ಕ್ರೀಡಾ ಸಮಿತಿ ಕ್ರೀಡಾ ಪ್ರಾಧಿಕಾರವಾಗಿ ಬದಲಾದರೂ ಕಾಣದ ಪ್ರಗತಿ: ಸಿಎಂ ತರಾಟೆ

Most read

ಬೆಂಗಳೂರು: ಕ್ರೀಡಾ ಸಮಿತಿ ಕ್ರೀಡಾ ಪ್ರಾಧಿಕಾರವಾಗಿ ಬದಲಾದರೂ ಪ್ರಗತಿ ಕಾಣದಿರುವುದಕ್ಕೆ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡರು.

ಪ್ರಾಧಿಕಾರ ಮಾಡಿದ ಉದ್ದೇಶವೇ ಈಡೇರದಿದ್ದರೆ ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದ ಸಿಎಂ, ನಿಗಧಿತವಾಗಿ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಕಾರ್ಯ ಚಟುವಟಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅದಕ್ಕಿಂತ ಉತ್ತಮ ರೀತಿಯಲ್ಲಿ ನಮ್ಮ ಮಿತಿಯೊಳಗೆ ಕ್ರೀಡಾ ಕಾರ್ಯ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕ್ರಮ ವಹಿಸಲು ಸೂಚಿಸಿದರು.

ಮುಂದಿನ ಐದಾರು ತಿಂಗಳಲ್ಲಿ, ದಸರಾ ಕ್ರೀಡಾಕೂಟ ಆರಂಭವಾಗುವುದರೊಳಗೆ ಪ್ರಾಧಿಕಾರ ಕ್ರಿಯಾಶೀಲ ಆಗಬೇಕು. 176 ತರಬೇತುದಾರರ ನೇಮಕಾತಿಗೆ ನಾನೇ ಸೂಚಿಸಿ ಒಂದು ವರ್ಷ ಆಗಿದೆ. ಆದರೂ ನೇಮಕಾತಿ ಪ್ರಕ್ರಿಯೆ ಚುರುಕು ಆಗದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಪ್ರತೀ ಜಿಲ್ಲೆಯಲ್ಲೂ ಉಪ ನಿರ್ದೇಶಕರು ಕಡ್ಡಾಯವಾಗಿ ಇರಬೇಕು ಎನ್ನುವ ಸೂಚನೆ ನೀಡಿದರು. ಪ್ರತೀ ವರ್ಷ ಪ್ರಾಧಿಕಾರದ ಸಭೆ, ಪ್ರತೀ ವರ್ಷ ಆಡಿಟ್ ಆಗಬೇಕು. ಪ್ರತೀ ವರ್ಷ ನೇಮಕಾತಿ ನಡೆಯಬೇಕು. ತಪ್ಪಿದರೆ ಸಹಿಸಲ್ಲ ಎನ್ನುವ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸಲು ಅನುಧಾನ ನಿಗಧಿ ಪಡಿಸಲು ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟ ಸಂಘಟಿಸುವ ಮೊದಲು ಕನಿಷ್ಠ 15 ರಾಷ್ಟ್ರಗಳು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಸರಿಯಾದ ಗೈಡ್ ಲೈನ್ಸ್ ಗಳನ್ನು ಸಿದ್ಧಪಡಿಸಿ ಎನ್ನುವ ಸೂಚನೆ ನೀಡಿದರು.
ಕೇವಲ ಲೆಟರ್ ಹೆಡ್ ಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟ ಎಂದು ಬರುವ ಸಂಸ್ಥೆಗಳಿಗೆ ಕಡಿವಾಣ ಹಾಕಿ ಪ್ರಾಮಾಣಿಕವಾಗಿ ಕ್ರೀಡಾಕೂಟ ನಡೆಸುವವರಿಗೆ ಪ್ರೋತ್ಸಾಹ ನೀಡಬೇಕು ಎನ್ನುವ ಸೂಚನೆ ನೀಡಿದರು. ಕಂಬಳವನ್ನು ಗ್ರಾಮೀಣ ಕ್ರೀಡೆ ಎಂದು ಮಾನ್ಯತೆ ನೀಡಿ ಪ್ರೋತ್ಸಾಹ ನೀಡುವ ಬಗ್ಗೆ ಚರ್ಚಿಸಲಾಯಿತು.

ಕ್ರೀಡಾಕೂಟಗಳಿಗೆ ಅನುದಾನ ನೀಡುವುದು ಆನ್ ಲೈನ್ ನಲ್ಲಿ ದಾಖಲಾಗಬೇಕು. ಕ್ರೀಡಾಕೂಟ ಮುಗಿದ ಬರುವವರಿಗೆ ಅವಕಾಶ ಇರಬಾರದು ಎನ್ನುವ ಬಗ್ಗೆ ಚರ್ಚಿಸಲಾಯಿತು. ಕಂಠೀರವ ಕ್ರೀಡಾಂಗಣ ಹವಾ ನಿಯಂತ್ರಿತ ವ್ಯವಸ್ಥೆ ಶೀರ್ಘ್ರದಲ್ಲಿ ಜಾರಿಗೊಳಿಸುವಂತೆ ಸೂಚನೆ ನೀಡಿದರು. ಕಂಠೀರವ ಕ್ರೀಡಾಂಗಣ ನಿರ್ಮಾಣವಾಗಿ 29 ವರ್ಷಗಳಾಗಿರುವುದರಿಂದ ಪ್ರೇಕ್ಷಕರ ಸುರಕ್ಷತೆಗೆ ಗ್ಯಾಲರಿಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕಂಠೀರವ ಕ್ರೀಡಾಂಗಣದ ಜಿಮ್, ಶೌಚಾಲಯ, ಟ್ರಾಕ್ ಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.

ಕ್ರೀಡಾಪಟುಗಳಿಗೆ ಅಗತ್ಯವಾದಷ್ಟು ಪೌಷ್ಠಿಕಾಂಶ ಮತ್ತು ಪ್ರೋಟೀನ್ ಯುಕ್ತ ಆಹಾರ ಕೊಡಬೇಕು. ಪದೇ ಪದೇ ಪರಿಶೀಲನೆ ನಡೆಸಿ, ಲೋಪ ಕಂಡರೆ ವಾರ್ಡನ್ ಗಳ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ , ಕ್ರೀಡಾ ಹಾಸ್ಟೆಲ್ ಗಳಿಗೆ surprise visit ಮಾಡಿ , ಅಲ್ಲೇ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿ ವರದಿ ನೀಡಲು ಸಿಎಂ ಸೂಚನೆ ನೀಡಿದರು.

ಆನ್ ಲೈನ್ ಬಂದ DCM

ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನೆ ನಡೆಯುವ ವೇಳೆ ಚನ್ನಪಟ್ಟಣದಿಂದ ಆನ್ ಲೈನ್ ಮೂಲಕ ವಿಡಿಯೊ ಕಾನ್ಪರೆನ್ಸ್ ಗೆ ಬಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣ ಕ್ರೀಡಾಂಗಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕಾಗಿ ಸೂಚಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

More articles

Latest article