ಅಂಕಿತಾ ಭಂಡಾರಿ ಕೊಲೆ ಪ್ರಕರಣ: ಬಿಜೆಪಿ ಮುಖಂಡನ ಪುತ್ರ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

Most read

ಡೆಹರಾಡೂನ್: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಉತ್ತರಾಖಂಡದ ರೆಸಾರ್ಟ್‌ ವೊಂದರ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರೊಬ್ಬರ ಪುತ್ರ ಸೇರಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉತ್ತರಾಖಂಡದ ಪೌರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಪೌರಿ ಗರ್‌ವಾಲ್ ಜಿಲ್ಲೆಯ ವನತಾರಾ ರೆಸಾರ್ಟ್‌ ನಲ್ಲಿ 19 ವರ್ಷದ ಅಂಕಿತಾ ಭಂಡಾರಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು. 2022ರ ಸೆಪ್ಟೆಂಬರ್ 18 ರಂದು ರೆಸಾರ್ಟ್ ಬಳಿಯ ಕಾಲುವೆಯೊಂದರಲ್ಲಿ ಅಂಕಿತಾ ಮೃತದೇಹ ‍ಪೊಲೀಸರಿಗೆ ಸಿಕ್ಕಿತ್ತು.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೌರಿ ಜಿಲ್ಲಾ ಪೊಲೀಸರು, ವನತಾರಾ ರೆಸಾರ್ಟ್ ಮಾಲೀಕ ಪುಲಕೀತ್ ಆರ್ಯ, ಸಿಬ್ಬಂದಿ ಹಾಗೂ ಆತನ ಸ್ನೇಹಿತರಾದ ಸೌರಭ್ ಭಾಸ್ಕರ್ ಹಾಗೂ ಅಂಕಿತ್ ಗುಪ್ತಾ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ದ್ವೇಷದ ಕಾರಣಕ್ಕೆ ಅಂಕಿತಾಳನ್ನು ಕೊಲೆ ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಮೂವರ ವಿರುದ್ಧ ಆರೋಪ ಸಾಬೀತಾಗಿದ್ದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶೆ ರೀನಾ ನೇಗಿ ಆದೇಶ ಹೊರಡಿಸಿದ್ದಾರೆ.

ಪುಲಕೀತ್ ಆರ್ಯ ಉತ್ತರಾಖಂಡದ ಬಿಜೆಪಿ ನಾಯಕನಾಗಿದ್ದ ವಿನೋದ್ ಆರ್ಯ ಅವರ ಪುತ್ರನಾಗಿದ್ದಾನೆ. ಅಂಕಿತಾ ಕೊಲೆ ನಂತರ ವಿನೋದ್ ಆರ್ಯ ಅವರನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು. ಅಂಕಿತಾ ಭಂಡಾರಿ ಕೊಲೆ ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದ್ದರು.

More articles

Latest article