಒತ್ತಿ ಹೇಳಿದ್ದಾರೆ.
ನಮಗೆ ಬೇಕಿರುವುದು ಘಟನೆಗಳನ್ನು ವೈಭವೀಕರಿಸುವ ರಾಜಕೀಯವಲ್ಲ, ಪ್ರಶ್ನೆಗಳನ್ನು ಕೇಳುವ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸುವ ರಾಜಕಾರಣ ಬೇಕು ಎಂದು ರಾಹುಲ್ ಗಾಂಧಿ ಪ್ರತಪಾದಿಸಿದ್ದಾರೆ..