ಮೈಸೂರು: ಬೆಂಗಳೂರಿನಲ್ಲಿ ಆರ್ ಸಿ ಬಿ ತಂಡದ ಆಟಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಮತ್ತು ವಿಜಯೋತ್ಸವ ಸಂದರ್ಭದಲ್ಲಿ ತಪ್ಪುಗಳಾಗಿವೆ. ಸರ್ಕಾರವೂ ಲೋಪವನ್ನು ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಇಲ್ಲಿ ಮಾತನಾಡಿದ ಅವರು, ನಿರೀಕ್ಷೆಗಿಂತ ಅತಿ ಹೆಚ್ಚು ಜನ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದ್ದು ಯಾವುದೇ ತಪ್ಪಿಲ್ಲ. ಕಾರ್ಯಕ್ರಮ ನಡೆಸಲು ಸರ್ಕಾರದ ಮೇಲೆ ಒತ್ತಡ ಇದ್ದಿದ್ದರಿಂದಲೇ ಸಮಾರಂಭವನ್ನು ಆಯೋಜಿಸಲಾಗಿತ್ತು ಎಂದರು.
ವಿಧಾನಸೌಧದ ಮುಂದೆ ಜರುಗಿದ ಕಾರ್ಯಕ್ರಮದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಅಲ್ಲಿಗೆ ಅತಿ ಹೆಚ್ಚು ಜನ ಸೇರಿರಲಿಲ್ಲ. ಸಚಿವರು, ಅವರ ಸಂಬಂಧಿಕರು ಹಾಗೂ ಕುಟುಂಬದವರು ಬಂದಿರಬಹುದು. ಅಲ್ಲಿ ಯಾವ ಲೋಪವೂ ಉಂಟಾಗಿಲ್ಲ. ಜನರು ಕ್ರಿಕೆಟಿಗರನ್ನು ನೋಡಲು ಸ್ಟೇಡಿಯಂಗೆ ಹೋದರು. ಅಲ್ಲಿ ಸಮಸ್ಯೆಯಾಗಿದೆ ಎಂದರು.
ಆರ್ ಸಿ ಬಿ ತಂಡಕ್ಕೆ ಸನ್ಮಾನ ಸಮಾರಂಭ ಆಯೋಜಿಸಬೇಕು ಎಂದು ಹೇಳುತ್ತಿದ್ದ ಬಿಜೆಪಿ ನಾಯಕರು ಈಗ ನಾಟಕ ಮಾಡುತ್ತಿದ್ದಾರೆ. ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ತಪ್ಪಾಗಿರುವುದು ಸತ್ಯ.. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲೆಂದೇ ಜಿಲ್ಲಾದಿಕಾರಿಗಳ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ಇವರೇ ತಪ್ಪಿತಸ್ಥರೆಂದು ಈಗಲೇ ಹೇಳಲು ಸಾಧ್ಯವಿಲ್ಲ. ಬಹುಶಃ ರೋಡ್ ಶೋ ನಡೆಸಿದ್ದರೆ ಕ್ರಿಕೆಟಿಗರ ಭದ್ರತೆಗೆ ತೊಂದರೆ ಆಗುತ್ತಿತ್ತು. ಹೀಗಾಗಿ ನಡೆಸಲಿಲ್ಲ. ಎರಡೆರಡು ಕಡೆ ಕಾರ್ಯಕ್ರಮ ಮಾಡಿದ್ದರಿಂದ ದುರಂತ ಸಂಭವಿಸಿದೆ ಎನ್ನುವುದೂ ಸರಿಯಲ್ಲ ಎಂದು ಯತೀಂದ್ರ ಪ್ರತಿಪಾದಿಸಿದರು.