ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಸಮೀಪ ದೆಶದ ಗಡಿಯೊಳಗೆ ನುಸುಳಲು ಯತ್ನಿಸಿದ್ದ 7 ಮಂದಿ ಉಗ್ರರನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. ಗುರುವಾರ ತಡರಾತ್ರಿ ಸಾಂಬಾ ಸೆಕ್ಟರ್ ಹತ್ತಿರ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರ ಚಲನವಲನವನ್ನು ಗಮನಿಸಿ ಸೇನೆಯು ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಉಗ್ರರು ಹಾಗೂ ಸೇನಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಗುಂಡಿನ ಚಕಮಕಿಯ ವಿಡಿಯೊವನ್ನು ಬಿಎಸ್ಎಫ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. ದೇಶದ ಪಶ್ಚಿಮ ಭಾಗದಲ್ಲಿರುವ ಭಾರತೀಯ ವಾಯುಪಡೆಯ 13 ಸೇರಿದಂತೆ ಒಟ್ಟು 15 ಸೇನಾ ನೆಲೆಗಳ ಮೇಲೆ ಡೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿ ಧ್ವಂಸಗೊಳಿಸುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿವೆ. ಪಾಕ್ ಕ್ರಿಯೆಗೆ ಪ್ರತಿದಾಳಿಯ ಮೂಲಕ ಲಾಹೋರ್ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸಲಾಗಿದೆ’ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ಪಾಕ್ ದಾಳಿಗೆ ಮನೆಗಳಿಗೆ ಹಾನಿ:
ಕಳೆದ ರಾತ್ರಿ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಡೆಸಿದ ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಮನೆಗಳಿಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.
ಈ ದಾಳಿ ಕುರಿತು ಮಾತನಾಡಿರುವ ಸ್ಥಳೀಯರು, ಪಾಕಿಸ್ತಾನ ನಡೆಸಿರುವ ಶೆಲ್ ದಾಳಿಯಿಂದಾಗಿ ಸುಮಾರು 20 ಮನೆಗಳಿಗೆ ಹಾನಿಯಾಗಿದೆ. ನನ್ನ ಇಡೀ ಕುಟುಂಬ ರಾತ್ರಿಯಿಡೀ ಒಂದು ಕೋಣೆಯಲ್ಲಿ ಕುಳಿತು ಕಳೆದಿದೆ. ನಮಗೆ ಇಲ್ಲಿ ಶಾಂತಿ ನೆಲೆಸುವುಸು ಮುಖ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಘಟನೆಯಲ್ಲಿ ಕೆಲವು ನಿವಾಸಿಗಳು ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇಂದು ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ನಾವು ಭಾರತೀಯ ಸೇನೆಯೊಂದಿಗೆ ನಿಲ್ಲುತ್ತೇವೆ. ಭಾರತೀಯ ಸೇನೆ ಪಾಕ್ ಗೆ ತಕ್ಕ ಎದಿರೇಟು ನೀಡಬೇಕು ಎಂದು ಕಾಶ್ಮೀರಿ ಜನಗಳು ಅಭಿಪ್ರಾಯಪಟ್ಟಿದ್ದಾರೆ.